ಕುಕ್ಕೆ ದೇವಾಲಯದಲ್ಲಿ ಲೇಸರ್ ಸಿಡಿಮದ್ದು ಪ್ರದರ್ಶನ
ಸುಬ್ರಹ್ಮಣ್ಯ, ನವೆಂಬರ್ 26: ಪರಶುರಾಮ ಸೃಷ್ಟಿಯ ಸಪ್ತ ಕ್ಷೇತ್ರಗಳಲ್ಲೊಂದಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರವು ಇತಿಹಾಸ ಕಾಲಗಳಿಂದಲೂ ನಾಗಾರಾಧನೆಗೆ ಪ್ರಸಿದ್ದಿಯಾಗಿದೆ. ಚಂಪಾಷಷ್ಠಿ ಜಾತ್ರಾ ಮಹೋತ್ಸವದಲ್ಲಿ ಮೊದಲ ಬಾರಿಗೆ ಲೇಸರ್ ಸಿಡಿಮದ್ದಿನ ಪ್ರದರ್ಶನವನ್ನು ಏರ್ಪಡಿಲಾಗಿದೆ.
ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಇಂದಿಂದ ಡಿಸೆಂಬರ್ 11ರ ತನಕ ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವವು ವಿಜೃಂಭಣೆಯಿಂದ ಜರುಗಲಿದೆ. ಶ್ರೀ ಕ್ಷೇತ್ರದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಬರಲಿರುವುದರಿಂದ ಭಕ್ತರ ಅನುಕೂಲಕ್ಕಾಗಿ ದೇವಳದ ವತಿಯಿಂದ ವಿಶೇಷ ಸೌಕರ್ಯ ಮಾಡಲಾಗಿದೆ.[ಕುಕ್ಕೆ, ಕುಡುಪು, ಘಾಟಿ ಸುಬ್ರಮಣ್ಯದಲ್ಲಿ ಸಂಭ್ರಮದ ಚಂಪಾ ಷಷ್ಠಿ]
ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಲಕ್ಷದೀಪೋತ್ಸವ ನಡೆಯಲಿದೆ. ಲಕ್ಷದೀಪೋತ್ಸವದ ದಿನ ದೇವಳದ ಹಾಗೂ ಸಾರ್ವಜನಿಕ ಭಕ್ತರ ಸಹಕಾರದಿಂದ ಮಣ್ಣಿನ ಹಣತೆಯ ಲಕ್ಷ ದೀಪಗಳನ್ನು ರಥಬೀದಿಯಿಂದ ಕಾಶಿಕಟ್ಟೆ ಗಣಪತಿ ದೇವಸ್ಥಾನದ ತನಕ ಹಚ್ಚಲಾಗುವುದು. ಇಡೀ ಸುಬ್ರಹ್ಮಣ್ಯ ಕ್ಷೇತ್ರ ಮಣ್ಣಿನ ಹಣತೆಯ ದೀಪಗಳಿಂದ ಕಂಗೊಳಿಸುವುದನ್ನು ಕಾಣಬಹುದು. ಚೌತಿ ಮತ್ತು ಪಂಚಮಿಯಂದು ಸಂಪ್ರದಾಯದಂತೆ ಮಿತ ಪ್ರಮಾಣದಲ್ಲಿ ಸುಡುಮದ್ದು ಸಿಡಿಸಲಾಗುವುದು. ಇದರ ಜತೆಗೆ ಪಂಚಮಿಯಂದು ವಿಶೇಷವಾಗಿ ಮೊದಲ ಬಾರಿಗೆ ಲೇಸರ್ ಸಿಡಿಮದ್ದು ಪ್ರದರ್ಶನ ನೆರವೇರಲಿದೆ.[ಮಡೆಸ್ನಾನ ನಮ್ಮ ಹಕ್ಕು, ಅದಕ್ಕೆ ಅಡ್ಡ ಬರಬೇಡಿ]
ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಈ ಬಾರಿ ಸ್ವಚ್ಛತೆಗೆ ಅಧಿಕ ಪ್ರಾಧಾನ್ಯತೆ ನೀಡಿದ್ದು, ಈಗಾಗಲೇ ದೇವಾಲಯವು ಸುಮಾರು 75 ಡಸ್ಟ್ ಬಿನ್ ಗಳನ್ನು ಖರೀದಿಸಿ ಅವುಗಳನ್ನು ವಿವಿಧ ಸ್ಥಳಗಳಲ್ಲಿ ಇರಿಸಲಾಗಿದೆ. ಇದಲ್ಲದೆ ತಾತ್ಕಾಲಿಕ ಶೌಚಾಲಯಗಳನ್ನು ಅಲ್ಲಲ್ಲಿ ನಿರ್ಮಿಸಲಾಗುವುದು. ದೇವಸ್ಥಾನದಲ್ಲಿ ಇಂದಿನಿಂದ ಆರಂಭವಾದ ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವವು ಡಿ. 11ರ ವರೆಗೆ ವಿಜೃಂಭಣೆಯಿಂದ ಜರುಗಲಿದೆ.