ಮಂಗಳೂರಿನ ಅಮೃತ ಕಾಲೇಜಿಗೆ ದಶಮಾನೋತ್ಸವದ ಸಂಭ್ರಮ
ಮಂಗಳೂರು, ಜನವರಿ 6: "ವಿದ್ಯಾರ್ಥಿ ಜೀವನದಲ್ಲಿ ಪಡೆದ ಶಿಕ್ಷಣ ಮುಂದೆ ಸಮಾಜಕ್ಕೆ ಬಳಕೆಯಾಗಬೇಕು. ಶಿಕ್ಷಣದಿಂದ ಪಡೆದ ವೃತ್ತಿಯ ಗಳಿಕೆಯ ಸಣ್ಣ ಭಾಗವನ್ನು ವಿದ್ಯಾರ್ಥಿಗಳು ಸಮಾಜದ ಏಳಿಗೆಗೆ ನೀಡುವಂತಾಗಬೇಕು," ಎಂದು ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ಕರೆ ನೀಡಿದರು.
ಅವರು ಮಂಗಳೂರಿನ ಪಡೀಲಿನಲ್ಲಿರುವ ಅಮೃತ ಕಾಲೇಜಿನ ದಶಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ಮಂಗಳೂರು ಹೊರವಲಯದ ಪಡೀಲ್ ನಲ್ಲಿರುವ ಅಮೃತ ಶಿಕ್ಷಣ ಸಂಸ್ಥೆಗೆ ಈಗ ದಶಮಾನೋತ್ಸವದ ಸಂಭ್ರಮ. ಈ ಹಿನ್ನಲೆಯಲ್ಲಿ ಇಂದು ಕಾಲೇಜಿನಲ್ಲಿ ಅದ್ಧೂರಿ ದಶಮಾನೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್ ವಿದ್ಯಾರ್ಥಿಗಳಿಗೆ ಜೀವನ ಸಾಕ್ಷಾತ್ಕಾರದ ಹಿತನುಡಿಗಳನ್ನು ಬೋಧಿಸಿದರು.
ಸಮಾಜಕ್ಕೆ ಮಾದರಿಯಾಗಿ
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ. ಆದರೆ ಅದರ ನಡುವೆ ಮಾಡುವ ಕಾರ್ಯಗಳೆಲ್ಲವೂ ಶಾಶ್ವತ. ಹೀಗಾಗಿ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಉತ್ತಮ ಕಾರ್ಯಗಳನ್ನು ಮಾಡಿ, ಸಮಾಜಕ್ಕೆ ಮಾದರಿಯಾಗಬೇಕು," ಎಂದು ಸಲಹೆ ನೀಡಿದರು.
ದಶಮಾನೋತ್ಸವ ಉದ್ಘಾಟಿಸಿದ ಶ್ರುತಿ
ಇದಕ್ಕೂ ಮುನ್ನ ದಶಮಾನೋತ್ಸವ ಕಾರ್ಯಕ್ರಮವನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಪಶ್ಚಿಮ ವಲಯ ಎಸ್ಪಿ ಶ್ರುತಿ ಎನ್.ಎಸ್ ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ತಮ್ಮ ಬಾಲ್ಯದ ಸಂಘರ್ಷಗಳನ್ನು ಮೆಲಕು ಹಾಕಿದರು.
ಧನಾತ್ಮಕ ಚಿಂತನೆಯೊಂದಿಗೆ ಮುನ್ನುಗ್ಗಿ
"ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಶಿಸ್ತು ಅಳವಡಿಸಿಕೊಳ್ಳಬೇಕು," ಎಂದು ಕರೆ ನೀಡಿದ ಅವರು, "ಕಾಲೇಜು ದಿನಗಳ ಜೀವನ ತುಂಬ ಅಮೂಲ್ಯವಾಗಿದ್ದು, ಅದನ್ನು ಸದುಪಯೋಗಿಸಿಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವ ವಿದ್ಯಾರ್ಥಿಗಳು ಶಿಸ್ತುಬದ್ಧ ಓದಿಗೆ ಚೌಕಟ್ಟು ನಿರ್ಮಿಸಿಕೊಳ್ಳಬೇಕು. ಯಾವುದೇ ಸಂದರ್ಭದಲ್ಲಿಯೂ ವಿದ್ಯಾರ್ಥಿಗಳು ಎದೆಗುಂದದೆ ಧನಾತ್ಮಕ ಚಿಂತನೆಯೊಂದಿಗೆ ಮುನ್ನುಗ್ಗಬೇಕು," ಎಂದು ಶ್ರುತಿ ಹೇಳಿದರು.
ಸ್ವರ್ಣಾಮೃತ ಮ್ಯಾಗಜಿನ್ ಬಿಡುಗಡೆ
ಇದೇ ವೇಳೆ, ಅಮೃತ ಕಾಲೇಜಿನ ಹತ್ತು ವರ್ಷಗಳ ಸಾಧನೆ ಕುರಿತ ಸ್ವರ್ಣಾಮೃತ ಕಾಲೇಜು ಮ್ಯಾಗಜಿನ್ ಅನ್ನು ಎಸಿಬಿ ಎಸ್ಪಿ ಶ್ರುತಿ ಎನ್. ಎಸ್ ಬಿಡುಗಡೆಗೊಳಿಸಿದರು. ಕಾಲೇಜಿನ ದಶಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ನಾಲ್ಕು ಮಂದಿ ರ್ಯಾಂಕ್ ವಿಜೇತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯ್ತು.
ಗಣ್ಯರ ಹಾಜರಿ
ಸಮಾರಂಭದಲ್ಲಿ ಅಮೃತ ಕಾಲೇಜು ಸಂಸ್ಥಾಪಕಿ ಚಂದ್ರಕಲಾ ಜಿ. ಭಟ್, ಕಾಲೇಜು ಪ್ರಾಂಶುಪಾಲರಾದ ಚಂದ್ರಹಾಸ್ ಜಿ. ಹಾಗೂ ಕಾಲೇಜು ಆಡಳಿತ ಸಲಹೆಗಾರ ತಾರನಾಥ್ ಕಾಪಿಕಾಡ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದ ಬಳಿಕ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.