ವಿಟ್ಲ ಗುಂಪು ಘರ್ಷಣೆ, ನಾಲ್ವರ ಬಂಧನ
ಮಂಗಳೂರು, ಮೇ 21: ರಾಜ್ಯದಲ್ಲಿ ಬಿಜೆಪಿ ಸರಕಾರ ಪತನವಾಗುತ್ತಿದ್ದಂತೆ ವಿಟ್ಲ ಠಾಣೆ ವ್ಯಾಪ್ತಿಯಲ್ಲಿ ವಿಜಯೋತ್ಸವ ಸಂದರ್ಭದಲ್ಲಿ ಗುಂಪು ಘರ್ಷಣೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಟ್ಲ ಪೊಲೀಸರು 4 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಸೆಕ್ಷನ್ 144 ಉಲ್ಲಂಘನೆ ಹಾಗು ಗಲಭೆ ಸೃಷ್ಟಿಯ ಆರೋಪದ ಮೇರೆಗೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು: ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ
ಬಂಧಿತರನ್ನು ಮಹಮ್ಮದ್ ತಮೀಮ್ (28), ಅಬ್ದುಲ್ ರಹಿಮಾನ್(35), ಮಹಮ್ಮದ್ ಝಕಾರಿಯಾ(25), ಸುಲೈಮಾನ್ ವಕ್ಕೆತ್ತೂರು(38) ಎಂದು ಗುರುತಿಸಲಾಗಿದೆ.
ಮೇ 19 ರಂದು ಬಿಜೆಪಿ ಸರಕಾರ ಉರುಳಿ ಕಾಂಗ್ರೆಸ್ - ಜೆಡಿಎಸ್ ಜಂಟಿ ಸರಕಾರ ರಚನೆಯ ಕಸರತ್ತು ಆರಂಭವಾಗುತ್ತಿದ್ದಂತೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದ ಸುತ್ತಮುತ್ತ ಪ್ರದೇಶಗಳಲ್ಲಿ ಘರ್ಷಣೆ ಆರಂಭವಾಗಿತ್ತು. ವಿಟ್ಲದ ಕೆಲಿಂಜದಲ್ಲಿ ಮೇ 19 ರ ರಾತ್ರಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ಘರ್ಷಣೆ ಸಂಭವಿಸಿತ್ತು.
ವಿಟ್ಲದ ಕೆಲಿಂಜ ದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸುತ್ತಾ ಬಿಜೆಪಿ ಮುರ್ದಾಬಾದ್ ಎಂದು ಘೋಷಣೆ ಕೂಗಿದ್ದರು. ಈ ವೇಳೆ ಬಿಜೆಪಿ ಕಾರ್ಯಕರ್ತರೂ ಕಾಂಗ್ರೆಸ್ ಮುರ್ದಾಬಾದ್ ಘೋಷಣೆ ಕೂಗಿದ ಹಿನ್ನೆಲೆಯಲ್ಲಿ ಮಾತಿನ ಚಕಮಕಿ ಆರಂಭವಾಗಿತ್ತು.
ಬಳಿಕ ಕಾರ್ಯಕರ್ತರ ನಡುವೆ ಘರ್ಷಣೆ ಸಂಭವಿಸಿ ದೊಣ್ಣೆ, ಸೋಡಾಬಾಟ್ಲಿಗಳಿಂದ ಪರಸ್ಪರ ಹಲ್ಲೆ ನಡೆಸಿದ್ದರು.
ನಂತರ ಕೊಳ್ನಾಡು ಗ್ರಾಮದ ಕುಡ್ತಮುಗೇರುವಿನಲ್ಲಿಯೂ ಗುಂಪು ಘರ್ಷಣೆ ಸಂಭವಿಸಿದೆ. ಕೇರಳ ಕರ್ನಾಟಕ ಗಡಿಭಾಗದಲ್ಲಿ ಕೇರಳದ ಒಂದು ಕೋಮಿನ ಯುವಕರ ತಂಡ ಕನ್ಯಾನ ಪೇಟೆಯಲ್ಲಿ ನೂತನ ಸರ್ಕಾರದ ರಚನೆಯ ಸಂಭ್ರಮಾಚರಣೆ ನಡೆಸಿದ್ದು ಅಲ್ಲಿಯೂ ಘರ್ಷಣೆ ಸಂಭವಿಸಿತ್ತು. ನಂತರ ಸುದ್ದಿ ತಿಳಿದು ಸ್ಥಳಕ್ಕೆ ತೆರಳಿದ್ದ ಪೊಲೀಸರು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿ ಹತೋಟಿಗೆ ತಂದಿದ್ದರು.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ತನಿಖೆ ನಡೆಸಿ, ಗುಂಪು ಘರ್ಷಣೆಗೆ ಕಾರಣರಾಗಿದ್ದ ಹಾಗೂ ಮಾರಕಾಸ್ರ್ತಗಳಿಂದ ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸಿದ್ದಾರೆ.