ಮಂಗಳೂರು ಕಾರಾಗೃಹದಲ್ಲಿ ಮಿನಿ ಅಂಡರ್ ವರ್ಲ್ಡ್...!
ಮಂಗಳೂರು, ಸೆಪ್ಟೆಂಬರ್ 23 : ಈ ಕಾರಾಗೃಹದಲ್ಲಿ ಕೈದಿಗಳ ನಡುವೆ ಪ್ರೊಟೆಕ್ಷನ್ ಗಾಗಿ ಹಫ್ತಾ ವಸೂಲಿ ನಡೆಯುತ್ತದೆ. ಹಫ್ತಾ ನೀಡದಿದ್ದರೆ ಮಾರಣಾಂತಿಕ ಹಲ್ಲೆ ಹಾಗೂ ಗಾಂಜಾ ಸಾಗಾಟ ಎಗ್ಗಿಲ್ಲದೆ ನಡೆಯುತ್ತಿವೆ. ಇದು ಯಾವುದೇ ಫಿಲ್ಮ್ ಕತೆಯಲ್ಲಿ ಮೂಡಿಬರುವ ಸನ್ನೆವೇಶಗಳಲ್ಲ. ಇಂತಹ ಘಟನೆಗಳು ನಡೆಯುತ್ತಿರುವುದು ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿ .
ಹೌದು..ಮಂಗಳೂರಿನ ಕಾರಾಗೃಹ ದೇಶದಲ್ಲೆ ಕುಖ್ಯಾತಿ ಪಡೆದಿದೆ. ಹಲ್ಲೆ, ಹತ್ಯೆ, ಗಾಂಜಾ ಸಾಗಾಟ, ಭೂಗತ ಜಗತ್ತಿನ ಸಂಪರ್ಕ ಗಳಿಂದಾಗಿ ಸದಾ ಸುದ್ದಿಯಲ್ಲೇ ಇರುತ್ತದೆ. ಇಲ್ಲಿ ನಡೆಯುತ್ತಿರುವ ನಿರಂತರ ಹಲ್ಲೆ ಪ್ರಕರಣಗಳ ಕಾರಣಗಳನ್ನು ಕೆದಕುತ್ತಾ ಹೋದರೆ ಕಾರಾಗೃಹದಲ್ಲಿ ರಹಸ್ಯವಾಗಿ ಕಾರ್ಯಚರಿಸುತ್ತಿರುವ ಮಿನಿ ಭೂಗತ ಜಗತ್ತಿನ ಕರಾಳ ಮುಖಗಳು ತೆರೆದು ಕೊಳ್ಳುತ್ತವೆ.
ಬೆಳ್ಳಂಬೆಳಿಗ್ಗೆ ಮಂಗಳೂರು ಜೈಲ್ ಮೇಲೆ ಪೊಲೀಸರ ದಾಳಿ
ಇಲ್ಲಿ ಇರಿಸಲಾಗಿರುವ ವಿಚಾರಣಾಧಿನ ಕೈದಿಗಳಿಗೆ ಅವರು ಎಸಗಿರುವ ಕೃತ್ಯ ಹಾಗು ಅವರ ಹಿಂದಿರುವ ಬಲಿಷ್ಟ ಕೈಗಳ ಆಧಾರದಲ್ಲಿ ಕೈದಿಗಳ ವರ್ಗಿಕರಣ ನಡೆಯುತ್ತದೆ. ಹಾಗೂ ಪುಡಿ ರೌಡಿಗಳು ಜೈಲಿನಲ್ಲೇ ತಂಡಗಳನ್ನು ಕಟ್ಟಿಕೊಂಡು ಇತರ ಕೈದಿಗಳಿಂದ ಹಫ್ತಾ ವಸೂಲಿ ದಂಧೆ ನಡೆಯುತ್ತಿವೆ.
ಕಾರಾಗೃಹದಲ್ಲಿರುವ ವಿಚಾರಣಾಧಿನ ಕೈದಿಗಳ ಆರ್ಥಿಕ ಪರಿಸ್ಥತಿ ಮೇಲೆ ಹಫ್ತಾ ನಿರ್ಧಾರ ವಾಗುತ್ತದೆ. ಇಲ್ಲಿ ಸಾವಿರ ರೂಪಾಯಿಯಿಂದ ಲಕ್ಷದ ವರೆಗೆ ಹಫ್ತಾ ನಿರ್ಧಾರ ವಾಗುತ್ತದೆ.
ಹಫ್ತಾ ನೀಡಲೊಪ್ಪದವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗುತ್ತದೆ. ಜೈಲಿನಲ್ಲಿ ನಡೆಯುತ್ತಿರುವ ಈ ದಂಧೆಗಳಿಗೆ ಇತ್ತಿಚೆಗೆ ಜೈಲಿನಲ್ಲಿ ನಡೆದ ಹಲ್ಲೆ ಪ್ರಕರಣಗಳು ಪುಷ್ಠಿ ನೀಡುತ್ತಿವೆ.
ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಆರೋಪಿಗಳ ಮೇಲೆ ಹಲ್ಲೆ
ಕಾರಾಗೃಹದ ಬಿ ಬ್ಯಾರಕ್ ನಲ್ಲಿ ಕೆಲವು ದಿನಗಳ ಹಿಂದೆ ಉಡುಪಿ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾದ ಭಾಸ್ಕರ್ ಶೆಟ್ಟಿ ಅವರ ಪುತ್ರ ನವನೀತ್ ಶೆಟ್ಟಿ ಹಾಗು ಜ್ಯೋತಿಷಿ ನಿರಂಜನ್ ಭಟ್ ಅವರ ಮೇಲೆ ರೌಡಿ ಬಜಿಲಕೇರಿ ಧನ್ ರಾಜ್ ತಂಡ ಮಾರಣಾಂತಿಕ ಹಲ್ಲೆ ನಡೆಸಿತ್ತು. ತಂದೆ ಭಾಸ್ಕರ್ ಶೆಟ್ಟಿ ಕೊಲೆ ಕೃತ್ಯವನ್ನು ಒಪ್ಪಿಕೊಳ್ಳುವಂತೆ ರೌಡಿ ಪಡೆ ಒತ್ತಡ ಹಾಕಿತ್ತು. ಇಲ್ಲದಿದ್ದರೆ 5 ಲಕ್ಷ ರೂಪಾಯಿ ಹಫ್ತಾ ನೀಡಬೇಕೆಂದು ಧಮ್ಕಿ ಹಾಕಿತ್ತು. ಹಫ್ತಾ ಕೊಡಲೊಪ್ಪದ ನವನೀತ್ ಶೆಟ್ಟಿ ಹಾಗು ನಿರಂಜನ್ ಭಟ್ ಮೇಲೆ ಸ್ಟೀಲ್ ಡ್ರಮ್ ಹಾಗು ರಾಡ್ ನಿಂದ ದಾಳಿ ನಡೆಸಲಾಗಿತ್ತು.
50 ಸಾವಿರ ರು. ಹಫ್ತಾ ನೀಡುವಂತೆ ಧಮ್ಕಿ
ಕೆಲವುದಿನ ಗಳ ಹಿಂದೆ ಇದೇ ತಂಡ ವಿಚಾರಣಾಧಿನ ಕೈದಿ ಬಂಟ್ವಾಳದ ತಾರಾನಾಥ ಎಂಬವರಿಗೆ 50 ಸಾವಿರ ರು. ಹಫ್ತಾ ನೀಡುವಂತೆ ಧಮ್ಕಿ ಹಾಕಿತ್ತು. ಆದರೆ ತಾರಾನಾಥ ಹಫ್ತಾ ಕೊಡಲೊಪ್ಪದಾಗ ಮಾರಕಾಸ್ತ್ರಗಳಿಂದ ದಾಳಿ ಸಡೆಸಿತ್ತು.
ಜೈಲಿನಲ್ಲಿ ಸಹಜ ಸಾವುಗಳ ಹಿಂದೆ ಹಲ್ಲೆ ಪ್ರಕರಣ
ಕಾರಾಗೃಹದ ಎ ಹಾಗು ಬಿ ಬ್ಯಾರಕ್ ಗಳಲ್ಲಿ ಈ ಹಫ್ತಾ ವಸೂಲಿ ಎಗ್ಗಿಲ್ಲದೆ ನಡೆಯುತ್ತಿದೆ. ಹಲ್ಲೆ ಪ್ರಕರಣ ಗಳು ನಿರಂತರವಾಗಿ ನಡೆಯುತ್ತಿದ್ದರೂ ಕೆಲವೊಂದು ಮಾತ್ರ ಬೆಳಕಿಗೆ ಬರುತ್ತಿದೆ. ಕಾರಾಗೃಹದಲ್ಲಿ ಈ ಹಿಂದೆ ಹಲವಾರು ವಿಚಾರಣಾಧಿನ ಕೈದಿಗಳು ಅನಾರೋಗ್ಯದಿಂದ ಮೃತ ಪಟ್ಟಿದಾರೆ ಎಂದು ಹೇಳಲಾಗಿತ್ತು. ಆದರೆ, ಅಲ್ಲಿ ನಡೆಯುತ್ತಿರುವ ಹಲ್ಲೆ ಪ್ರಕರಣಗಳಿಂದಲೇ ಸಾವು ಸಂಭವಿಸುತ್ತದೆ ಎಂಬ ಸಂಶಯ ಕೂಡಾ ವ್ಯಕ್ತವಾಗಿವೆ. ಈ ನಿಟ್ಟಿನಲ್ಲಿ ಉನ್ನತ ಮಟ್ಟದ ತನಿಖೆ ನಡೆಸಬೇಕಾದ ಅನಿವಾರ್ಯತೆ ಇದೆ.
ಜೈಲಿನಲ್ಲಿ ಎಗ್ಗಿಲ್ಲದೆ ಗಾಂಜಾ ಸಾಗಾಟ
ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಕೇವಲ ಕೈದಿ-ಕೈದಿಗಳ ನಡುವೆ ಜಗಳಗಳು ನಡೆಯುತ್ತಿರುವುದು ಮಾತ್ರವಲ್ಲದೆ ಗಾಂಜಾ ಸಾಗಾಟ ಎಗ್ಗಿಲ್ಲದೆ ನಡೆಯುತ್ತಿದೆ. ಹಲವು ಬಾರಿ ಪೊಲೀಸರು ಏಕಾಏಕಿ ದಾಳಿ ಮಾಡಿದಾಗ ಗಾಂಜಾ, ಚಾಕು, ಮೊಬೈಲ್ ಸೇರಿದಂತೆ ಹಲವು ವಸ್ತುಗಳು ಪತ್ತೆಯಾಗುರುವುದು ಉಂಟು.