ಮಂಗಳೂರಿನ ಮೂಡುಶೆಡ್ದೆ ಬಳಿ ರಿಕ್ಷಾ ಚಾಲಕನ ಮೇಲೆ ಚಿರತೆ ದಾಳಿ
ಮಂಗಳೂರು, ಜನವರಿ. 04 : ನಗರದ ಹೊರವಲಯದ ಮೂಡುಶೆಡ್ದೆ ರೈಲ್ವೆ ಟ್ರ್ಯಾಕ್ ಸಮೀಪ ರಿಕ್ಷಾದಲ್ಲಿ ತೆರಳುತ್ತಿದ್ದ ವೇಳೆ ಚಿರತೆಯೊಂದು ದಾಳಿ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಚಾಲಕನಿಗೆ ಅಲ್ಪ ಸ್ವಲ್ಪ ಗಾಯಗಳಾಗಿದ್ದು. ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾನೆ. ಬೊಂದೆಲ್ ಕೃಷ್ಣನಗರ ನಿವಾಸಿ ಸಿದ್ದಿಕ್ (28) ಚಿರತೆ ದಾಳಿಗೊಳಗಾದ ರಿಕ್ಷಾ ಚಾಲಕ.
ಜನವರಿ 1ರಂದು ರಾತ್ರಿ ಸುಮಾರು 11.15ರ ಹೊತ್ತಿಗೆ ಬಾಡಿಗೆಗೆ ಹೋಗಿ ಮರಳಿ ಬೊಂದೆಲ್ ನಿಂದ ಮೂಡುಶೆಡ್ದೆ ರೈಲ್ವೆ ಟ್ರ್ಯಾಕ್ ಸಮೀಪದ ಮರವೂರು ಡ್ಯಾಂ ರಸ್ತೆಯಲ್ಲಿ ಬರುತ್ತಿದ್ದ ವೇಳೆ ರಸ್ತೆ ಬದಿಯಲ್ಲಿ ಚಿರತೆಯೊಂದು ಕುಳಿತಿತ್ತು. ಇದನ್ನು ನೋಡಿ ಸಿದ್ದಿಕ್ ಚಿರತೆ ಕಡೆ ರಿಕ್ಷಾದ ಲೈಟ್ ಹಾಕಿದಾಕ್ಷಣ ಚಿರತೆ ಏಕಾಏಕಿ ರಿಕ್ಷಾ ಮೇಲೆ ದಾಳಿ ಮಾಡಿದೆ.
ಇದನ್ನು ಕಂಡು ಗಾಬರಿಗೊಂಡ ಸಿದ್ದಿಕ್ ರಿಕ್ಷಾವನ್ನು ಯದ್ವಾತದ್ವಾ ಚಲಾಯಿಸಿದ್ದು, ರಿಕ್ಷಾ ಗದ್ದೆಗೆ ಉರುಳಿ ಬಿದ್ದಿದೆ. ಸ್ವಲ್ಪ ಸಮಯದ ಬಳಿಕ ಚೇತರಿಸಕೊಂಡು ಸಿದ್ದಿಕ್ ಮೇಲಕ್ಕೆ ಬಂದಾಗ ಚಿರತೆ ಆ ಸ್ಥಳದಿಂದ ನಾಪತ್ತೆಯಾಗಿತ್ತು.
ಇದರಿಂದ ಅಲ್ಲಿನ ಜನರು ಭಯ ಭೀತರಾಗಿದ್ದಾರೆ. ಈ ಬಗ್ಗೆ ಅರಣ್ಯ ಅಧಿಕಾರಿಗಳಿಗೆ ದೂರು ನೀಡಲಾಗಿದ್ದು, ಶೋಧ ಕಾರ್ಯ ನಡೆಸಿದರೂ ಏನೂ ಪ್ರಯೋಜನವಾಗಲಿಲ್ಲ.
ಇದರಿಂದ ಭಯಗೊಂಡಿರುವ ಅಲ್ಲಿನ ಜನರು ಚಿರತೆಯನ್ನು ಪತ್ತೆ ಹಚ್ಚುವಂತೆ ಅರಣ್ಯ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.