ಮಂಗಳೂರು ಏರ್ಪೋರ್ಟ್ ರನ್ ವೇಗೆ ಅಪಾಯ ತಂದೊಡ್ಡಿದ ಮಹಾಮಳೆ
ಮಂಗಳೂರು, ಜೂನ್ 5: ಮಂಗಳೂರಿನಲ್ಲಿ ಮೇ 29 ರಂದು ಸುರಿದ ಮಹಾಮಳೆ ಮಂಗಳೂರಿನಲ್ಲಿ ಸೃಷ್ಠಿಸಿದ ಅವಾಂತರಗಳು ಒಂದೊಂದಾಗಿ ಇನ್ನೂ ಬೆಳಕಿಗೆ ಬರುತ್ತಲೇ ಇವೆ. ಮಹಾಮಳೆಯಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ರನ್ ವೇಯ ತಡೆಗೋಡೆ ಬಿರುಕು ಬಿಟ್ಟಿದ್ದು ತಡವಾಗಿ ಗೊತ್ತಾಗಿದೆ.
ಮೇ 29 ರಂದು ನಿರಂತರವಾಗಿ ಸುರಿದಿದ್ದ ಮಹಾಮಳೆಗೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಒಂದು ಪಾರ್ಶ್ವದ ತಡೆಗೋಡೆಯ ಕೆಳಗೆ ಮಣ್ಣು ಕುಸಿದಿದೆ. ಇದರಿಂದ ತಡೆಗೋಡೆ ಬಿರುಕು ಬಿಟ್ಟಿದೆ.
ಮಂಗಳೂರಿನಲ್ಲಿ ಮತ್ತೆ ಬಿರುಗಾಳಿ ಸಹಿತ ಭಾರಿ ಮಳೆಯ ಎಚ್ಚರಿಕೆ
ಮಂಗಳೂರಿನಲ್ಲಿರುವುದು ಟೇಬಲ್ ಟಾಪ್ ವಿಮಾನ ನಿಲ್ದಾಣವಾಗಿದ್ದು, ಗುಡ್ಡದ ಮೇಲೆ ಎತ್ತರದಲ್ಲಿ ನಿರ್ಮಿಸಲಾಗಿರುವ ಈ ವಿಮಾನ ನಿಲ್ದಾಣದ ರನ್ ವೇ ಸುತ್ತ ಕಲ್ಲಿನ ತಡೆಗೋಡೆ ನಿರ್ಮಿಸಲಾಗಿದೆ. ಇದೀಗ ತಡೆಗೋಡೆ ಸಂಪೂರ್ಣ ಬಿರುಕು ಬಿಟ್ಟಿದೆ.
ತಡೆಗೋಡೆ ಬಿರುಕು ಬಿಟ್ಟ ಮಾಹಿತಿಯನ್ನು ಸ್ಥಳೀಯ ನಿವಾಸಿಗಳು ವಿಮಾನ ನಿಲ್ದಾಣ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿರಲಿಲ್ಲಎಂದು ದೂರಲಾಗಿದೆ. ಆದರೆ ಇಂದು ಸ್ಥಳಕ್ಕೆ ವಿಮಾನ ನಿಲ್ದಾಣದ ಅಧಿಕಾರಿಗಳು ಆಗಮಿಸಿ ಕುಸಿದ ಮಣ್ಣನ್ನು ಪರಿಶೀಲನೆ ನಡೆಸಿದ್ದು , ಬಿರುಕಿನಿಂದ ಯಾವುದೇ ಅಪಾಯ ಇಲ್ಲ ಎಂದು ತಿಳಿಸಿದ್ದಾರೆ.
ಈ ಭೂಕುಸಿತದಿಂದ ಅಕ್ಕಪಕ್ಕದ ಗದ್ದೆಗಳಿಗೂ ಹಾನಿಯುಂಟಾಗಿದ್ದು, ವಿಮಾನ ನಿಲ್ದಾಣದಲ್ಲಿ ಸರಿಯಾದ ಡ್ರೈನೇಜ್ ವ್ಯವಸ್ಥೆ ಇಲ್ಲದಿರುವುದು ಈ ಭೂಕುಸಿತಕ್ಕೆ ಕಾರಣ ಎಂದು ಆರೋಪಿಸಿದ್ದಾರೆ.