ಓಟಿಗಾಗಿ ಶರತ್ ಮಡಿವಾಳ ಶವಯಾತ್ರೆ - ರಮಾನಾಥ ರೈ ಆರೋಪ
ಮಂಗಳೂರು, ಜುಲೈ 11: "ಕಲ್ಲಡ್ಕ, ಬಂಟ್ವಾಳದಲ್ಲಿದ್ದ ನಿಷೇಧಾಜ್ಞೆಯನ್ನು ಉಲ್ಲಂಘಿಸಿ ಶವಯಾತ್ರೆಯನ್ನು ನಡೆಸಲಾಗಿದೆ. ಬಿಜೆಪಿಯವರು ಸೂತಕದ ಮನೆಯಲ್ಲಿ ಓಟಿನ ಲೆಕ್ಕಾಚಾರ ನಡೆಸಿದ್ದಾರೆ. ಕಾಂಗ್ರೆಸ್ ಮುಖಂಡರಾಗಲಿ ಕಾರ್ಯಕರ್ತರಾಗಲಿ ಯಾರೂ ಈ ರೀತಿ ಮಾಡಿಲ್ಲ,"ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಆರೋಪಿಸಿದ್ದಾರೆ.
ಕೊಡಗಿನಲ್ಲಿ ಸದಾನಂದ ಗೌಡ, ಕರಂದ್ಲಾಜೆ ಅಕ್ರಮ ಆಸ್ತಿ: ರಮಾನಾಥ ರೈ
ಸೋಮವಾರ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, "ಜಿಲ್ಲೆಯಲ್ಲಿ ಕೋಮು ದ್ವೇಷಕ್ಕೆ ಬಲಿಯಾದ ಶರತ್, ಅಶ್ರಫ್ ಸಾವಿನ ಬಗ್ಗೆ ತುಂಬಾ ನೋವಾಗಿದೆ. ಈ ರೀತಿಯ ಕೋಮು ದ್ವೇಷದ ಕೊಲೆಗಳು ಪೂರ್ವ ನಿಯೋಜಿತವಾಗಿವೆ. ಬಹು ಸಂಖ್ಯಾತರ ಅಥವಾ ಅಲ್ಪ ಸಂಖ್ಯಾತರ ಹೆಸರಲ್ಲಿ ನಡೆಯುವ ಕೋಮುವಾದವನ್ನು ಸಹಿಸುವುದಿಲ್ಲ," ಎಂದು ಎಚ್ಚರಿಕೆ ನೀಡಿದ್ದಾರೆ.
ಇನ್ನು ಕೋಮು ದ್ವೇಷದಲ್ಲಿ ಮೃತಪಟ್ಟವರ ಹೆಸರಿನಲ್ಲಿ ಸಚಿವರ ವಿರುದ್ಧ ಆರೋಪಿಸಿ ರಾಜಕೀಯ ಹೇಳಿಕೆ ನೀಡುತ್ತಿರುವ ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಮತ್ತು ಸಂಸದೆ ಶೋಭಾ ಕರಂದ್ಲಾಜೆ ಅವರ ಬೇನಾಮಿ ಆಸ್ತಿಗಳ ಬಗ್ಗೆ ಜಾರಿ ನಿರ್ದೇಶನಾಲಯದಿಂದ (ಇ.ಡಿ) ತನಿಖೆಯಾಗಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದರು.
ಜಿಲ್ಲೆಯಲ್ಲಿ ಉಂಟಾಗಿರುವ ಕೋಮು ದ್ವೇಷದ ವಾತಾವರಣವನ್ನು ತಿಳಿಗೊಳಿಸಲು, ಅಹಿತಕರ ಘಟನೆಗಳನ್ನು ತಡೆಯಲು ಹಾಗೂ ಸಾರ್ವಜನಿಕರಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡಲು ಗುರುವಾರ ಜಿಲ್ಲಾ ಮಟ್ಟದಲ್ಲಿ ಶಾಂತಿ ಸಭೆಯನ್ನು ಕರೆಯಲು ಸೂಚಿಸಿದ್ದೇನೆ. ಮತ್ತು ಜಿಲ್ಲೆಯಲ್ಲಿ ಕೋಮು ದ್ವೇಷದ ವಾತಾವರಣಕ್ಕೆ ಕಾರಣರಾಗುವವರ ವಿರುದ್ಧ ಕಠಿಣ ಕ್ರಮಕ್ಕೆ ಪೊಲೀಸರಿಗೆ ಮುಖ್ಯ ಮಂತ್ರಿ ಈಗಾಗಲೇ ಸೂಚನೆ ನೀಡಿದ್ದಾರೆ. ಹಿರಿಯ ಅಧಿಕಾರಿಗಳ ಜೊತೆ ಸಮಾಲೋಚನೆಯನ್ನು ನಡೆಸಿದ್ದಾರೆ ಎಂದು ರಮಾನಾಥ ರೈ ತಿಳಿಸಿದ್ದಾರೆ.
ಇದೇ ವೇಳೆ ಸಚಿವ ಯು.ಟಿ. ಖಾದರ್ ಮಾತನಾಡಿ ಕರಾವಳಿಯಲ್ಲಿ ಅಹಿತಕರ ಘಟನೆ ಬೆನ್ನಲ್ಲೇ ಬಿಜೆಪಿ, ಎಸ್ಡಿಪಿಐಯಿಂದ ಅನಗತ್ಯ ಹೇಳಿಕೆಗಳು ಬರುತ್ತಿವೆ ಎಂದು ಆರೋಪಿಸಿದ್ದಾರೆ.
ಮಂಗಳೂರಲ್ಲಿ ಒಳ್ಳೆಯ ಕೆಲಸಕ್ಕಿಂತ ಕೆಟ್ಟ ಕೆಲಸಗಳು ಹೈಲೈಟ್ ಆಗುತ್ತಿವೆ. ಆರ್ಎಸ್ಎಸ್ ಕಾರ್ಯಕರ್ತ ಶರತ್ ಮೇಲೆ ದಾಳಿಯಾದಾಗ ಆತನನ್ನು ಆಸ್ಪತ್ರೆಗೆ ಸಾಗಿಸಿದ್ದ ರವೂಫ್ ಕೂಡಾ ಒಬ್ಬ ಮುಸ್ಲಿಂ. ಇದು ಬಿಜೆಪಿಯವರಿಗೆ ಗೊತ್ತಾಗಲಿಲ್ಲ ಎಂದರು.
ಸದಾನಂದ ಗೌಡರ ನಾಟಕದ ಕಣ್ಣೀರು ಬೇಡ: ಜೆಡಿಎಸ್ ವಕ್ತಾರ ಭೋಜೇ ಗೌಡ
ಕಾನೂನು ಮುರಿದು ಪ್ರತಿಭಟನೆ ಮಾಡಿದ್ದು ಬಿಜೆಪಿಯವರು. ಆದರೆ, ಅವರೇ ಮಾಧ್ಯಮದೆದುರು ಕೂತು ಸರ್ಕಾರದ ಮೇಲೆ ಆರೋಪ ಮಾಡುತ್ತಾರೆ. ಅಶಾಂತಿ ಸೃಷ್ಟಿಸಿದ್ದು ಕಾಂಗ್ರೆಸ್ ಎಂದು ಆರೋಪಿಸುತ್ತಾರೆ. ಚುನಾವಣೆ ಬಂದಾಗ ಬಿಜೆಪಿ, ಎಸ್ಡಿಪಿಐ ಒಗ್ಗಟ್ಟಾಗುತ್ತವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇತ್ತೀಚೆಗೆ ಬಂಟ್ವಾಳದಲ್ಲಿ ಹತ್ಯೆಗೀಡಾದ ಅಶ್ರಫ್ ಕಲಾಯಿ ಮತ್ತು ಶರತ್ ಮಡಿವಾಳ ಅವರಿಗೆ ಸರಕಾರದಿಂದ ಸೂಕ್ತ ಪರಿಹಾರ ನೀಡಲಾಗುವುದು ಮತ್ತು ಹತ್ಯೆ ಯತ್ನದಲ್ಲಿ ಗಾಯಗೊಂಡವರಿಗೆ ಮುಖ್ಯಮಂತ್ರಿ ನಿಧಿಯಿಂದ ಪರಿಹಾರ ನೀಡಲಾಗುವುದು ಎಂದು ಆಹಾರ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ತಿಳಿಸಿದರು.
ಪತ್ರಿಕಾ ಗೊಷ್ಠಿಯಲ್ಲಿ ಸಚಿವ ಯು.ಟಿ.ಖಾದರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಮಾಜಿ ಸಚಿವ ಅಭಯ ಚಂದ್ರ ಜೈನ್, ವಿಧಾನ ಪರಿಷತ್ನ ಮುಖ್ಯ ಸಚೇತಕ ಐವನ್ ಡಿ ಸೋಜ ಮೊದಲಾದವರು ಉಪಸ್ಥಿತರಿದ್ದರು.