ಮಂಗಳೂರು ಬಂದ್: ಪಿಯು ಪರೀಕ್ಷೆ ಬರೆಯಲು ವಿದ್ಯಾರ್ಥಿಗಳ ಒದ್ದಾಟ
ಪಿಣರಾಯಿ ಆಗಮನದ ಹಿನ್ನಲೆಯಲ್ಲಿ ದಕ್ಷಿಣ ಕನ್ನಡದಲ್ಲಿ ಬಂದ್ ನಡೆಯುತ್ತಿದ್ದು ಬಂದಿನ ಮಧ್ಯೆಯೇ ಪ್ರಥಮ ಪಿಯುಸಿ ಪರೀಕ್ಷೆಯೂ ಮುಂದುವರಿದಿದೆ. ಇದರಿಂದ ಅಲ್ಲಲ್ಲಿ ವಿದ್ಯಾರ್ಥಿಗಳು ತೊಂದರೆ ಅನುಭವಿಸಿದ್ದರು.
ಮಂಗಳೂರು, ಫೆಬ್ರವರಿ 25: ಪಿಣರಾಯಿ ಆಗಮನದ ಹಿನ್ನಲೆಯಲ್ಲಿ ದಕ್ಷಿಣ ಕನ್ನಡದಲ್ಲಿ ಬಂದ್ ನಡೆಯುತ್ತಿದ್ದು ಬಂದಿನ ಮಧ್ಯೆಯೇ ಪ್ರಥಮ ಪಿಯುಸಿ ಪರೀಕ್ಷೆಯೂ ಮುಂದುವರಿದಿದೆ. ಇದರಿಂದ ಅಲ್ಲಲ್ಲಿ ವಿದ್ಯಾರ್ಥಿಗಳು ತೊಂದರೆ ಅನುಭವಿಸಿದ್ದಾರೆ.
ಬಂದ್ ಹಿನ್ನಲೆಯಲ್ಲಿ ಖಾಸಗಿ ಬಸ್ಗಳ ಸಂಚಾರ ಸ್ಥಗಿತವಾಗಿತ್ತು. ಇದರಿಂದ ಪರೀಕ್ಷೆ ಬರೆಯಬೇಕಾಗಿದ್ದ ವಿದ್ಯಾರ್ಥಿಗಳು ತೊಂದರೆ ಅನುಭವಿಸಿದರು. ಹೆಚ್ಚಿನವರು ಸರಕಾರಿ ಬಸ್ ಗಳ ಮೂಲಕ ಬಂದು ಪರೀಕ್ಷೆ ಬರೆದಿದ್ದಾರೆ. ಆದರೆ ದಕ್ಷಿಣ ಕನ್ನಡದ ಗ್ರಾಮೀಣ ಭಾಗಗಳಲ್ಲಿ ಖಾಸಗಿ ಬಸ್ ಸಂಚಾರ ಮಾತ್ರ ಇರುವ ಪೋಷಕರು ಮಾತ್ರ ಜಿಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಂದ್ ಹಿನ್ನಲೆಯಲ್ಲಿ ಪರೀಕ್ಷೆಯನ್ನು ನಿಲ್ಲಿಸಬಾಹುದಾಗಿತ್ತು. ಆದರೆ ಜಿಲ್ಲಾಡಳಿತ ಪ್ರತಿಷ್ಠೆಗಾಗಿ ಮಕ್ಕಳ ಭವಿಷ್ಯದ ಜೊತೆ ಆಟವಾಡುತ್ತಿದೆ ಎಂದ ವಿದ್ಯಾರ್ಥಿಗಳ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಲವು ಕಡೆಗಳಲ್ಲಿ ಬಸ್ ಸಂಚಾರವಿಲ್ಲದೆ ಪರೀಕ್ಷೆ ಬರೆಯಲು ಹೋಗಲು ವಿದ್ಯಾರ್ಥಿಗಳು ಪರದಾಟ ನಡೆಸುತ್ತಿದ್ದ ದೃಶ್ಯ ಕಂಡು ಬಂತು. ಕೆಲವು ಕಡೆ ಪೊಲೀಸರೇ ವಿದ್ಯಾರ್ಥಿಗಳಿಗೆ ಸಹಕಾರ ನೀಡಿದರು.
ಈ ಕುರಿತು ಒನ್ ಇಂಡಿಯಾಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ಕೆ.ಜಿ ಜಗದೀಶ್ ಬಸ್ ಇರದ ಕಾರಣದಿಂದ ಕಾಲೇಜಿಗೆ ಬರಲಾಗದೆ ಪರೀಕ್ಷೆ ಬರೆಯಲು ಸಾಧ್ಯವಾಗದವರಿಗೆ ಬೇರೆ ವ್ಯವಸ್ಥೆ ಮಾಡುವ ಭರವಸೆ ನೀಡಿದ್ದಾರೆ.
ಧರ್ಮಸ್ಥಳದಲ್ಲಿ ನೀರಸ ಪ್ರತಿಕ್ರಿಯೆ:
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಗಳೂರು ಭೇಟಿಯನ್ನು ವಿರೋಧಿಸಿ ಸಂಘ ಪರಿವಾರ ಕರೆ ನೀಡಿರುವ ಹರತಾಳಕ್ಕೆ ಧರ್ಮಸ್ಥಳದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇಲ್ಲಿ ಬಂದ್ಗೆ ಯಾವುದೇ ಬೆಂಬಲ ವ್ಯಕ್ತವಾಗಿಲ್ಲ. ಅಂಗಡಿಮುಂಗಟ್ಟುಗಳು ಎಂದಿನಂತೆ ತೆರೆದಿದ್ದವು. ವಾಹನ ಸಂಚಾರವು ಎಂದಿನಂತಿತ್ತು.
