ತುಂಬಿ ತುಳುಕುತ್ತಿದೆ ಮಂಗಳೂರು ಜೈಲು, ಖೈದಿಗಳಿಗೆ ಜಾಗ ಎಲ್ಲಿದೆ?
ಹಲವು ಕಾರಣಗಳಿಗೆ ಸದಾ ಸುದ್ದಿಯಲ್ಲಿರುವ ಮಂಗಳೂರು ಜೈಲು ಈ ಬಾರಿ ಮತ್ತೆ ಸುದ್ದಿ ಕೇಂದ್ರಕ್ಕೆ ಬಂದಿದೆ. ಮಂಗಳೂರು ಜೈಲು ತುಂಬಿ ತುಳುಕುತ್ತಿದ್ದು, ಹೊಸ ಖೈದಿಗಳಿಗೆ ಜಾಗವಿಲ್ಲದಂತಾಗಿದೆ.
ಮಂಗಳೂರು, ಏಪ್ರಿಲ್ 12: ಮಂಗಳೂರು ಜೈಲು ಯಾವಾಗಲೂ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿ ಮಾಡುತ್ತಾ ಇರುತ್ತದೆ. ಮೊದಲು ಗಾಂಜಾ ವಿಚಾರದಲ್ಲಿ ಸುದ್ದಿ ಮಾಡಿತ್ತು. ನಂತರ ಖೈದಿಗಳ ಪರಾರಿ, ಸಿಬ್ಬಂದಿಗಳ ಕೊರತೆ ಹೀಗೆ ನಾನಾ ರೀತಿಯಲ್ಲಿ ಕಾರಾಗೃಹ ಸುದ್ದಿ ಮಾಡಿದೆ. ಈಗಿರುವ ಸುದ್ದಿಯೇನೆಂದರೆ ಮಂಗಳೂರು ಜೈಲು ತುಂಬಿ ತುಳುಕುತ್ತಿದೆ.
210 ಮಂದಿ ಖೈದಿಗಳನ್ನು ಇರಿಸಬಹುದಾದ ಮಂಗಳೂರು ಕೇಂದ್ರ ಕಾರಾಗೃಹದಲ್ಲೀಗ ಸಾಮರ್ಥ್ಯಕ್ಕೂ ಮಿಕ್ಕಿ ಖೈದಿಗಳನ್ನು ಕುರಿಗಳಂತೆ ತುಂಬಿಸುವ ಮೂಲಕ ಇಡೀ ಜೈಲು ಹೌಸ್ ಫುಲ್ ಆಗಿದೆ. ಸದ್ಯ 424 ಮಂದಿ ಖೈದಿಗಳು ಜೈಲಿನಲ್ಲಿರುವ ಕಾರಣ ಭದ್ರತೆಯ ವಿಚಾರದಲ್ಲಿಯೂ ಆತಂಕ ಎದುರಾಗಿದೆ.[ಸಚಿವ ಖಾದರ್ ಅಭಿಮಾನಿ, ಪಿಎಫ್ಐ ಸಂಘಟಕರ ಮಧ್ಯೆ ಸೋಷಿಯಲ್ ವಾರ್]
ಇನ್ನು ಇದರಿಂದಾಗಿ ಖೈದಿಗಳ ಚಲನ ವಲನಗಳ ಮೇಲೆ ವೈಯಕ್ತಿಕವಾಗಿ ನಿಗಾ ಇರಿಸಲಾಗದಂತಹ ಒತ್ತಡದ ಸ್ಥಿತಿಯನ್ನು ಇಲ್ಲಿನ ಸಿಬ್ಬಂದಿ ಅನುಭವಿಸುತ್ತಿದ್ದಾರೆ. ಈ ಮಧ್ಯೆ ಗಂಭೀರ ಸ್ವರೂಪದ ಅಪರಾಧ ಎಸಗಿದವರು ಮತ್ತು ಕೋಮು ಸಂಬಂಧಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾದ ಖೈದಿಗಳ ಸಂಖ್ಯೆ ಇಲ್ಲಿ ಹೆಚ್ಚಿರುವುದು ಇಲಾಖೆಯ ಪಾಲಿಗೆ ತಲೆನೋವಾಗಿ ಪರಿಣಮಿಸಿದೆ.
ಸೂಕ್ಷ್ಮ ಕಾರಾಗೃಹ
ರಾಜ್ಯದ ಅತ್ಯಂತ ಸೂಕ್ಷ್ಮ ಕಾರಾಗೃಹ ಎಂಬ ಹಣೆಪಟ್ಟಿ ಅಂಟಿಸಿಕೊಂಡಿರುವ ಮಂಗಳೂರು ಜಿಲ್ಲಾ ಕಾರಾಗೃಹದ ನಿರ್ವಹಣೆ ಕಾರಾಗೃಹ ಇಲಾಖೆಯ ಪಾಲಿಗೆ ಸವಾಲಾಗಿ ಪರಿಣಮಿಸಿದೆ.
