ರೈಲಿನಲ್ಲಿ ವಿದ್ಯಾರ್ಥಿನಿಗೆ ಕಿರುಕುಳ: ಯುವಕ ಬಂಧನ
ಕಾಸರಗೋಡು, ಅಕ್ಟೋಬರ್, 27: ಕಣ್ಣೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಪರುಶುರಾಮ್ ರೈಲಿನಲ್ಲಿ ಯುವಕನೊಬ್ಬ ವಿದ್ಯಾರ್ಥಿನಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಬುಧವಾರ ರಾತ್ರಿ ನಡೆದಿದೆ.
ಕಿರುಕುಳ ನೀಡಿದ ದುಷ್ಕರ್ಮಿಯನ್ನು ಉತ್ತರ ಪ್ರದೇಶದ ಮುಹಮ್ಮದ್ ಖಯ್ಯುಮ್ ( 24) ಎಂದು ಗುರುತಿಸಲಾಗಿದೆ. ರೈಲಿನಲ್ಲಿ ಇಂತಹ ಕಿರುಕುಳ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದೆ. ಕಿರುಕುಳ ನೀಡಿದ ಯುವಕನನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ.
ಕಾಞಂಗಾಡ್ ನಿವಾಸಿಯಾಗಿರುವ ಕಾಲೇಜು ವಿದ್ಯಾರ್ಥಿನಿ ತಲಶ್ಶೇರಿಯಿಂದ ರೈಲಿಗೆ ಹತ್ತಿದ್ದಳು.ರೈಲು ಕಾಞ೦ಗಾಡ್ ನಿಲ್ದಾಣಕ್ಕೆ ತಲುಪುತ್ತಿದ್ದಂತೆ ಮುಹಮ್ಮದ್ ಖಯ್ಯುಮ್ ಕಾಲೇಜು ವಿದ್ಯಾರ್ಥಿನಿಗೆ ಕಿರುಕುಳ ನೀಡಿದ್ದಾನೆ ಎಂದು ತಿಳಿದು ಬಂದಿದೆ.
ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯು ರಕ್ಷಣೆಗಾಗಿ ಬೊಬ್ಬೆ ಹಾಕಿದ್ದಳು ಎನ್ನಲಾಗಿದೆ. ಆಕೆಯ ಬೊಬ್ಬೆ ಕೇಳಿ ರೈಲು ನಿಲ್ದಾಣ ಮತ್ತು ಪ್ಲಾಟ್ ಫಾಮ್ ನಲ್ಲಿದ್ದವರು ಧಾವಿಸಿ ಬಂದು ಮುಹಮ್ಮದ್ ಖುಯ್ಯಮ್ ನನ್ನು ಥಳಿಸಿ ನಂತರ ಪೊಲೀಸರಿಗೆ ಒಪ್ಪಿಸಿದರು.
ಹೊಸದುರ್ಗ ಪೊಲೀಸರು ಆರೋಪಿಯನ್ನು ಬಂಧಿಸಿ , ಬಳಿಕ ಆತನನ್ನು ಜಿಲ್ಲಾಸ್ಪತ್ರೆಯ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ .