ಬಶೀರ್ ಕೊಲೆ ಪ್ರಕರಣ: ಮತ್ತಿಬ್ಬರ ಬಂಧಿಸಿದ ಸಿಸಿಬಿ ಪೊಲೀಸ್
ಮಂಗಳೂರು, ಜನವರಿ 15: ನಗರದ ಕೊಟ್ಟಾರ ಚೌಕಿ ಬಳಿ ನಡೆದ ಅಬ್ದುಲ್ ಬಶೀರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಿಬ್ಬರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಕೇರಳ ಕಾಸರಗೋಡು ನಿವಾಸಿಗಳಾದ ಲತೀಶ್ (24) ಹಾಗು ಪುಷ್ಪರಾಜ್ (23) ಎಂದು ಗುರುತಿಸಲಾಗಿದೆ.
ಜನವರಿ 3ರಂದು ರಾತ್ರಿ 10:30 ರ ಸುಮಾರಿಗೆ ನಗರದ ಕೊಟ್ಟಾರ ಚೌಕಿ ಬಳಿ ಫಾಸ್ಟ್ ಪುಡ್ ವ್ಯಾಪಾರವನ್ನು ನಡೆಸುತ್ತಿದ್ದ ಅಬ್ದುಲ್ ಬಶೀರ್ ತನ್ನ ಫಾಸ್ಟ್ ಪುಡ್ ಹೊಟೇಲ್ ನ್ನು ಬಂದ್ ಮಾಡಿ ಮನೆಗೆ ಹೋರಟಿದ್ದರು. ಆ ಸಂದರ್ಭದಲ್ಲಿ ಅಲ್ಲಿಗೆ ಬೈಕ್ ನಲ್ಲಿ ಬಂದ ಆರೋಪಿಗಳು ಅಬ್ದುಲ್ ಬಶೀರ್ ಅವರ ಮೇಲೆ ಮರಣಾಂತಿಕವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದರು.
ಗಂಭೀರವಾಗಿ ಗಾಯಗೊಂಡ ಅಬ್ದುಲ್ ಬಶೀರ್ ರವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ದಾಖಲಾಗಿತ್ತು. ಈ ಮಧ್ಯೆ ಅಬ್ದುಲ್ ಬಶೀರ್ ಚಿಕಿತ್ಸೆ ಫಲಕಾರಿಯಾಗದೇ ಜನವರಿ 7 ರಂದು ಮೃತಪಟ್ಟಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ಸಿಸಿಬಿ ಪೊಲೀಸರು ಕೃತ್ಯದಲ್ಲಿ ಭಾಗಿಯಾದ 4 ಮಂದಿ ಆರೋಪಿಗಳಾದ ಶ್ರೀಜಿತ್ ಪಿ.ಕೆ , ಕಿಶನ್ ಪೂಜಾರಿ, ಧನುಷ್ ಪೂಜಾರಿ, ಸಂದೇಶ್ ಕೋಟ್ಯಾನ್ ಎಂಬವರನ್ನು ಈ ಹಿಂದೆ ಬಂಧಿಸಿದ್ದರು.
ಈ ಆರೋಪಿಗಳನ್ನು ಸಮಗ್ರ ತನಿಖೆ ಒಳಪಡಿಸಿದಾಗ ಈ ಕೊಲೆ ಕೃತ್ಯದಲ್ಲಿ ಇತರರು ಕೂಡಾ ಭಾಗಿಯಾದ ಬಗ್ಗೆ ಮಾಹಿತಿಕಲೆ ಹಾಕಿದ ಸಿಸಿಬಿ ಪೊಲೀಸರು ಈ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಇಬ್ಬರ ಬಂಧನದಿಂದ ಅಬ್ದುಲ್ ಬಶೀರ್ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 6 ಕ್ಕೆ ರಿದೆ.