ಗೌರಿಗೆ ಬಿದ್ದಂತೆ ನನಗೂ ಗುಂಡು ಬೀಳಬಹುದು: ಮಟ್ಟುಗೆ ಜೀವ ಬೆದರಿಕೆ
ಮಂಗಳೂರು, ಸೆಪ್ಟೆಂಬರ್ 24: "ಗೌರಿಗೆ ಬಿದ್ದಂತೆ ನನಗೂ ಗುಂಡು ಬೀಳಬಹುದು, ನಿಮಗೂ ಬೀಳಬಹುದು. ಈ ಬಗ್ಗೆ ನನಗೆ ಗುಪ್ತಚರ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ" ಎಂದು ಮುಖ್ಯಮಂತ್ರಿಗಲ ಮಾಧ್ಯಮ ಸಲಹೆಗಾರ ದಿನೇಶ್ ಅಮಿನ್ ಮಟ್ಟು ಹೇಳಿದ್ದಾರೆ.
ಇಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅವರು ಮಾತನಾಡಿ, ನನಗೆ ಸಾವಿನ ಬಗ್ಗೆ ಭಯವಿಲ್ಲ. ಆದರೆ ಮಾಡಬೇಕಾದ ಕೆಲಸಗಳು ಬಾಕಿ ಉಳಿದು, ಅತೃಪ್ತ ಆತ್ಮವಾಗಿ ಪ್ರಾಣ ಬಿಡಬೇಕಲ್ಲ ಎಂಬುದೇ ಯೋಚನೆ ಎಂದು ಅವರು ಹೇಳಿದ್ದಾರೆ.
ಇತ್ತೀಚೆಗೆ ಆರೆಸ್ಸೆಸ್ ನ ಹಲವು ಸಭೆಗಳು ನಡೆದಿವೆ. ಆ ವೇಳೆ "ಮಟ್ಟುವನ್ನು ಮಟ್ಟ ಹಾಕಬೇಕು" ಎಂಬ ಬಗ್ಗೆ ಚರ್ಚೆಗಳಾಗಿವೆ. ಅಂದಹಾಗೆ ಈ ಸಭೆಯಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ಕೂಡ ಇದ್ದರು ಎಂಬ ಮಾಹಿತಿ ಇದೆ ಎಂದು ದಿನೇಶ್ ಅಮಿನ್ ಮಟ್ಟು ಅವರು ಹೇಳಿದ್ದಾರೆ.
ಕೆಲವು ಎಡಪಂಥೀಯ ಹಾಗೂ ಪ್ರಗತಿಪರ ಚಿಂತಕರಿಗೆ ರಾಜ್ಯ ಸರಕಾರದಿಂದಲೇ ರಕ್ಷಣೆ ಒದಗಿಸಲು ನಿರ್ಧರಿಸಲಾಗಿತ್ತು. ಸೆಪ್ಟೆಂಬರ್ ಐದರಂದು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿನ ಮನೆಯ ಮುಂದೆ ಪತ್ರಕರ್ತೆ ಗೌರಿಲಂಕೇಶ್ ಹತ್ಯೆಯಾದ ನಂತರ ಸರಕಾರ ಈ ನಿರ್ಧಾರಕ್ಕೆ ಬಂದಿತ್ತು.
ಇದೀಗ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರರಿಗೆ ಜೀವ ಬೆದರಿಕೆ ಇದೆ ಎಂಬುದನ್ನು ಬಹಿರಂಗ ಮಾಡಿದ್ದಾರೆ.