'ಚಿಲ್ಲರೆ' ಜಗಳದಲ್ಲಿ ನದಿಗೆ ಹಾರಿದ್ದ ಕಂಡಕ್ಟರ್ ಶವ ಪತ್ತೆ
ಸುಬ್ರಹ್ಮಣ್ಯ, ಸೆಪ್ಟೆಂಬರ್ 28: ಸುಬ್ರಹ್ಮಣ್ಯದ ಕುಮಾರಧಾರ ನದಿಗೆ ಹಾರಿ ಕೊಚ್ಚಿ ಹೋಗಿದ್ದ ಕೆಎಸ್ ಆರ್ ಟಿಸಿ ಕಂಡಕ್ಟರ್ ದೇಹ ಬುಧವಾರ ಪತ್ತೆಯಾಗಿದೆ. ಸತತ ಮೂರು ದಿನಗಳ ಶೋಧ ಕಾರ್ಯಾಚರಣೆ ನಂತರ ಶವ ದೊರೆತಿದೆ. ಕಳೆದ ಭಾನುವಾರ ಸಂಜೆ ವೇಳೆ ಚಲಿಸುತ್ತಿದ್ದ ಬಸ್ ನಿಂದ ಕುಮಾರಧಾರ ನದಿಗೆ ಹಾರಿದ್ದ ಕಂಡಕ್ಟರ್ ದೇವದಾಸ್ (47) ಕೊಚ್ಚಿ ಹೋಗಿದ್ದರು.
ಸೋಮವಾರ ಬೆಳಗಿನಿಂದಲೇ ಪುತ್ತೂರಿನ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಗುಂಡ್ಯದ 15 ನುರಿತ ಈಜುಗಾರರನ್ನು ಒಳಗೊಂಡ ಮುಳುಗು ತಜ್ಞರ ತಂಡ ಕುಮಾರಧಾರ ನದಿಯಲ್ಲಿ ಶೋಧ ಕಾರ್ಯ ನಡೆಸಿತು. ದೇವದಾಸ್ ಅವರ ಪತ್ನಿ ಅಂಗನವಾಡಿ ಶಿಕ್ಷಕಿ ಅಸೌಖ್ಯದಿಂದ ಬಳಲುತ್ತಿದ್ದು, ಇದೇ ಕಾರಣದಿಂದ ಅವರಿಗೆ ಸತ್ಯಾಂಶ ತಿಳಿಸದೆ ನೆರೆಹೊರೆಯವರು ಜಾಗೃತಿ ವಹಿಸುತ್ತಿದ್ದಾರೆ.['ಚಿಲ್ಲರೆ' ವ್ಯಾಜ್ಯಕ್ಕೆ ನೊಂದು ನದಿಗೆ ಹಾರಿದ ಕಂಡಕ್ಟರ್]
ಈ ದಂಪತಿಯ ಇಬ್ಬರು ಮಕ್ಕಳಲ್ಲಿ ಹಿರಿಯವನು ಸಿ.ಎ ವ್ಯಾಸಂಗ ಮಾಡುತ್ತಿದ್ದು, ಮಗಳು ಪದವಿ ಓದುತ್ತಿದ್ದಾಳೆ. ಕರ್ತವ್ಯದಲ್ಲಿದ್ದ ಸರಕಾರಿ ಉದ್ಯೋಗಿಯನ್ನು ಠಾಣೆಗೆ ಕರೆದು, ಎಸೈ ಇಲ್ಲದ ಸಮಯದಲ್ಲಿ ಬಟ್ಟೆ ಕಳಚಿ ತಪಾಸಣೆ ಮಾಡಿರುವುದು ಖಂಡನೀಯ. ಚಿಲ್ಲರೆ ವಿಷಯದಲ್ಲಿ ಕಡಬ ಠಾಣೆಯಲ್ಲಿ ಹಲ್ಲೆ ಮಾಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಈ ಕುರಿತು ತನಿಖೆ ನಡೆಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಕಿಟ್ಟಣ್ಣ ರೈ ಗುರುಪುರ ಮತ್ತು ತಾ.ಪಂ. ಉಪಾಧ್ಯಕ್ಷ ಉದಯ ಭಟ್ ಒತ್ತಾಯಿಸಿದ್ದಾರೆ. ದೇವದಾಸ್ ಗೆ ಅತ್ಯುತ್ತಮ ಬಸ್ ನಿರ್ವಾಹಕ ಎಂಬ ಪ್ರಶಸ್ತಿಯೂ ಬಂದಿದೆ. ಅವರು ಚಿಲ್ಲರೆ ವಿಷಯದಲ್ಲಿ ಈ ಕೃತ್ಯ ಮಾಡುವವರಲ್ಲ ಎಂದು ಮೃತರ ಪುತ್ರ ಪವನ್ ಹೇಳಿದರು.[ಮಂಗಳೂರು: 5 ಜನ ಅಂತಾರಾಜ್ಯ ಕಳ್ಳರ ಬಂಧನ]
ಸತತ ಮೂರು ದಿನಗಳ ಶೋಧ ಕಾರ್ಯ ನಡೆಸಿದ ನಂತರ ಬುಧವಾರ ಸುಬ್ರಹ್ಮಣ್ಯದ ಕುಮಾರಧಾರ ಸ್ನಾನಘಟ್ಟದಿಂದ ಎರಡು ಕಿ.ಮೀ ದೂರದ ಭಟ್ಟಕಯ ಬಳಿ ಕಂಡೆಕ್ಟರ್ ಶವ ಪತ್ತೆಯಾಗಿದೆ.