ವೈಕುಂಠ ಏಕಾದಶಿ : ಸ್ವರ್ಗದ ಬಾಗಿಲು ತೆರೆದಿದೆ, ಬಾ ಭಕ್ತನೆ!
ಮಂಗಳೂರು, ಜನವರಿ. 08 : ಕರಾವಳಿಯಲ್ಲಿ ವೈಕುಂಠ ಏಕಾದಶಿ ಸಂಭ್ರಮ. ಮುಂಜಾನೆಯಿಂದಲೇ ದೇವಾಲಯಗಳಲ್ಲಿ ಸರತಿ ಸಾಲು. ವೆಂಕಟೇಶ್ವರನ ದರ್ಶನ ಪಡೆದ ಭಕ್ತರು ಪುನೀತರಾಗಿ ಹೊರಕ್ಕೆ ಬರುತ್ತಿದ್ದಾರೆ.
ಏಕಾದಶಿಯಂದು ಶ್ರೀ ವಿಷ್ಣುವಿನ ವಾಸಸ್ಥಾನ ವೈಕುಂಠ ದ್ವಾರ ತೆರೆಯುವ ದಿನ ಎಂಬ ನಂಬಿಕೆ. ಹಾಗೂ ವೈಕುಂಠ ಏಕಾದಶಿ ದಿನ ಉಪವಾಸವಿದ್ದು ದೇವಾಲಯಗಳ ದರ್ಶನ ಪಡೆದರೆ ಪುಣ್ಯ ಪ್ರಾಪ್ತಿಯಾಗುತ್ತದೆ.
ಹಾಗೂ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ. ಇದರಿಂದ ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ದೇವಸ್ಥಾನ, ಕಾರ್ ಸ್ಟ್ರೀಟ್ ಬಳಿ ಇರುವ ವೆಂಕಟರಮಣ ದೇವಸ್ಥಾನ ಹಾಗೂ ಮಂಗಳಾದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಕೈಗೊಳ್ಳಲಾಗಿತ್ತು.
ನಗರದ ಎಲ್ಲಾ ವೆಂಕಟೇಶ್ವರ ದೇಗುಲ ಗಳಲ್ಲಿ "ವೈಕುಂಠ ದ್ವಾರ' ವಿಶೇಷ ಆಕರ್ಷಣೆಯಾಗಿತ್ತು. ಈ ಅಪೂರ್ವ ಕ್ಷಣಗಳಿಗಾಗಿ ನಸುಕಿನಿಂದಲೇ ದೇವಸ್ಥಾನಗಳಿಗೆ ಭಕ್ತಸಾಗರ ಹರಿದುಬಂದಿತು.
ವೈಕುಂಠ ಏಕಾದಶಿಯ ನಿಮಿತ್ತ ಭಕ್ತರ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.
ಇನ್ನು ಉಡುಪಿಯ ಕೃಷ್ಣ ಮಠದಲ್ಲೂ ಕೂಡ ಜನರು ಉಪವಾಸದಿಂದ ಬಂದು ಪೂಜೆ ಸಲ್ಲಿಸಿದ್ದಾರೆ, ಭಕ್ತಾದಿಗಳು ಮುಂಜಾನೆ ತಮ್ಮ ಮನೆ- ಮನೆಗಳಲ್ಲಿ ಹಾಗೂ ದೇಗುಲಗಳಲ್ಲಿ ಪೂಜೆ ಪುನಸ್ಕಾರ ಮಾಡಿದರು.