ಮಂಗಳೂರು ಜನರ ಪಾಲಿನ ಮದರ್ ತೆರೇಸಾ ಮಸ್ಕರೇನ್ಹಸ್ ಇನ್ನಿಲ್ಲ
ಮಂಗಳೂರು, ಜನವರಿ. 10 : ಮಂಗಳೂರು ಜನರ ಪಾಲಿನ ಮದರ್ ತೆರೇಸಾ ಮಹಾನಗರ ಪಾಲಿಕೆಯ ಮಾಜಿ ಉಪ ಮೇಯರ್, ಸಾಮಾಜಿಕ ಕಾರ್ಯಕರ್ತೆ ಜ್ಯುಡಿತ್ ಮಸ್ಕರೇನ್ಹಸ್(85) ಸೋಮವಾರ ರಾತ್ರಿ ಜೆಪ್ಪುವಿನ ಪ್ರಶಾಂತ್ ನಿವಾಸ್ ನಲ್ಲಿ ನಿಧನರಾಗಿದ್ದಾರೆ.
ಕೆಲ ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಸೋಮವಾರ ರಾತ್ರಿ ಮೃತಪಟ್ಟಿದ್ದಾರೆ. ಇವರು ಮಾಜಿ ಮೇಯರ್ ಅಷ್ಟೇ ಅಲ್ಲ, ತಮ್ಮ ಸಾಮಾಜಿಕ ಸೇವೆಗಳ ಮೂಲಕ ಜನ ಪ್ರೀತಿ ಗಳಿಸಿದವರು. ಬಡವರ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಮಸ್ಕರೇನಸ್ ಕುಡ್ಲ ಅಂದರೆ ಮಂಗಳೂರಿನ ಜನರ ಪಾಲಿಗೆ 'ಮದರ್ ತೆರೇಸಾ' ಆಗಿ ಗುರುತಿಸಿಕೊಂಡಿದ್ದರು.
ಅಷ್ಟೇ ಅಲ್ಲ, ಪತ್ರಕರ್ತೆಯಾಗಿ, ಶಿಕ್ಷಕಿಯಾಗಿ, ರಾಜಕಾರಣಿಯಾಗಿ, ಸಮಾಲೋಚಕಿಯಾಗಿ ಗುರುತಿಸಿಕೊಂಡ ಜುಡಿತ್, ಕುಷ್ಠ ರೋಗಿಗಳ ಪುನರ್ವಸತಿಗಾಗಿ 50ಕ್ಕೂ ಅಧಿಕ ಮನೆಗಳ್ನು ನಿರ್ಮಿಸಿ, ಅವರಿಗೆ ಸರಕಾರಿ ಹಾಗೂ ಇತರ ಉದ್ಯೋಗವನ್ನು ಕಲ್ಪಿಸುವಲ್ಲಿ ನೆರವಾಗಿದ್ದರು.
ನಿರ್ಗತಿಕರಿಗೆ ಅಭಯ ಆಶ್ರಯ, ಪ್ರಶಾಂತ್ ನಿವಾಸ್, ಮದರ್ ತೆರೇಸಾ ಹೋಮ್, ಸಿಯಾನ್ ಆಶ್ರಮ, ಸೇರಿದಂತೆ ಮತ್ತಿತರ ಕಡೆ ವಸತಿ ವ್ಯವಸ್ಥೆ ಕಲ್ಪಿಸಿ ಗಮನ ಸೆಳೆದಿದ್ದರು.
1931ರ ಡಿಸೆಂಬರ್ 22ರಂದು ಕೊಂಕಣಿ ಕವಿ, ಪತ್ರಿಕೋದ್ಯಮಿ ಮತ್ತು ಸಾಮಾಜಿಕ ಕಾರ್ಯಕರ್ತ ಅಲೋಶಿಯಸ್ ಐ. ಮಸ್ಕರೇಂಞಸ್ ಮತ್ತು ಶಿಕ್ಷಕಿ ಮ್ಯಾಗ್ದಲಿನ್ ಎಂ. ಮಸ್ಕರೇಂಞಸ್ ದಂಪತಿಯ ಪುತ್ರಿಯಾಗಿ ಜನಿಸಿದರು.
ಜುಡಿತ್ 1991ರಲ್ಲಿ ಸಮಾನ ಮನಸ್ಕರ ತಂಡವೊಂದನ್ನು ಕಟ್ಟಿಕೊಂಡು 'ಪ್ರೀತಿ ನೀತಿ ಟ್ರಸ್ಟ್' ಹೆಸರಿನ ಸರಕಾರೇತರ ಸಂಸ್ಥೆಯೊಂದನ್ನು ಸ್ಥಾಪಿಸಿದ್ದರು. ಮದುವೆಯಾಗದೆ ತಮ್ಮ ಜೀವನವನ್ನು ಸಮಾಜದ ದೀನ ದಲಿತರ ಹಾಗೂ ನಿಮ್ನ ವರ್ಗದ ಜನರ ಕಲ್ಯಾಣಕ್ಕಾಗಿಯೇ ಮೀಸಲಿಟ್ಟಿದ್ದರು.
ಮದ್ರಾಸ್ ವಿವಿಯಿಂದ ಬಿಎ ಪದವಿ ಹಾಗೂ ಬಿಟಿ ಪದವಿ ಪಡೆದುಕೊಂಡು ಶಿಕ್ಷಕಿಯಾಗಿ ಸೇವೆ ಸಲ್ಲಿಸಿರುವ ಜುಡಿತ್ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ- ಸಮ್ಮೇಳನಗಳಲ್ಲಿ ಪಾಲ್ಗೊಂಡಿದ್ದರು.
ಹಲವಾರು ಸಾಮಾಜಿಕ ಸಂಘಟನೆಗಳು ಮತ್ತು ಸಮಿತಿಗಳಲ್ಲಿ ಸಕ್ರಿಯರಾಗಿದ್ದುಕೊಂಡು ಜನಮನ್ನಣೆ ಗಳಿಸಿದ್ದರು. ರಾಜಕೀಯ ಕ್ಷೇತ್ರದಲ್ಲೂ ಸಹ ಜುಡಿತ್ ಗುರುತಿಸಿಕೊಂಡಿದ್ದರು.
ಜನತಾ ಪಾರ್ಟಿಯಿಂದ ಮಂಗಳೂರು ಸ್ಥಳೀಯ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದ ಜುಡಿತ್, ಮೂರು ಅವಧಿಗೆ ಮಂಗಳೂರು ಮಹಾನಗರ ಪಾಲಿಕೆಯ ಕಾರ್ಪೊರೇಟರ್ ಆಗಿ ಎರಡು ಬಾರಿ ಉಪಮೇಯರ್ ಆಗಿ ಸೇವೆ ಸಲ್ಲಿಸಿದ್ದಾರೆ. ಇನ್ನು ಇವರ ಅಂತ್ಯಸಂಸ್ಕಾರ ಬುಧವಾರ ನಡೆಯಲಿದೆ.