ಹಗಲು ಬೀದಿಗಿಳಿಯಲಾಗುತ್ತಿಲ್ಲ, ರಾತ್ರಿ ತಣ್ಣಗೆ ಮಲಗಲಾಗುತ್ತಿಲ್ಲ
ಮಂಗಳೂರು, ಮಾರ್ಚ್ 24 : ಕರಾವಳಿಯಲ್ಲಿ ದಿನದಿಂದ ದಿನಕ್ಕೆ ಬಿಸಿಲ ಧಗೆ ಏರುತಿದ್ದು, ಸೂರ್ಯ ಕಿರಣಗಳ ಶಾಖದ ಹೊಡೆತಕ್ಕೆ ಮನೆಯಿಂದ ಹೊರಗೆ ಹೊರಡುವುದೇ ಕಷ್ಟವಾಗುತ್ತಿದೆ. ಬಿಸಿಲಿನಲ್ಲಿ ಕೆಲಸಮಾಡಬೇಕಾದ ಅನಿವಾರ್ಯತೆ ಇರುವವರು, ಕಾರ್ಮಿಕರು ವ್ಯಾಪಾರಿಗಳು ಸೇರಿದಂತೆ ಎಲ್ಲಾ ವರ್ಗದವರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಬುಧವಾರ ಮಂಗಳೂರಿನಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿ ಮತ್ತು ಕನಿಷ್ಠ ತಾಪಮಾನ 25 ಡಿಗ್ರಿ ದಾಖಲಾಗಿತ್ತು. ಸಾಮಾನ್ಯವಾಗಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಗರಿಷ್ಠ ತಾಪಮಾನ ದಾಖಲಾಗುವುದು ರೂಢಿ. ಆದರೆ ಈ ಬಾರಿ ಮಾರ್ಚ್ 14ರಂದು 38 ಡಿಗ್ರಿ ಏರಿಕೆಯಾಗಿತ್ತು. ಕೆಲವು ದಿನಗಳ ಹಿಂದೆ ಕನಿಷ್ಠ ಉಷ್ಣಾಂಶವೆ 26.7 ಡಿಗ್ರಿ ಆಗಿತ್ತು.
ಬಿಸಿಲಿನ ಝಳ ಎಷ್ಟೊಂದು ತೀವ್ರವಾಗಿದೆ ಎಂದರೆ, ಹಗಲು ಬೀದಿಗಿಳಿಯಲಾಗುತ್ತಿಲ್ಲ, ರಾತ್ರಿ ತಣ್ಣಗೆ ಮಲಗಲಾಗುತ್ತಿಲ್ಲ. ಬೆಳಗ್ಗೆ 9 ಗಂಟೆಗೆ ಸೂರ್ಯನ ಕಿರಣಗಳು ಪ್ರಖರಗೊಂಡು ವಿಪರೀತ ಧಗೆ ಅನುಭವವಾಗುತ್ತಿದೆ. ಬಿಸಿಲೇರುತ್ತಿದ್ದಂತೆ ಬೀಸುವ ಗಾಳಿಯು ಬಿಸಿಯಾದ ಅನುಭವಾಗುತ್ತದೆ. ರಸ್ತೆಗಳಂತೂ ಕಾದ ಕಬ್ಬಿಣದ ಹಂಚಿನಂತಾಗಿ ಕಾಲಿಡಲು ಸಾಧ್ಯವಾಗುವುದಿಲ್ಲ. [ಎಲ್ಲರಂತಲ್ಲ ಮಂಗಳೂರು ಎಳನೀರು ವ್ಯಾಪಾರಿ 'ಮುರುಗನ್ ಮಾಮ']
