ಇಂದಿನಿಂದ ಐದು ದಿನ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವದ ಸಂಭ್ರಮ
ಮಂಗಳೂರು, ನವೆಂಬರ್ 13 : ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥನ ಸನ್ನಿಧಿಯಲ್ಲಿ ಲಕ್ಷದೀಪೋತ್ಸವ ಆರಂಭವಾಗಿದೆ. ಶ್ರೀ ಕ್ಷೇತ್ರ ಸೇರಿದಂತೆ ಸುತ್ತಮುತ್ತಲ ಪರಿಸರವೆಲ್ಲ ಬಣ್ಣ-ಬಣ್ಣದಿಂದ ಕಂಗೊಳಿಸುತ್ತಿದೆ.
ಮಂಜುನಾಥನಿಗೆ ಅತಿ ಪ್ರಿಯವಾದ ಲಕ್ಷ ದೀಪೋತ್ಸವಕ್ಕೆ ಚಾಲನೆ ದೊರೆತಿದ್ದು, ಇನ್ನು ಐದು ದಿನಗಳ ಕಾಲ ಅದ್ಧೂರಿಯಾಗಿ ದೀಪೋತ್ಸವ ನಡೆಯಲಿದೆ.
ಮಂಜುನಾಥನಿಗೆ ಅತಿ ಪ್ರಿಯವಾದ ಈ ದೀಪೋತ್ಸವಕ್ಕೆ ಹಿಂದೆ ಮಂಜುನಾಥನ ಸನ್ನಿದಿಯ ಸುತ್ತಲೂ ಒಂದು ಲಕ್ಷ ದೀಪಗಳನ್ನು (ಹಣತೆಗಳನ್ನು) ಉರಿಸುತ್ತಿದ್ದರು.ಆದರೆ ಇತ್ತೀಚಿನ ದಿನಗಳಲ್ಲಿ ವಿದ್ಯುತ್ ದೀಪಗಳಿಂದಲೇ ದೇವಾಲಯವನ್ನು ಶೃಂಗರಿಸಲಾಗಿದೆ.
ಕಾರ್ತಿಕ ಮಾಸದಂದು ಈ ಲಕ್ಷ ದೀಪೋತ್ಸವ ನಡೆಯುತ್ತಿದ್ದು, ಮಂಜುನಾಥ ಸ್ವಾಮಿ ಈ ಸಂದರ್ಭದಲ್ಲಿ ಕ್ಷೇತ್ರದಿಂದ ಹೊರಗೆ ಸಂಚರಿಸುತ್ತಾನೆ. ವಿವಿಧ ಪ್ರದೇಶಗಳಿಗೆ ಮಂಜುನಾಥನ ಮೂರ್ತಿಯೊಂದಿಗೆ ಮೆರವಣಿಗೆ ಸಾಗಿ ಪ್ರಮುಖ ಐದು ಕಟ್ಟೆಗಳಲ್ಲಿ ವಿಶೇಷ ಪೂಜೆ ನೆರವೇರಿಸಲಾಗುತ್ತದೆ.
ಹಿಂದೆ ದೇವರನ್ನು ನೋಡಲು ಕ್ಷೇತ್ರಕ್ಕೆ ಹೋಗಲಾಗದವರಿಗೆ ದೇವರೇ ಅವರವರ ಊರಿಗೆ ಬರುತ್ತಾನೆನ್ನುವ ನಂಬಿಕೆ ಇತ್ತು. ಅದು ಇಂದಿಗೂ ಮುಂದುವರೆದಿದೆ.
ದೀಪಗಳಿಂದ ಪರಮ ಪವಿತ್ರ ಧರ್ಮಸ್ಥಳ ಕ್ಷೇತ್ರ ಝಗಮಗಿಸುತ್ತಿದ್ದು, ಭಕ್ತರ ಪಾಲಿಗೆ ದೀಪ ಅಲಂಕಾರವನ್ನು ನೋಡೋದೆ ಕಣ್ಣಿಗೆ ಹಬ್ಬವಾಗಿದೆ. ದೀಪೋತ್ಸವದ ಪ್ರಯುಕ್ತ ಬೆಳ್ಳಿಯ ಬ್ರಹ್ಮರಥೋತ್ಸವವೂ ನಡೆಯಲಿದೆ.
ದೇಶ ವಿದೇಶದಿಂದ ಆಗಮಿಸಿದ ಲಕ್ಷಾಂತರ ಮಂದಿ ಭಕ್ತರು ಈ ಅಪೂರ್ವ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ. ಕ್ಷೇತ್ರದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ಈ ಎಲ್ಲಾ ಕಾರ್ಯಕ್ರಮಗಳು ಸುಸೂತ್ರವಾಗಿ ನಡೆಲಿದೆ.
ಎಲ್ಲಾ ದಿನಗಳಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯುತ್ತದೆ. ಲಕ್ಷದೀಪೋತ್ಸವದ ಅಂಗವಾಗಿ ಸರ್ವಧರ್ಮ ಸಮ್ಮೇಳನ ಹಾಗೂ ಸಾಹಿತ್ಯ ಸಮ್ಮೇಳನವೂ ನಡೆಯಲಿದೆ.
ಒಟ್ಟಿನಲ್ಲಿ ಈ ಬಾರಿ ಶ್ರೀ ಕ್ಷೇತ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದರಿಂದ ಮತ್ತಷ್ಟು ಮೆರಗು ಬಂದಂತಾಗಿದೆ.