ಮಂಗಳೂರು ಪ್ರೀಮಿಯರ್ ಲೀಗ್: ಉಳ್ಳಾಲ ತಂಡಕ್ಕೆ ಜಯ
ಮಂಗಳೂರು ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಮೊದಲ ದಿನ ಉಳ್ಳಾಲ ತಂಡ ಉಡುಪಿ ಟೈಗರ್ಸ್ ವಿರುದ್ಧ 6ವಿಕೆಟ್ ಗಳಿಂದ ಜಯಗಳಿಸಿದೆ. ಕುಂದಾಪುರ ಪ್ರೆಸಿಡೆಂಟ್ ಸಿಕ್ಸರ್ಸ್ ಸ್ಪಾಕ್ವೆಂಜರ್ಸ್ ಬೋಳಾರ ವಿರುದ್ಧ 3 ವಿಕೆಟ್ ಗಳಿಂದ ಗೆಲವು ಸಾಧಿಸಿದೆ
ಮಂಗಳೂರು, ಡಿಸೆಂಬರ್, 19 : ಅಲ್ಮಝೈನ್ ವೈಟ್ ಸ್ಟೋನ್ ಮಂಗಳೂರು ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಮೊದಲ ಪಂದ್ಯದಲ್ಲಿ ಯು.ಟಿ.ಖಾದರ್ ಮಾಲೀಕತ್ವದ ಉಳ್ಳಾಲ ತಂಡ ಉಡುಪಿ ಟೈಗರ್ಸ್ ತಂಡದ ವಿರುದ್ಧ 6 ವಿಕೆಟ್ ಗಳ ಅಂತರದಿಂದ ಗೆಲುವಿನ ನಗೆ ಬೀರಿದೆ.
ನವ ಮಂಗಳೂರಿನ ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಭಾನುವಾರ ಯುನೈಟೆಡ್ ಉಳ್ಳಾಲ ಹಾಗೂ ಉಡುಪಿ ಟೈಗರ್ಸ್ ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಗಿಳಿದ ಉಡುಪಿ ತಂಡ ಆಸೀಫ್ 39 ರನ್, ನಾಗರ 28 ರನ್ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 139 ರನ್ ಗಳಿಸಿತು.
ಉಳ್ಳಾಲ ತಂಡದ ಮಿತ್ರಕಾಂತ್ ಯಾದವ್ ಉತ್ತಮ ಬೌಲಿಂಗ್ ನಡೆಸಿ 21 ರನ್ ಳಿಗೆ ನಾಲ್ಕು ವಿಕೆಟ್ ಗಳಿಸಿದರು. ಉಡುಪಿ ತಂಡ ನೀಡಿದ 140 ರನ್ ಸವಾಲನ್ನು ಬೆನ್ನತ್ತಿದ ಉಳ್ಳಾಲ ತಂಡ ನಾಯಕ ನಿತಿನ್ ಮೂಲ್ಕಿ ಅಜೇಯ 78, ಮಿತ್ರಕಾಂತ್ ಯಾದವ್ ಅಜೇಯ 53 ರನ್ ಗಳ ನೆರವಿನಿಂದ 18.1 ಓವರ್ ಗಳಲ್ಲಿ 140 ರನ್ ಗಳಿಸಿ ಜಯದ ನಗೆ ಬೀರಿತು.
ಆರಂಭಿಕರಾಗಿ ಕ್ರೀಸಿಗಿಳಿದ ಸಾದಿಕ್ ಕಿರ್ಮಾನಿ 18 ರನ್ ಗಳಿಸಿ ಔಟಾದರು. ಉತ್ತಮ ಆಟವಾಡಿದ ನಿತಿನ್ ಮೂಲ್ಕಿ ಮತ್ತು ಮಿತ್ರಕಾಂತ್ ಯಾದವ್ ಜಂಟಿಯಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಗಳಿಸಿದರು.
ಇನ್ನೊಂದು ಪಂದ್ಯದಲ್ಲಿ ಕುಂದಾಪುರ ಪ್ರೆಸಿಡೆಂಟ್ ಸಿಕ್ಸರ್ಸ್ ತಂಡ ಸ್ಪಾಕ್ವೆಂಜರ್ಸ್ ಬೋಳಾರ ತಂಡದ ವಿರುದ್ಧ 3 ವಿಕೆಟ್ ಗಳ ಅಂತರದಿಂದ ಜಯ ಗಳಿಸಿತು. ಮೊದಲು ಬ್ಯಾಟಿಂಗ್ ನಡೆಸಿದ ಸ್ಪಾರ್ಕ್ ತಂಡ 20 ಓವರ್ ಗಳಲ್ಲಿ 8 ವಿಕೆಟ್ ಗಳನ್ನ ಕಳೆದುಕೊಂಡು 150 ರನ್ ಗಳಿಸಿತು.
ಇಫ್ರಾನ್ 28, ಸಚಿನ್ 33, ಹರ್ಷಿತ್ 23, ಇಬ್ರಾಹಿಂ 13 ರನ್ ಗಳಿಸಿದರು. ಸಿಕ್ಸರ್ಸ್ ತಂಡದ ಕಾರ್ಯಪ್ಪ 22ಕ್ಕೆ 4, ಅಖಿಲ್ 18ಕ್ಕೆ 2 ವಿಕೆಟ್ ಗಳನ್ನ ಪಡೆದರು.
151 ರನ್ ಗುರಿ ಬೆನ್ನತ್ತಿದ ಕುಂದಾಪುರ ಪ್ರೆಸಿಡೆಂಟ್ ಸಿಕ್ಸರ್ಸ್ ತಂಡ ಇನ್ನೇನು ಗೆಲುವಿನ ಸನಿಹದಲ್ಲಿ ವಿಕೆಟ್ ಗಳನ್ನ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಕೊನೆಗೆ ಚೇತರಿಸಿಕೊಂಡ ಕುಂದಾಪುರ ತಂಡ 18ನೇಯ ಓವರಿನಲ್ಲಿ 3 ವಿಕೆಟ್ ಗಳ ಅಂತರದಿಂದ ಜಯ ಗಳಿಸಿತು. ಝಾಹಿರ್ 21, ಅಖಿಲ್ 22 ರನ್ ಗಳಿಸಿದರು.
ಸ್ಪಾರ್ಕ್ ನ ಪವನ್ 15ಕ್ಕೆ 2 ವಿಕೆಟ್ ಪಡೆದರೆ, ಸ್ಟಾಲಿನ್, ದಿಕಾಂಶು ಮತ್ತು ಕಾರ್ತಿಕ್ ತಲಾ ಒಂದೊಂದು ವಿಕೆಟ್ ಗಳನ್ನ ಪಡೆದರು. ಮಾಶುಕ್ ಪಂದ್ಯ ಶ್ರೇಷ್ಠಕ್ಕೆ ಭಾಜನರಾದರು.