'ಸಿದ್ದರಾಮಯ್ಯನವರೇ ನಿಮ್ಮ ಕುರ್ಚಿ ಅಲುಗಾಡುತ್ತಿದೆ'
ಮಂಗಳೂರು, ಜುಲೈ, 26: "ಸಿದ್ದರಾಮಯ್ಯನವರೇ ನಿಮ್ಮ ಕುರ್ಚಿ ಅಲುಗಾಡುತ್ತಿದೆ. ಹೈಕಮಾಂಡ್ ಮುಂದೆ ಆಸ್ಕರ್, ಖರ್ಗೆ, ಪರಮೇಶ್ವರ್ ಅವರ ಹೆಸರಿದೆ" ಹೀಗೆಂದು ಹೇಳಿದ್ದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಜನಾರ್ದನ ಪೂಜಾರಿ.
ಕೆಎಸ್ ಆರ್ ಟಿಸಿ ಸಿಬ್ಬಂದಿ ಮುಷ್ಕರದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಮತ್ತು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಪೂಜಾರಿ ಅನೇಕ ಅಂಶಗಳನ್ನು ತೆರೆದೊಟ್ಟರು.[ಸಿಎಂ ವಾಚ್ ಗಲಾಟೆ ಬಗ್ಗೆ ಪೂಜಾರಿ ಹೇಳಿದ್ದೇನು?]
ಸಿದ್ದರಾಮಯ್ಯ ತಾವೇ ಬುದ್ಧಿವಂತರೆಂದು ಭಾವಿಸುತ್ತಿದ್ದಾರೆ . ಸಿದ್ದು ಮೌನದಿಂದಾಗಿ ಸರಕಾರದ ಇಮೇಜ್ ಹಾಳಾಗುತ್ತಿದೆ. ಅನುಭವಿ ರಾಜಕಾರಣಿ ಸಿದ್ದರಾಮಯ್ಯ ಮಾತ್ರ ಕಣ್ಣಿದ್ದೂ ಕುರುಡರಾಗಿದ್ದಾರೆ ಎಂದು ಪೂಜಾರಿ ಹೇಳಿದರು. ಪೂಜಾರಿಯವರು ಏನೇನು ಹೇಳಿದರು ಮುಂದಕ್ಕೆ ಓದಿ..
ಸಿಎಂ ಬುದ್ಧಿಗೇಡಿ ವರ್ತನೆ
ಕಾರ್ಮಿಕರ ಮುಷ್ಕರದ ಬಗ್ಗೆ ಹಿರಿಯರಲ್ಲಿ ಚರ್ಚಿಸಬಹುದಿತ್ತಲ್ಲವೇ? ನಿಮ್ಮ ಬುದ್ಧಿಗೇಡಿ ವರ್ತನೆಯಿಂದಾಗಿ ಕಾಂಗ್ರೆಸ್ ಅವನತಿ ಹಾದಿಯಲ್ಲಿದೆ ಎಂದು ಪೂಜಾರಿ ಹೇಳಿದರು.
ಅಧಿಕಾರಿಗಳ ಆತ್ಮಹತ್ಯೆ ಪ್ರಕರಣ
ಎಸ್ಐ ರೂಪಾ ಪ್ರಕರಣದಲ್ಲೂ ಎಡವಿದ್ದೀರಿ, ಡಿ.ಕೆ.ರವಿ, ಗಣಪತಿ ಪ್ರಕರಣದಲ್ಲೂ ಎಡವಿದ್ದೀರಿ. ಇವೆಲ್ಲವನ್ನೂ ಹೈಕಮಾಂಡ್ ಗಮನಿಸುತ್ತಿದೆ. ಆದಷ್ಟು ಬೇಗ ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿದೆ ಎಂದು ಸಿಎಂಗೆ ಎಚ್ಚರಿಕೆಯನ್ನು ನೀಡಿದರು.
ಪ್ರೆಸ್ ಕ್ಲಬ್ ಬಳಸಿಕೊಂಡಿದ್ದಕ್ಕೆ ಕಾರಣ
ಹೆಚ್ಚಿನ ಸಂದರ್ಭ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನೆಡೆಸುತ್ತಿದ್ದ ಪೂಜಾರಿ ಅವರು ಮಂಗಳವಾರ ಮಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ಕಾರಣ ಕೇಳಿದರೆ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಬಾರದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಅವರಿಗೆ ಮುಜುಗರ ಆಗಬಾರದು ಎಂದು ಇಲ್ಲಿ ಸುದ್ದಿಗೋಷ್ಠಿ ನಡೆಸಿದ್ದೇನೆ ಎಂದರು.
ಹೊಸ ಸಿಎಂ ಹತ್ತಿರ
ಮಲ್ಲಿಕಾರ್ಜುನ ಖರ್ಗೆಯವರೂ ಸಿಎಂ ಆಗಬಹುದು ಅಥವಾ ಕಾರ್ಮಿಕರ ಸಮಸ್ಯೆಯನ್ನು ಅತ್ಯಂತ ಚೆನ್ನಾಗಿ ಬಲ್ಲ ಆಸ್ಕರ್ ಫೆರ್ನಾಂಡಿಸ್ರನ್ನು ಹೈಕಮಾಂಡ್ ಸಿಎಂ ಮಾಡಬಹುದು ಎಂದರು.
ಮೋಟಮ್ಮ ಅವರಿಗೂ ಚಾನ್ಸ್
ಮಹಿಳೆಯರಿಗೆ ಸ್ಥಾನ ನೀಡಲು ನಿರ್ಧರಿಸಿದರೆ 'ಸ್ತ್ರೀಶಕ್ತಿ' ಹೊಸ ರೂಪ ಕೊಟ್ಟ ಮೋಟಮ್ಮ ಮುಖ್ಯಮಂತ್ರಿ ಆಗಬಹುದು. ಕೆಪಿಸಿಸಿ ಅಧ್ಯಕ್ಷ, ಗೃಹಸಚಿವ ಜಿ. ಪರಮೇಶ್ವರ್ ಅವರು ಕೂಡಾ ಮುಖ್ಯಮಂತ್ರಿ ಸ್ಥಾನ ಪಡೆಯುವ ಅರ್ಹತೆ ಹೊಂದಿದ್ದಾರೆ ಎಂದರು.
ಹೆದರಿಕೆ ನನಗಿಲ್ಲ
ಪತ್ರಿಕಾಗೋಷ್ಠಿ ನಡೆಸಲು ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಅನುಮತಿ ಇದೆಯಾ? ಎಂದು ಪತ್ರಕರ್ತರು ಕೇಳಿದ್ದಕ್ಕೆ ಪತ್ರಿಕಾಗೋಷ್ಠಿ ನಡೆಸಲು ಜಿಲ್ಲಾಧ್ಯಕ್ಷ ಅನುಮತಿ ಬೇಕೇ ಬೇಕು ಎಂದೇನೂ ಇಲ್ಲ. ಅವರಿಗೆ ಹೆದರಿ ನಾನು ಇಲ್ಲಿ ಪತ್ರಿಕಾಗೋಷ್ಠಿ ನಡೆಸುತ್ತಿಲ್ಲ. ಈಗಿನ ಅಧ್ಯಕ್ಷರಿಗೆ ಏನೂ ಜ್ಞಾನ ಇಲ್ಲ ಎಂದು ಲೇವಡಿ ಮಾಡಿದರು.