ಮಂಗಳೂರು: ಕ್ಷಣಾರ್ಧದಲ್ಲಿ ತಪ್ಪಿದ ರೈಲು ದುರಂತ
ಮಂಗಳೂರು, ಸೆ, 01 : ಇತ್ತೀಚಿನ ದಿನಗಳಲ್ಲಿ ಸಂಭವಿಸುತ್ತಿರುವ ರೈಲು ಅವಘಡಗಳನ್ನು ನೋಡಿದರೆ ಓಡಾಡಲು ರೈಲಿನ ಆಶ್ರಯ ಪಡೆದ ಪ್ರಯಾಣಿಕರು ಆತಂಕಕ್ಕೆ ಒಳಗಾಗುವುದು ಸಹಜ.
ಬಸ್ಸಿನ ದರಗಳನ್ನು ನೋಡಿದರೆ ಬಸ್ಸಿನಲ್ಲಿ ಸಂಚರಿಸುವ ಆಸೆಯನ್ನು ಪ್ರಯಾಣಿಕರು ಕೈಬಿಡಬೇಕಾಗುತ್ತದೆ. ರೈಲುಗಳನ್ನು ಅವಲಂಬಿಸಲು ಇವು ಪ್ರಯಾಣಿಕರನ್ನು ಸುರಕ್ಷಿತವಾಗಿ ಕೊಂಡೊಯ್ಯುತ್ತವೆಯೇ ಎಂಬ ಅಸುರಕ್ಷತಾ ಭಾವ ಕಾಡುತ್ತದೆ.[ಮಂಗಳೂರು : ರೈಲು ಅಪಘಾತ ತಪ್ಪಿಸಿದ ರೈತ]
ಕಳೆದ ತಿಂಗಳಷ್ಟೇ ರೈಲು ಹಳಿ ಬಿರುಕು ಬಿಟ್ಟು ದುರಂತ ಸಂಭವಿಸುವುದನ್ನು ಒಬ್ಬ ರೈತರು ತಪ್ಪಿಸಿದ್ದರು. ಇದರ ಆತಂಕದ ಛಾಯೆ ಮಾಸುವ ಮೊದಲೇ ಮಂಗಳೂರಿನ ಕಂಕನಾಡಿ ಜಂಕ್ಷನ್ ನಲ್ಲಿ ಮಂಗಳವಾರ ರೈಲು ಇಂಜಿನ್ ಹಳಿ ತಪ್ಪಿದ ಘಟನೆ ವರದಿಯಾಗಿದೆ.
ಮಂಗಳೂರಿಗೆ ಹೋಗುವಾಗ ರೈಲುಗಳು ಕಂಕನಾಡಿ ಜಂಕ್ಷನ್ನಲ್ಲಿ ಇಂಜಿನ್ ಬದಲಿಸುತ್ತದೆ. ಬಳಿಕ ರೈಲುಗಳು ತಲುಪಬೇಕಾದ ಸ್ಥಳಕ್ಕೆ ಹೊರಡುತ್ತವೆ. ಕಂಕನಾಡಿನಲ್ಲಿ ರೈಲು ಇಂಜಿನ್ ಬದಲಿಸಿ ಸಾಗುತ್ತಿದ್ದಾಗ ಏಕಾಏಕಿ ಹಳಿಯಿಂದ ಜಾರಿದೆ. ಆದರೆ ಯಾವುದೇ ಅವಘಡಗಳು ಸಂಭವಿಸದೆ ಎಲ್ಲರೂ ಭಾರೀ ದುರಂತದಿಂದ ಪಾರಾಗಿದ್ದಾರೆ.
ಇಂಜಿನ್ ನ್ನು ಪರೀಕ್ಷಿಸುವ ವೇಳೆ ಈ ಘಟನೆ ಸಂಭವಿಸುವುದರಿಂದ ತಕ್ಷಣವೇ ಇಂಜಿನ್ ನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಯಿತು ಎಂದು ಕಂಕನಾಡಿ ಜಂಕ್ಷನ್ ನ ರೈಲ್ವೆ ಸಿಬ್ಬಂದಿ ತಿಳಿಸಿದ್ದಾರೆ.