ಪ್ರವಾಹ ಪೀಡಿತ ಜೋಡುಪಾಲ, ಮದೆನಾಡು ಜನರನ್ನು ಕಾಡುತ್ತಿದೆ ಕಳ್ಳರ ಭಯ
ಮಂಗಳೂರು, ಆಗಸ್ಟ್ 25: ಮಳೆ, ಭೂಕುಸಿತ, ಪ್ರವಾಹದಿಂದ ಜೀವ ಉಳಿಸಿಕೊಳ್ಳಲು ಮನೆ ಮಠ ಬಿಟ್ಟು ಓಡಿ ಬಂದ ಕೊಡಗಿನ ಪ್ರವಾಹ ಸಂತ್ರಸ್ತರಿಗೆ ಈಗ ಬಹಳವಾಗಿ ಕಾಡುತ್ತಿರುವುಡು ಕಳ್ಳರ ಕನ್ನದ ಆತಂಕ.
ಭೂ ಕುಸಿತ ಸಂಭವಿಸಿದ ಜೋಡುಪಾಲ, ಮದೆನಾಡು ಪ್ರದೇಶದ ಎಲ್ಲಾ ಮನೆಗಳು ದ್ವಂಸ ಗೊಂಡಿಲ್ಲ. ದುರಂತದಲ್ಲಿ ಈ ಪ್ರದೇಶದ ಕೆಲ ಮನೆಗಳು ಪೂರ್ತಿ ನಾಶವಾಗಿದ್ದರೆ ಇನ್ನೂ ಉಳಿದ ಕೆಲ ಮನೆಗಳು ಭಾಗಶಃ ನಾಶವಾಗಿವೆ. ಇನ್ನು ಕೆಲವು ಸುರಕ್ಷಿತ ವಾಗಿವೆ.
ಜೋಡುಪಾಲ ನಿಗೂಢ ಸ್ಫೋಟ ಭೇದಿಸಲಿಕ್ಕೆ ಹೋದಾಗ ಒನ್ಇಂಡಿಯಾಗೆ ಕಂಡದ್ದು...
ಆದರೆ ದುರಂತ ಸಂಭವಿಸಿದ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ ಸಂದರ್ಭದಲ್ಲಿ ಜೀವ ಭಯದಿಂದ ಜನರು ಎಲ್ಲ ವನ್ನು ಬಿಟ್ಟು ತಮ್ಮ ಪ್ರೀತಿ ಪಾತ್ರರನ್ನು ಕರೆದುಕೊಂಡು ಸುರಕ್ಷಿತ ಪ್ರದೇಶಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಕೆಲವರು ಮನೆಗೆ ಬೀಗ ಜಡಿದು ಬಂದಿದ್ದರೆ, ಉಳಿದರು ಹೊರಡುವ ಅವಸರದಲ್ಲಿ ಬೀಗ ಭದ್ರ ಪಡಿಸದೇ ಓಡಿ ಬಂದಿದ್ದಾರೆ.
ರಕ್ಷಣಾ ಕಾರ್ಯಾಚರಣೆ ವೇಳೆ ಮನೆ ಬಿಡಲು ಒಪ್ಪಿರಲಿಲ್ಲ
ರಕ್ಷಣಾ ಕಾರ್ಯಾಚರಣೆ ವೇಳೆ ಕೆಲವರು ಮನೆ ಮಠ ಬಿಟ್ಟು ಹೊರ ಹೋಗಲು ಕೆಲವರು ಒಪ್ಪಿರಲಿಲ್ಲ. ರಕ್ಷಣಾ ಕಾರ್ಯಕರ್ತರಿಗೆ ನೆರವು ನೀಡುವ ನೆಪದಲ್ಲಿ ಕೆಲ ಹೊರ ಪ್ರದೇಶದ ಜನರು ಅಲ್ಲಿಗೆ ಭೇಟಿ ನೀಡಿದ್ದು ಅದಕ್ಕೆ ಕಾರಣವಾಗಿತ್ತು. ಈಗ ಜೋಡುಪಾಲ ಹಾಗೂ ಮದೆನಾಡು ಪ್ರದೇಶದ ಮನುಷ್ಯನ ಛಾಯೆ ಇಲ್ಲ ಈ ಹಿನ್ನೆಲೆಯಲ್ಲಿ ಇಲ್ಲಿಯ ಜನರಿಗೆ ಮನೆಗಳಲ್ಲಿ ಕಳ್ಳತನ ವಾಗಿರುವ ಭಯ ಬಹಳವಾಗಿ ಕಾಡುತ್ತಿದೆ. ರಕ್ಷಣಾ ಕಾರ್ಯಾಚರಣೆಗೆ ಕೈಜೋಡಿಸುವ ನೆಪದಲ್ಲಿ ಆಗಮಿಸಿದ್ದ ಕೆಲವರ ಮೇಲೆ ಸಂತ್ರಸ್ತರಿಗೆ ಅನುಮಾನ ಮೂಡಿದೆ. ಅನಾಥವಾಗಿ ಬಿಟ್ಟು ಬಂದ ಮನೆ, ಜಾನುವಾರು ಗಳನ್ನು ಲೂಟಿ ಮಾಡಿರುವ ಆತಂಕ ಈ ಸಂತ್ರಸ್ತರಲ್ಲಿ ಮನೆ ಮಾಡಿದೆ.
