'ಚಿಲ್ಲರೆ' ವ್ಯಾಜ್ಯಕ್ಕೆ ನೊಂದು ನದಿಗೆ ಹಾರಿದ ಕಂಡಕ್ಟರ್
ದಕ್ಷಿಣ ಕನ್ನಡ, ಸೆಪ್ಟೆಂಬರ್ 26: ಯುವತಿಯೊಬ್ಬಳು ಚಿಲ್ಲರೆ ಹಣದ ವಿಚಾರವಾಗಿ ಮಾತಿಗೆ ಮಾತು ಬೆಳೆಸಿದ ಕಾರಣಕ್ಕೆ ಬೇಸರ ಮಾಡಿಕೊಂಡ ಕೆಎಸ್ ಆರ್ ಟಿಸಿ ಬಸ್ ಕಂಡಕ್ಟರ್ ಚಲಿಸುತ್ತಿದ್ದ ಬಸ್ ನಿಂದಲೇ ಕುಮಾರಧಾರ ನದಿಗೆ ಜಿಗಿದು, ಕೊಚ್ಚಿಹೋದ ಘಟನೆ ಭಾನುವಾರ ಸಂಭವಿಸಿದೆ.
ಮಂಗಳೂರಿನ ಗುರುಪುರ ಕೈ ಕಂಬದ ನಲವತ್ತು ವರ್ಷ ವಯಸ್ಸಿನ ದೇವದಾಸ್ ನದಿಗೆ ಹಾರಿದ ಕಂಡಕ್ಟರ್. ಭಾನುವಾರ ಸಂಜೆವರೆಗೆ ಅವರಿಗಾಗಿ ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ. ಮಂಗಳೂರಿನ ಒಂದನೇ ಘಟಕದ ಬಸ್ ನಲ್ಲಿ ದೇವದಾಸ್ ಕಂಡಕ್ಟರ್ ಆಗಿದ್ದರು. ಬೆಳಗ್ಗೆ ಹೊರಟು ಉಪ್ಪಿನಂಗಡಿ ಮಾರ್ಗವಾಗಿ ಕುಕ್ಕೆ ಸುಬ್ರಹ್ಮಣ್ಯ ಕಡೆ ಸಂಚರಿಸುತ್ತಿತ್ತು.[ಬೆಂಗಳೂರಿನ ಗಿರಿನಗರದ ಭರತ್ ನೇತ್ರಾವತಿ ಪಾಲು]
ಮಂಗಳೂರಿನಲ್ಲಿ ಬಸ್ ಹತ್ತಿದ ಯುವತಿ ಟಿಕೆಟ್ ಪಡೆಯುವ ಸಂದರ್ಭದಲ್ಲೇ ಗೊಂದಲ ಉಂಟಾಗಿತ್ತು. ಆ ಯುವತಿ ಟಿಕೆಟ್ ಖರೀದಿಗಾಗಿ 500 ರು. ನೀಡಿದ್ದಾಗಿ ಹೇಳಿದರೆ, ದೇವದಾಸ್ 100 ರುಪಾಯಿ ಕೊಟ್ಟಿದ್ದೀರಿ ಎಂದಿದ್ದಾರೆ. ಈ ವಿಚಾರವಾಗಿ ಯುವತಿ ಮತ್ತು ಕಂಡಕ್ಟರ್ ಮಧ್ಯೆ ಮಾತಿನ ಚಕಮಕಿ ನಡೆದಿತ್ತು.
ಈ ಘಟನೆಯನ್ನು ದೇವದಾಸ್ ಕಡಬ ಪೊಲೀಸ್ ಠಾಣೆಯಲ್ಲಿ ವಿವರಿಸಿದ್ದರು. ಯುವತಿ ಅಲ್ಲಿಯೇ ಬಸ್ ಇಳಿದು, ಹೋಗಿದ್ದರು. ಬಳಿಕ ಬಸ್ ಸುಬ್ರಹ್ಮಣ್ಯದತ್ತ ತೆರಳಿತ್ತು. ಕುಮಾರಧಾರ ನದಿ ಸೇತುವೆ ಮೇಲೆ ಬಸ್ ಹೋಗುತ್ತಿದ್ದಾಗ ಕಂಡಕ್ಟರ್ ಸೀಟಿ ಊದಿದ್ದಾರೆ. ಬಸ್ ನಿಧಾನವಾಗುತ್ತದಲೇ ನೇರವಾಗಿ ನೀರಿಗೆ ಧುಮುಕಿದ ದೇವದಾಸ್ ನೀರುಪಾಲಾದರು.[ಹತ್ಯೆ ರಹಸ್ಯ: ಇಸ್ಮಾಯಿಲ್ ರನ್ನು ಕೊಂದಿದ್ದು ಸುಪಾರಿ ಕಿಲ್ಲರ್ಸ್!]
ಡೆತ್ನೋಟ್: ಕಡಬದಿಂದ ಸುಬ್ರಹ್ಮಣ್ಯದತ್ತ ಬಸ್ ಚಲಿಸುತ್ತಿದ್ದಾಗಲೇ ಕಂಡಕ್ಟರ್ ಆತ್ಮಹತ್ಯೆ ಮಾಡಿಕೊಳ್ಳಲು ಯೊಚಿಸಿರಬೇಕು ಎಂದು ಶಂಕಿಸಲಾಗಿದೆ. ಟಿಕೆಟ್ ಎಂಟ್ರಿಯ ಲಾಗ್ಶೀಟ್ನಲ್ಲಿ ಡೆತ್ನೋಟ್ ಬರೆದಿಟ್ಟಿದ್ದಾರೆ. 'ಮರ್ಯಾದೆ ಹೋಗಿ ಬದುಕುವುದಕ್ಕಿಂತ ಸಾಯುವುದೇ ಲೇಸು, ನನ್ನ ಸಹಪಾಠಿಗಳಿಗೆ ಕೊನೆ ಸಮಸ್ಕಾರ' ಎಂದು ಅವರು ಬರೆದಿರುವ ಡೆತ್ ನೋಟ್ ಅನ್ನು ಸುಬ್ರಹ್ಮಣ್ಯ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.