ಕಾಸರಗೋಡಿನಲ್ಲಿ ಸನ್ ಸ್ಟ್ರೋಕ್ : ಬಿಸಿಲ ಝಳದಿಂದಾಗಿ ಹೆಚ್ಚಿನವರು ಅಂಗಳಕ್ಕೆ ಕಾಲಿಡಲು ಹೆದರುತ್ತಿದ್ದಾರೆ. ಕೆಲವು ಕಡೆಗಳಲ್ಲಂತೂ ಬಿಸಿಲು ಮತ್ತು ಉರಿಯಿಂದಾಗಿ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಕಾಸರಗೋಡಿನಲ್ಲಿ ಒಬ್ಬರು ಮತ್ತು ಕಾಞಂಗಾಡುನಲ್ಲಿ ಇಬ್ಬರ ಬೆನ್ನಿನಲ್ಲಿ ಉರಿ ಬೊಬ್ಬೆಗಳು ಎದ್ದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. [ಕರ್ನಾಟಕಕ್ಕೆ ಬೇಸಿಗೆ ಬಿಸಿ ಜೊತೆಗೆ ಲೋಡ್ ಶೆಡ್ಡಿಂಗ್ ಹೊರೆ]
ಒಳನಾಡಿನಲ್ಲಿ ಇನ್ನೂ ಹೆಚ್ಚು : ತೀರದ ಪ್ರದೇಶದಲ್ಲಿ ಧಗೆ ಗರಿಷ್ಠ ಮಟ್ಟದಲ್ಲಿದ್ದರೆ, ಒಳನಾಡಿನಲ್ಲಿ ಇನ್ನೂ ಹೆಚ್ಚು ಇದೆ. ಮಂಗಳೂರು, ಉಡುಪಿ, ಕುಂದಾಪುರ ತೀರಾ ಪ್ರದೇಶಗಳಲ್ಲಿ ಗರಿಷ್ಠ ತೇವಾಂಶ ಮತ್ತು ಗಾಳಿಯ ಬೀಸುವಿಕೆ ವೇಗದಿಂದಾಗಿ ಧಗೆ ಸ್ವಲ್ಪ ಕಡಿಮೆ. ಅದೇ ಕಾರ್ಕಳ, ಬೆಳ್ತಂಗಡಿ, ಪುತ್ತೂರು, ಸುಳ್ಯ ಪ್ರದೇಶದಲ್ಲಿ ಗಾಳಿಯ ವೇಗ ತುಂಬಾ ಕಡಿಮೆ ಇರುವುದರಿಂದ ಉರಿಯನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಈ ನಡುವೆ, ಒಳನಾಡಿನಲ್ಲಿ ವಿದ್ಯುತ್ ಸಮಸ್ಯೆ ಧಗೆಯನ್ನು ಮತ್ತಷ್ಟು ಹೆಚ್ಚಿಸಿದೆ. [ಕೆಆರ್ ಎಸ್ ಹಿನ್ನೀರಿನಲ್ಲಿ ಗತ ವರ್ಷಗಳ ದೇವಾಲಯಗಳು ಪ್ರತ್ಯಕ್ಷ!]
ವಾಟ್ಸಾಪ್ ಸಂದೇಶ - ಭಯಬೇಡ : ಈ ನಡುವೆ ಮಧ್ಯಾಹ್ನ 12ರಿಂದ 3 ಗಂಟೆಯವರೆಗೆ ಯಾರು ಮನೆಯಿಂದ ಹೊರಬರಬಾರದು, ತೀವ್ರ ಬಿಸಿಲಾಘಾತದಿಂದ ಅಪಾಯ ಸಂಭವಿಸಬಹುದು ಎಂಬರ್ಥದಲ್ಲಿ ವಾಟ್ಸಾಪ್ ಸಂದೇಶಗಳು ಬಿತ್ತರವಾಗುತ್ತಿವೆ. ಮಧ್ಯಾಹ್ನದ ಹೊತ್ತು ಮನೆಯೊಳಗೆಯೇ ಇರಬೇಕು ಎನ್ನುವುದು ನಿಜ. ಆದರೆ ಹೊರಾಂಗಣದಲ್ಲಿ ಕೆಲಸ ಮಾಡೋರಿಗೆ ಇದು ಸಾಧ್ಯವೇ? ಹಾಗಾಗಿ ವಾಟ್ಸಾಪ್ ನಲ್ಲಿ ಬಂದ ಮಾಹಿತಿ ಬಗ್ಗೆ ಆತಂಕಪಡುವ ಅಗತ್ಯವಿಲ್ಲ.