ಬೆಳ್ತಂಗಡಿ ತಾಲೂಕಿನಾದ್ಯಂತ ಬಂದಿಗೆ ಭಾಗಶಃ ಬೆಂಬಲ ಮಾತ್ರ ವ್ಯಕ್ತವಾಗಿದೆ. ಖಾಸಗಿ ಬಸ್ಗಳು ರಸ್ತೆಗೆ ಇಳಿಯದಿದ್ದರೂ ಸರಕಾರಿ ಬಸ್ಗಳು ಎಂದಿನಂತೆ ಓಡಾಟ ನಡೆಸಿದವು. ಕೆಲವೆಡೆಗಳಲ್ಲಿ ಅಂಗಡಿಗಳು ಬಾಗಿಲು ಮುಚ್ಚಿದ್ದವು. ಆದರೆ ಆಟೋ ರಿಕ್ಷಾಗಳು ಹಾಗೂ ಖಾಸಗಿ ವಾಹನಗಳು ಸಂಚರಿಸುತ್ತಿದ್ದವು.
ಪುತ್ತೂರಿನಲ್ಲಿ ಸಾಧಾರಣ ಪ್ರತಿಕ್ರಿಯೆ ವ್ಯಕ್ತವಾಗಿದೆ:
ಬಂದ್ ಕರೆಗೆ ಪುತ್ತೂರಿನಲ್ಲಿ ಸಾಧಾರಣ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಳಗ್ಗಿನ ವೇಳೆಯಲ್ಲಿ ಹೆಚ್ಚಿನ ಅಂಗಡಿಗಳು ಮುಚ್ಚಿದ್ದರೂ 11 ಗಂಟೆಯ ಬಳಿಕ ಕೆಲವು ಅಂಗಡಿಗಳು ತೆರೆದುಕೊಂಡವು. ಇಲ್ಲೂ ಖಾಸಗಿ ಬಸ್ಸುಗಳು ಓಡಾಟ ಸ್ಥಗಿತಗೊಳಿಸಿದ್ದರೂ ಕೆಎಸ್ಸಾರ್ಟಿಸಿ ಬಸ್ಸುಗಳು ಎಂದಿನಂತೆ ಓಡಾಟ ನಡೆಸುತ್ತಿವೆ.
ಪುತ್ತೂರು ಉಪ್ಪಿನಂಗಡಿ ರಸ್ತೆಯ ಕೆಮ್ಮಾಯಿ ಎಂಬಲ್ಲಿ ಕೆಸ್ಸಾರ್ಟಿಸಿ ಬಸ್ಸೊಂದಕ್ಕೆ ದುಷ್ಕರ್ಮಿಗಳು ಕಲ್ಲೆಸೆದು ಪರಾರಿಯಾಗಿದ್ದಾರೆ. ಮಾಣಿ ಮೈಸೂರು ರಾಜ್ಯ ಹೆದ್ದಾರಿಯ ಪುತ್ತೂರು ಬೈಪಾಸ್ನಲ್ಲಿ ಮುಂಜಾನೆ ವೇಳೆಯಲ್ಲಿ ರಸ್ತೆಯಲ್ಲಿ ಟಯರ್ ಉರಿಸಲಾಗಿತ್ತು. ಪೊಲೀಸರು ಟಯರ್ ಬೆಂಕಿಯನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ನಗರದ ಎರಡು ಖಾಸಗಿ ಕಾಲೇಜುಗಳು ಮಾತ್ರ ರಜೆ ಸಾರಿದ್ದವು. ಉಳಿದಂತೆ ಎಲ್ಲಾ ಖಾಸಗಿ ಹಾಗೂ ಸರ್ಕಾರಿ ಶಾಲಾ ಕಾಲೇಜುಗಳು ಎಂದಿನಂತೆ ತರಗತಿಗಳನ್ನು ನಡೆಸಿವೆ. ಎಲ್ಲಾ ಸರ್ಕಾರಿ ಇಲಾಖೆಗಳು ಕಾರ್ಯನಿರ್ವಹಿಸಿದ್ದು, ನಗರದಲ್ಲಿ ಜನಸಂಚಾರ ಎಂದಿಗಿಂತ ವಿರಳವಾಗಿತ್ತು.
ಬಿಎಂಎಸ್ ಸಂಘಟನೆಯ ಆಟೊರಿಕ್ಷಾ ಹೊರತುಪಡಿಸಿ ಉಳಿದ ಇತರ ಸಂಘಟನೆಗಳ ಆಟೊರಿಕ್ಷಾಗಳು, ಕಾರುಗಳು, ದ್ವಿಚಕ್ರ ವಾಹನಗಳು ಓಡಾಟ ನಡೆಸುತ್ತಿವೆ. ನಗರದ ಹೊರ ಪ್ರದೇಶಗಳಾದ ಕುಂಬ್ರ, ತಿಂಗಳಾಡಿ, ಪಾಣಾಜೆ, ಸವಣೂರು ಇನ್ನಿತರ ಕಡೆಗಳಲ್ಲಿ ಕೆಲವೊಂದು ಅಂಗಡಿಗಳು ಮುಚ್ಚಲ್ಪಟ್ಟಿದ್ದು, ಬಹುತೇಕ ಅಂಗಡಿಗಳು ಎಂದಿನಂತೆ ತೆರದುಕೊಂಡಿವೆ. ಪೊಲೀಸರು ಎಲ್ಲಾ ಕಡೆಗಳಲ್ಲಿ ಬಿಗಿ ಬಂದೋಬಸ್ತು ಮಾಡಿದ್ದಾರೆ.