ಮಂಗಳೂರಿನಲ್ಲಿ ದರೋಡೆಗೆ ಸಂಚು ರೋಪಿಸಿದ 7 ಯುವಕರ ಬಂಧನ
ಮಂಗಳೂರು, ಅಕ್ಟೋಬರ್ 20: ಮಂಗಳೂರು ನಗರದ ಬಿಜೈ ಬಿಗ್ ಬಜಾರ್ ಎದುರು ದರೋಡೆಗೆ ಯತ್ನಿಸುತ್ತಿದ್ದರು ಎನ್ನುವ ಆರೋಪದ ಮೇಲೆ 7 ಮಂದಿ ಯುವಕರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ನಗರದ ಬಿಜೈ ಕಾಪಿಕಾಡ್ ರಸ್ತೆಯಲ್ಲಿರುವ ಬಿಗ್ ಬಜಾರ್ ಎದುರು 3 ಬೈಕ್ ಗಳಲ್ಲಿ ಕೆಲವು ಯುವಕರು ದರೋಡೆಗೆ ಯತ್ನಿಸುತ್ತಿರುವ ಬಗ್ಗೆ ಮಂಗಳೂರು ಸಿಸಿಬಿ ಪೊಲೀಸರಿಗೆ ಖಚಿತ ಮಾಹಿತಿ ದೊರೆತಿತ್ತು. ಈ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಸಿಸಿಬಿ ಪೊಲೀಸರು 7 ಯುವಕರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಕಾವೂರು ನಿವಾಸಿಗಳಾದ ಪ್ರೀತಂ ಪೂಜಾರಿ(23), ವಿಶಾಲ್ ಕುಮಾರ್ (23),
ಕೊಂಚಾಡಿ ನಿವಾಸಿ ಗೌತಮ್ ದೇವಾಡಿಗ (23), ಮೂಡುಶೆಡ್ಡೆ ನಿವಾಸಿಗಳಾದ ವಿನೋದ್ ರಾಜ್ (21) ದಿವಾಕರ (29), ತೊಕ್ಕೊಟ್ಟು ನಿವಾಸಿ ಪ್ರವಣ್ (25), ಯೆಯ್ಯಾಡಿ ನಿವಾಸಿ ಕಾರ್ತಿಕ್ (25) ಎಂದು ಗುರುತಿಸಲಾಗಿದೆ.
ಬಂಧಿತರಿಂದ ಮಾರಕಾಯುಧಗಳು ಸೇರಿದಂತೆ 3 ದ್ವಿಚಕ್ರವಾಹನ , 6 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಕಾರಗೃಹದಲ್ಲಿರುವ ವಿಚಾರಣಾಧೀನ ಖೈದಿ ರೌಡಿ ಶೀಟರ್ ಆಕಾಶಭವನ ಶರಣ್ ಎಂಬಾತನ ಸೂಚನೆಯಂತೆ ದರೋಡೆಗೆ ಸಂಚು ರೂಪಿಸಿದ್ದರು ಎಂದು ಹೇಳಲಾಗಿದೆ.