2015ರ ನವೆಂಬರ್ 2ರಂದು ಇಲ್ಲಿ ವಿಚಾರಣಾಧೀನ ಖೈದಿಗಳಾಗಿದ್ದ ಮಾಡೂರು ಯೂಸುಫ್ ಅಲಿಯಾಸ್ ಇಸಬು ಮತ್ತು ಗಣೇಶ್ ಶೆಟ್ಟಿ ಎಂಬವರನ್ನು ಜೈಲಿನ ಒಳಗಡೆಯೇ ಮತ್ತೊಂದು ಖೈದಿಗಳ ಗುಂಪು ಹತ್ಯೆ ಮಾಡಿತ್ತು. ಈ ಪ್ರಕರಣ ಜೈಲಿನ ಭದ್ರತೆ ಹೆಚ್ಚಳಕ್ಕೆ ಕಾರಣವಾಗಿತ್ತು. ಅಲ್ಲಿಯವರೆಗೂ ಜೈಲಿನ ಭದ್ರತೆಗೆ ಕಾರಾಗೃಹ ಇಲಾಖೆಯ ಸಿಬ್ಬಂದಿಯಷ್ಟೇ ಇದ್ದರು.
ಭದ್ರತೆ ಭೇದಿಸಿದ್ದ ಜಿನ್ನಪ್ಪ ಪರವ
ಆ ಬಳಿಕ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆಯ (ಕೆಐಎಸ್ಎಫ್) ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಆದರೆ ಎರಡು ಹಂತದ ಭದ್ರತೆಯನ್ನೂ ಭೇದಿಸಿ ಜಿನ್ನಪ್ಪ ಪರವ ಎಂಬ ವಿಚಾರಣಾಧೀನ ಖೈದಿ ಗೋಡೆ ಹಾರಿ ತಪ್ಪಿಸಿಕೊಂಡಿರುವುದು ಕಾರಾಗೃಹದ ಭದ್ರತೆ ಕುರಿತು ಪ್ರಶ್ನೆ ಏಳುವಂತೆ ಮಾಡಿತ್ತು.[2008ರ ಉಗ್ರ ಚಟುವಟಿಕೆ ಪ್ರಕರಣ: ಮೂವರಿಗೆ ಜೀವಾವಧಿ ಶಿಕ್ಷೆ]
ಜೈಲು ಸಿಬ್ಬಂದಿಯ ಕೊರತೆ
ಮಂಗಳೂರು ಜಿಲ್ಲಾ ಕಾರಾಗೃಹಕ್ಕೆ 250 ಖೈದಿಗಳ ಸಾಮರ್ಥ್ಯದ ಆಧಾರದಲ್ಲಿ 40 ಹುದ್ದೆಗಳ ಮಂಜೂರಾತಿ ಇದೆ. ಜೈಲರ್ ಗಳು ಸೇರಿದಂತೆ 20 ಹುದ್ದೆಗಳು ಖಾಲಿ ಇವೆ. ಅಧಿಕಾರಿಗಳು, ಸಿಬ್ಬಂದಿ ಸೇರಿದಂತೆ 40 ಜನರ ಕೆಲಸವನ್ನು 20 ಮಂದಿ ಮಾಡುತ್ತಿದ್ದಾರೆ.
25 ಸಿಬ್ಬಂದಿಗಳ ಬೇಡಿಕೆ
425 ಖೈದಿಗಳನ್ನು ಇರಿಸಿಕೊಳ್ಳಲು 75ಕ್ಕಿಂತಲೂ ಹೆಚ್ಚು ಸಿಬ್ಬಂದಿಯ ಅಗತ್ಯವಿದೆ ಎನ್ನುತ್ತಾರೆ ನಿವೃತ್ತ ಹಿರಿಯ ಅಧಿಕಾರಿಯೊಬ್ಬರು. ದೀರ್ಘ ಕಾಲದಿಂದಲೂ ಈ ಕಾರಾಗೃಹದಲ್ಲಿ ಸಿಬ್ಬಂದಿ ಕೊರತೆ ಕಾಡುತ್ತಿದೆ. ಈ ಕಾರಣದಿಂದಾಗಿಯೇ ಆಗಾಗ ಇಲ್ಲಿ ದುರ್ಘಟನೆಗಳು ಸಂಭವಿಸುತ್ತಿವೆ ಎಂದು ಕಾರಾಗೃಹ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.[ಸೌಜನ್ಯಾ ಕೊಲೆ ಪ್ರಕರಣ: ಮರು ತನಿಖೆಗೆ ಹೈಕೋರ್ಟ್ ತಡೆ]
ಭದ್ರತೆಗೆ ಕೇವಲ 16 ಜನ
ಈ ಕಾರಾಗೃಹದ ಭದ್ರತೆಗೆ ಕೆಐಎಸ್ಎಫ್ ನ 50 ಸಿಬ್ಬಂದಿಯನ್ನು ನಿಯೋಜಿಸುವುದಾಗಿ ಕಾರಾಗೃಹ ಇಲಾಖೆಯ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರಾಗಿರುವ ಕಮಲ್ ಪಂಥ್ 2015ರ ನವೆಂಬರ್ ನಲ್ಲಿ ಪ್ರಕಟಿಸಿದ್ದರು. ಆದರೆ ಸದ್ಯ 26 ಸಿಬ್ಬಂದಿಯನ್ನು ಮಾತ್ರ ನಿಯೋಜನೆ ಮಾಡಲಾಗಿದೆ. ಅವರಲ್ಲಿ 7 ಮಂದಿ ಬೇರೆ ಉದ್ಯೋಗಗಳಿಗೆ ಆಯ್ಕೆಯಾಗಿದ್ದು, ಕಾರಾಗೃಹದ ಭದ್ರತಾ ಕೆಲಸದಿಂದ ಬಿಡುಗಡೆಯಾಗಿದ್ದಾರೆ. ಇದೀಗ 19 ಸಿಬ್ಬಂದಿ ಮಾತ್ರ ಕಾರಾಗೃಹಕ್ಕೆ ಭದ್ರತೆ ಒದಗಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.