ಜಿಲ್ಲಾಡಳಿತದ ಪಾಸ್ ಪಡೆದು ಮನೆಗೆ ಭೇಟಿ
ಸಂತ್ರಸ್ತರ ಪರಿಹಾರ ಕೇಂದ್ರದಲ್ಲಿ ವಾಸ್ತವ್ಯ ಹೂಡಿದ್ದ ಕೆಲವರು ಇತ್ತಿಚೆಗೆ ಜಿಲ್ಲಾಡಳಿತದ ಪಾಸ್ ಪಡೆದು ತಮ್ಮ ಮನೆ ನೋಡಲೆಂದು ದುರಂತದ ಸ್ಥಳಕ್ಕೆ ಭೇಟಿ ನೀಡುತಿದ್ದಾರೆ. ಮನೆಗೆ ತೆರಳಿ ತಮ್ಮ ವಸ್ತುಗಳ ಬಗ್ಗೆ ಖಾತರಿ ಪಡಿಸಿಕೊಳ್ಳುತ್ತಿದ್ದಾರೆ. ಈ ಪ್ರದೇಶದ ಕಲ ಮನೆಗಳಲ್ಲಿ ಕಳ್ಳತನ ನಡೆದಿರುವ ಪ್ರಸಂಗ ಗಳು ಬೆಳಕಿಗೆ ಬಂದಿದೆ. ಈ ಪರಿಣಾಮ ಈ ಪ್ರದೇಶಗಳಿಗೆ ಹೊರಗಿನ ಜನರ ಪ್ರವೇಶ ನಿರ್ಭಂದಿಸಲಾಗಿದೆ.
ಜೋಡುಪಾಲದಲ್ಲಿ ಮನುಷ್ಯರ ಸುಳಿವಿಲ್ಲ, ಸಾಯೋ ಸ್ಥಿತೀಲಿ ಸಾಕುಪ್ರಾಣಿಗಳು
ಜೋಡುಪಾಲ, ಮದೆನಾಡು ಜನ ಕಂಗಾಲು
ಜೋಡುಪಾಲ ಹಾಗು ಮದೆನಾಡು ಪ್ರದೇಶದ ಭೇಟಿ ನೀಡುವ ಸ್ಥಳೀಯ ನಿವಾಸಿಗಳಿಗೆ ಪಾಸ್ ಪಡೆದು ತೆರಳಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ. ಪಾಸ್ ಇಲ್ಲದವರ ಪ್ರವೇಶ ಈ ಪ್ರದೇಶಗಳಲ್ಲಿ ನಿಷೇಧಿಸಲಾಗಿದೆ. ಜೋಡುಪಾಲ ಹಾಗು ಮದೆನಾಡು ಪ್ರದೇಶದ ಮನೆಗಳಿಗೆ ಭೇಟಿ ನಿಡುವವರ ಜೋತೆ ಪೊಲೀಸರೂ ತೆರಳಿ ನೈಜ್ಯತೆಯನ್ನು ಖಾತರಿ ಪಡಿಸಿಕೊಳ್ಳುತ್ತಿದ್ದಾರೆ. ಈ ಪ್ರದೇಶದ ಜನರ ಮನೆಗಳಿಗೆ ಪೊಲೀಸ್ ಗಸ್ತಿನ ಭದ್ರತೆ ನೀಡಲಾಗಿದೆ.
ವಾಸಕ್ಕೆ ಅಪಾಯಕಾರಿ ಜೋಡುಪಾಲ, ಮದೆನಾಡು
ಈ ಪ್ರದೇಶದ ಬಹುತೇಕ ಜನರು ಕೃಷಿಕರು. ಆಗಸ್ಟ್ 16 ಮತ್ತು 17 ರಂದು ಸಂಭವಿಸಿದ ದುರಂತದಲ್ಲಿ ಅವರ ಇಷ್ಟರವರೆಗಿನ ಕೃಷಿ ನಾಶವಾಗಿದೆ. ದುರಂತಕ್ಕಿಡಾದ ಜಾಗ ವಾಸಕ್ಕೆ ಅಪಾಯಕಾರಿ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಜೀವನೋಪಾಯಕ್ಕೆ ಮತ್ತೆ ಕೃಷಿ ಚಟುವಟಿಕೆ ಶುರು ಮಾಡುವುದಾದರೂ ಹೇಗೆ? ಎಂಬ ಚಿಂತೆ ಜೋಡುಪಾಲ, ಅರೆಕಲ್ಲು ಪ್ರದೇಶದ ಜನರಿಗೆ ಕಾಡುತ್ತಿದೆ.
ಹೊಸದಾಗಿ ಕೃಷಿ ಪ್ರಾರಂಭ ಮಾಡುವುದು ಹೇಗೆ?
ಒಂದು ವೇಳೆ ವಾಸ ಯೋಗ್ಯ ಎನಿಸಿದರೂ ಅರಂಭದಿಂದ ಭೂಮಿ ಹಸನು ಮಾಡಿ ಕೃಷಿ ಚಟುವಟಿಕೆ ಆರಂಭಿಸಬೇಕಿದೆ. ಅದಕ್ಕೆ ಬಂಡವಾಳ ಬೇಕು. ದೀರ್ಘಾವಧಿ ಬೆಳೆ ಕೊಡುವ ಕೃಷಿ ಚಟುವಟಿಕೆ ಕೈಗೊಂಡರೆ ಅದರ ಫಸಲು ಕೈಗೆ ಬರುವವರೆಗೆ ಕೈ ಖಾಲಿ ಇರುವ ಆತಂಕ ಅವರನ್ನು ಕಾಡುತ್ತಿದೆ. ಜನರ ಈ ಚಿಂತೆಗೆ ರಾಜ್ಯ ಹಾಗು ಕೇಂದ್ರ ಸರಕಾರ ಪರಿಹಾರದ ಮಾರ್ಗೋಪಾಯ ಹುಡುಕಬೇಕಿದೆ.