ಬಾಲಕಿಯ ಚಿಕಿತ್ಸೆಗೆ ಸ್ಪಂದಿಸದ ಪೊಲೀಸರ ಅಮಾನವೀಯತೆ
ಮಂಗಳೂರು, ಡಿಸೆಂಬರ್ 21: ಬಾಲಕಿಯೊಬ್ಬಳ ತುರ್ತು ಚಿಕಿತ್ಸೆಗೆ ಸ್ಪಂದಿಸದೇ ಮಂಗಳೂರು ಪೊಲೀಸರು ಅಮಾನವೀಯವಾಗಿ ವರ್ತಿಸಿದ ಪ್ರಸಂಗ ಬೆಳಕಿಗೆ ಬಂದಿದೆ. ಈ ಕುರಿತು ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.
ಉಡುಪಿ ಜಿಲ್ಲೆಯ ಅರೆಶಿರೂರಿನ ಶಿಕ್ಷಕಿಯೊಬ್ಬರ ಪುತ್ರಿ ಅನುಷಾ ಗಂಭೀರ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದರು. ಗಂಭೀರ ಪರಿಸ್ಥಿತಿಯಲ್ಲಿದ್ದ ಬಾಲಕಿಯನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಬೇಕಾದ ಪರಿಸ್ಥಿತಿ ಸೃಷ್ಠಿಯಾಗಿತ್ತು.
ಈ ಸಂದರ್ಭದಲ್ಲಿ ಬಾಲಕಿಯ ಚಿಕಿತ್ಸೆಗೆ ಸ್ಪಂದಿಸಿದ ಉಡುಪಿ ಪೊಲೀಸರು ಆ್ಯಂಬ್ಯುಲೆನ್ಸ್ ತೆರಳಲು ಬೈಂದೂರಿನಿಂದ ಮಂಗಳೂರು ವಿಮಾನ ನಿಲ್ದಾಣದವರೆಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಿದ್ದರು. ಈ ಹಿನ್ನಲೆಯಲ್ಲಿ ಸುಮಾರು 140 ಕಿಲೋ ಮೀಟರ್ ದೂರದವರೆಗ ಝೀರೋ ಟ್ರಾಫಿಕ್ ನಲ್ಲಿ ಪೊಲೀಸ್ ಬೆಂಗಾವಲು ಹಾಗೂ ಪೈಲೆಟ್ ವಾಹನದ ಭದ್ರತೆಯಲ್ಲಿ ಆ್ಯಂಬುಲೆನ್ಸ್ ಅನುಷಾಳನ್ನು ಅತೀ ವೇಗವಾಗಿ 1 ಗಂಟೆಯ ಒಳಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಕರೆದೊಯ್ಯಬೇಕಾಗಿತ್ತು.
ಕಾಯುತ್ತಿತ್ತು ಜೆಟ್ ಏರ್ ವೇಸ್ ವಿಮಾನ
1 ಗಂಟೆಯ ಜೆಟ್ ಏರ್ ವೆಸ್ ವಿಮಾನದ ಮೂಲಕ ಬೆಂಗಳೂರಿಗೆ ಅನುಷಾಳನ್ನು ರವಾನೆ ಮಾಡಲು ಯೋಜನೆ ರೂಪಿಸಲಾಗಿತ್ತು. ಬೆಂಗಳೂರಿನ ಹೆಬ್ಬಾಳದ ಆಸ್ಟರ್ ಆಸ್ಪತ್ರೆಯಲ್ಲಿ ಅನುಷಾಳ ಆಪರೇಷನ್ ಗೆ ವೈದ್ಯರು ವ್ಯವಸ್ಥೆ ಮಾಡಿದ್ದರು. ಬೆಂಗಳೂರಿನ ವೈದ್ಯರು ಉಡುಪಿಗೆ ಬಂದು ಬಾಲಕಿಗೆ ಶಸ್ತ್ರ ಚಿಕಿತ್ಸೆ ಮಾಡಲು 48 ಗಂಟೆ ತಗಲುವುದರಿಂದ ವೈದ್ಯರು ಅನುಷಾಳನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದರು.
