ಮಂಗಳೂರಲ್ಲಿ ಬಶೀರ್ ಹಲ್ಲೆ ಪ್ರಕರಣ: ನಾಲ್ವರ ಬಂಧನ
ಮಂಗಳೂರು, ಜನವರಿ 6 : ಇದೇ ಜನವರಿ 3 ರಂದು ದೀಪ್ ರಾವ್ ಕೊಲೆಯಾದ ದಿನವೇ ಮಂಗಳೂರಿನ ಕೊಟ್ಟಾರ ಚೌಕಿ ಬಳಿ ಬಶೀರ್ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಪ್ರಕರಣಕ್ಕ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ.
ಸಂದೀಪ್, ಧನುಷ್, ಸೃಜಿತ್, ಕಿಶನ್ ಬಂಧಿತ ಆರೋಪಿಗಳು.ಸಿಸಿಟಿ ದೃಶ್ಯಗಳ ಆಧರಿಸಿ ಮಂಗಳೂರು ಸಿಸಿಬಿ ಪೊಲೀಸರು ಶನಿವಾರ ನಾಲ್ವರನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸಿದ್ದಾರೆ. ವಶಕ್ಕೆ ಪಡೆದವರಲ್ಲಿ ಇಬ್ಬರು ಕಾಸರಗೋಡಿನ ಕುಂಜತ್ತೂರು ಹಾಗು ಮಂಗಲ್ಪಾಡಿ ಮೂಲದವರಾಗಿದ್ದಾರೆ. ಇನ್ನಿಬ್ಬರು ಮಂಗಳೂರು ಹೊರವಲಯದ ಅಡ್ಯಾರ್ ಅಳಪೆಯವರು ಎಂದು ಹೇಳಲಾಗಿದೆ.
ಮಂಗಳೂರಲ್ಲಿ ಹಲ್ಲೆಗೊಳಗಾದ ಬಷೀರ್ ಸ್ಥಿತಿ ಅತ್ಯಂತ ಗಂಭೀರ
2 ಬೈಕ್ ನಲ್ಲಿ ಬಂದಿದ್ದ 4 ಮಂದಿ ದುಷ್ಕರ್ಮಿಗಳ ತಂಡ ಫಾಸ್ಟ್ ಫುಡ್ ಅಂಗಡಿ ನಡೆಸುತ್ತಿದ್ದ ಬಶೀರ ಅವರ ಮೇಲೆ ಜನವರಿ 3ರ ರಾತ್ರಿ ನಗರದ ಕೊಟ್ಟಾರ ಚೌಕಿ ಎಂಬಲ್ಲಿ ಮಾರಕಾಸ್ತ್ರಗಳಿಂಧ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು.
ದಾಳಿಗೆ ತುತ್ತಾಗಿ ಗಂಭೀರವಾಗಿ ಗಾಯಗೊಂಡ ಅಬ್ದುಲ್ ಬಶೀರ್ ಅವರ ಸ್ಥಿತಿ ಚಿಂತಾಜನಕವಾಗಿದ್ದು, ಚಿಕಿತ್ಸಾ ವೆಚ್ಚವನ್ನು ಜಿಲ್ಲಾಡಳಿತ ಭರಿಸಲಿದೆ ಎಂದು ಶಾಸಕ ಮೊಯಿದ್ದೀನ್ ಬಾವಾ ತಿಳಿಸಿದ್ದಾರೆ.
ಈ ನಡುವೆ ಹಲ್ಲೆಯ ಸಿಸಿಟಿವಿ ದೃಶ್ಯಗಳನ್ನು ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ತಿಳಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಎಚ್ಚರಿಸಿದ್ದಾರೆ. ಬಶೀರ್ ಮೇಲೆ ನಡೆದ ಹಲ್ಲೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪ್ರಸಾರ ಮಾಡಿದ ಮಾಧ್ಯಮಗಳ ವಿರುದ್ಧ ನೋಟಿಸ್ ಜಾರಿಮಾಡಲು ಪೊಲೀಸರು ಚಿಂತನೆ ನಡೆಸಿದ್ದಾರೆ.