2 ಕೋಟಿ ಹಫ್ತಾಗೆ ದುಬೈನಿಂದ ಕಲಿಯೋಗೀಶನ ಬೆದರಿಕೆ ಕರೆ
ಕಾಸರಗೋಡು, ಮಾರ್ಚ್ 16: ಬಂದ್ಯೋಡು ಬಳಿಯ ಮುಟ್ಟಮ್ ನಿವಾಸಿ, ತೊಕ್ಕೋಟ್ಟುವಿನ ಬಾರ್ ವೊಂದರ ಮಾಲೀಕರಿಗೆ ಭೂಗತ ಪಾತಕಿ ಕಲಿಯೋಗೀಶ್ 2 ಕೋಟಿ ರುಪಾಯಿ ನೀಡುವಂತೆ ಬೆದರಿಕೆಯೊಡ್ದಿದ ಸಂಗತಿ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಾರ್ ಮಾಲೀಕರು ಕುಂಬಳೆ ಪೊಲೀಸರಿಗೆ ದೂರು ನೀಡಿದ್ದಾರೆ.
ಕುಂಬಳೆ ಸರ್ಕಲ್ ಇನ್ ಸ್ಪೆಕ್ಟರ್ ವಿ.ವಿ ಮನೋಜ್ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ. ತೊಕ್ಕೋಟ್ಟುವಿನ ಸುಧಾ ಬಾರ್ ನ ಮಾಲೀಕ- ಕಾಸರಗೋಡು ಬಂದ್ಯೋಡು ಬಳಿಯ ಮುಟ್ಟಮ್ ನಿವಾಸಿ ಶ್ರೀಧರ ಶೆಟ್ಟಿ (67) ಅವರಿಗೆ ಬೆದರಿಕೆ ಕರೆ ಬಂದಿದೆ. ಬ್ಯಾಂಕಾಕ್ ನಿಂದ ಕಲಿ ಯೋಗೀಶ್ ಕರೆ ಮಾಡುತ್ತಿರುವುದಾಗಿ ತಿಳಿಸಿ, 2 ಕೋಟಿ ರುಪಾಯಿ ನೀಡುವಂತೆ ಬೆದರಿಕೆ ಒಡ್ಡಿದ್ದ ಎನ್ನಲಾಗಿದೆ.[ಮಂಗಳೂರಿನಲ್ಲಿ ವಿಚಾರವಾದಿ ನರೇಂದ್ರ ನಾಯಕ್ ಮೇಲೆ ದಾಳಿಗೆ ಯತ್ನ?]
ಆದರೆ ಈ ವೇಳೆ ಬೆದರಿಕೆ ಕರೆಗೆ ಶ್ರೀಧರ ಶೆಟ್ಟಿ ಸೊಪ್ಪು ಹಾಕಿರಲಿಲ್ಲ. ನಂತರ ಎರಡು ಬಾರಿ ಬಂದ್ಯೋಡಿನ ಶ್ರೀಧರ್ ಅವರ ಮನೆಗೆ ಬಂದ ನಾಲ್ಕು ಜನರ ತಂಡ, ತಾವು ಕಲಿ ಯೋಗೀಶನ ಕಡೆಯವರೆಂದು ಪರಿಚಯಿಸಿಕೊಂಡರು. ತಕ್ಷಣವೇ ಕೇಳಿದ ಹಣ ನೀಡದಿದ್ದಲ್ಲಿ ಜೀವಕ್ಕೆ ಅಪಾಯ ಇರುವುದಾಗಿ ಪಿಸ್ತೂಲು ತೋರಿಸಿ ಬೆದರಿಕೆ ಹಾಕಿದ್ದಾರೆ ಎಂದು ದೂರು ನೀಡಲಾಗಿದೆ.[40 ರು. ಶುಲ್ಕ ಬದಲಿಗೆ 4 ಲಕ್ಷ ರು. ಮೊತ್ತಕ್ಕೆ ಸ್ವೈಪ್ ಮಾಡಿದ ಟೋಲ್ ಸಿಬ್ಬಂದಿ!]
ಕಲಿ ಯೋಗೀಶನ ನಾಲ್ವರು ಸಹಚರರು ಆಗಮಿಸಿದ ದೃಶ್ಯ ಶ್ರೀಧರ್ ಮನೆಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಶ್ರೀಧರ್ ಅವರು ನೀಡಿದ ದೂರಿನನ್ವಯ ಕುಂಬಳೆ ಪೊಲೀಸರು ಸಿಸಿ ಟಿವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಿ ತನಿಖೆ ಆರಂಭಿಸಿದ್ದಾರೆ. ನಾಲ್ವರ ತಂಡ ಸಂಚರಿಸಿದ ಕೇರಳ ನೋಂದಾಯಿತ ಸ್ವಿಫ್ಟ್ ಕಾರನ್ನು ಗುರುತಿಸಲಾಗಿದ್ದು, ಇದು ಬಾಡಿಗೆಗೆ ಪಡೆದ ಕಾರೆಂದು ತಿಳಿದು ಬಂದಿದೆ.