ಮಂಗಳೂರು ಪೊಲೀಸರ ಅಸಹಕಾರ
ಹೀಗೆ ಚಿಕಿತ್ಸೆಗಾಗಿ ಬಾಲಕಿಯನ್ನು ಕರೆತರುತ್ತಿದ್ದ ಆ್ಯಂಬುಲೆನ್ಸ್ ಗೆ ಮಂಗಳೂರು ಪೊಲೀಸರು ಅಸಹಕಾರ ತೋರಿಸಿದ್ದಾರೆ. ಬೈಂದೂರಿನಿಂದ ಮಂಗಳೂರು ವಿಮಾನ ನಿಲ್ದಾಣ ತಲುಪಲು ವೇಗವಾಗಿ ಬಂದ ಅಂಬ್ಯುಲೆನ್ಸ್ ಗೆ ಉಡುಪಿ - ಮಂಗಳೂರು ಗಡಿಯಿಂದ ಸಾಮಾನ್ಯ ಟ್ರಾಫಿಕ್ ನಲ್ಲಿ ಸಿಲುಕಿ ವಿಮಾನ ನಿಲ್ದಾಣಕ್ಕೆ ತೆರಳಬೇಕಾದ ಪರಿಸ್ಥಿತಿ ಸೃಷ್ಟಿಯಾಗಿತ್ತು.
15 ನಿಮಿಷ ತಡವಾಗಿ ಬಂದ ಆ್ಯಂಬುಲೆನ್ಸ್
ಇದರಿಂದ ಬೆಂಗಳೂರಿಗೆ ತೆರಳಬೇಕಾದ ವಿಮಾನ ಹೊರಡಲು ತಯಾರಾಗಿದ್ದರೂ ಮಂಗಳೂರು ಪೊಲೀಸರ ಝೀರೋ ಟ್ರಾಫಿಕ್ ವ್ಯವಸ್ಥೇ ಮಾಡದೇ ಅಸಹಕಾರ ತೋರಿದ ಹಿನ್ನೆಲೆಯಲ್ಲಿ ಅಂಬ್ಯುಲೆನ್ಸ್ ವಿಮಾನ ನಿಲ್ದಾಣ ತಲುಪಲ್ಲಿ 15 ನಿಮಿಷ ವಿಳಂಬವಾಗಿತ್ತು.
ಸಮಾಧಾನಕರ ಸಂಗತಿ ಎಂದರೆ ವಿಳಂಬವಾದರೂ ವಿಮಾನ ಸಂಸ್ಥೆ ಅಂಬ್ಯುಲೆನ್ಸ್ ಬರುವವರೆಗೆ ಕಾದು ಬಾಲಕಿಯನ್ನು ಸುರಕ್ಷಿತವಾಗಿ ಬೆಂಗಳೂರು ತಲುಪಿಸಿದೆ. ಅದಲ್ಲದೇ ಸಕಾಲಕ್ಕೆ ತೆರಳಿದ ಹಿನ್ನೆಲೆಯಲ್ಲಿ ಬಾಲಕಿಗೆ ವೈದ್ಯರು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನೆರವೇರಿಸಿದ್ದು ಬಾಲಕಿ ಅನುಷಾ ಆರೋಗ್ಯವಾಗಿದ್ದಾಳೆ.
ಪೊಲೀಸರ ಅಮಾನವೀಯ ವರ್ತನೆ
ಆದರೆ ಮಂಗಳೂರು ಪೊಲೀಸರ ಅಮಾನವೀಯ ವರ್ತನೆಗೆ ಸಾರ್ವಜನಿಕರಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.
ಬೈಂದೂರಿನಿಂದ, ಕುಂದಾಪುರ, ಉಡುಪಿ, ಪಡುಬಿದ್ರೆ ಮಾರ್ಗವಾಗಿ ಮುಲ್ಕಿಯವರೆಗೆ ಉಡುಪಿ ಜಿಲ್ಲಾ ಪೊಲೀಸರು ಝಿರೋ ಟ್ರಾಫಿಕ್ ವ್ಯವಸ್ಥೆ ಮಾಡಿದ್ದರು. ಆದರೆ ಉಡುಪಿ ಗಡಿದಾಟಿ ಮಂಗಳೂರು ಪ್ರವೇಶಿಸುತ್ತಿದ್ದಂತೆ ಆಂಬುಲೆನ್ಸ್ ತೆರಳಲು ಭಾರಿ ಸಮಸ್ಯೆ ಎದುರಾಗಿದೆ. ಮಂಗಳೂರು ಪೊಲೀಸ್ ಕಮೀಷನರೆಟ್ ವ್ಯಾಪ್ತಿಯಲ್ಲಿ ಪೊಲೀಸರು ಬಾಲಕಿಯ ಚಿಕಿತ್ಸೆಗೆ ಅಸಹಕಾರ ತೋರಿ ಅಮಾನವೀಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ.