ಮೂಡಬಿದ್ರೆ ಮೂಲದ ಕಿರಣ್ ಭಟ್ ಮುಡಿಗೆ ಆಸ್ಕರ್ ಪ್ರಶಸ್ತಿ
ತಂತ್ರಜ್ಞಾನ ಕ್ಷೇತ್ರದಲ್ಲಿನ ಸಾಧನೆಗಾಗಿ ಮೂಡಬಿದ್ರೆ ಮೂಲದ ಕಿರಣ್ ಭಟ್ ಅವರಿಗೆ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಲಭಿಸಿದೆ.'ಐಎಲ್ ಎಂ ಫೇಶಿಯಲ್ ಪರ್ಫಾರ್ಮೆನ್ಸ್-ಕ್ಯಾಪ್ಚರ್ ಸಾಲ್ವಿಂಗ್ ಸಿಸ್ಟಮ್'ತಂತ್ರಜ್ಞಾನದ ವಿನ್ಯಾಸಕ್ಕಾಗಿ ಈ ಪ್ರಶಸ್ತಿ.
ಮಂಗಳೂರು, ಜನವರಿ. 11 : ತಂತ್ರಜ್ಞಾನ ಕ್ಷೇತ್ರದಲ್ಲಿನ ಸಾಧನೆಗಾಗಿ ಮೂಡಬಿದ್ರೆ ಮೂಲದ ಕಿರಣ್ ಭಟ್ ಅವರಿಗೆ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಸಂದಿದೆ.
'ಐಎಲ್ ಎಂ ಫೇಶಿಯಲ್ ಪರ್ಫಾರ್ಮೆನ್ಸ್-ಕ್ಯಾಪ್ಚರ್ ಸಾಲ್ವಿಂಗ್ ಸಿಸ್ಟಂ' ಎಂಬ ತಂತ್ರಜ್ಞಾನದ ವಿನ್ಯಾಸಕ್ಕಾಗಿ ಅವರಿಗೆ ಈ ಅತ್ಯುನ್ನತ ಪ್ರಶಸ್ತಿ ದೊರೆತಿದೆ.
41 ವರ್ಷದ ಕಿರಣ್ ಭಟ್ ಮೂಲತಃ ಮೂಡಬಿದ್ರೆಯವರು ಎಂಬುವುದು ವಿಶೇಷ. ಆದರೆ, ಸದ್ಯ ಇವರು ಕೊಯಂಬತ್ತೂರಿನಲ್ಲಿ ನೆಲೆಸಿದ್ದಾರೆ.
6 ವರ್ಷಗಳ ಹಿಂದೆ ಕಿರಣ್ ತಮ್ಮ ಸಹೋದ್ಯೋಗಿಗಳಾಗಿದ್ದ ಮೈಕೇಲ್ ಕೋಪರ್ ವಾಸ್, ಬ್ರೈನ್ ಕ್ಯಾಂಟ್ ವೆಲ್ ಮತ್ತು ಪೈಗೆ ವಾರ್ನರ್ ಜತೆ ಸೇರಿಕೊಂಡು ಫೇಶಿಯಲ್ ಪರ್ಫಾರ್ಮೆನ್ಸ್-ಕ್ಯಾಪ್ಚರ್ ಸಿಸ್ಟಮ್ ನ್ನು ಅಭಿವೃದ್ಧಿಪಡಿಸಿದರು.
ಮುಖದ ಭಾವನೆಗಳನ್ನು ಡಿಜಿಟಲ್ ತಂತ್ರಜ್ಞಾನದ ಮೂಲಕ ಸೆರೆಹಿಡಿದು ವ್ಯಕ್ತಿಯ ಚಿತ್ರಣವನ್ನು ಪುನರ್ ರಚಿಸುವ ವಿಧಾನವೇ ಈ ಫೇಶಿಯಲ್ ಪರ್ಫಾರ್ವೆನ್ಸ್-ಕ್ಯಾಪ್ಚರ್ ಸಿಸ್ಟಮ್.
ಈ ತಂತ್ರಜ್ಞಾನವನ್ನು ಪೈರೇಟ್ಸ್ ಆಫ್ ದ ಕೆರಿಬಿಯನ್, ಟೀನೇಜ್ ಮ್ಯುಟೆಂಟ್ ನಿಂಜಾ ಟರ್ಟಲ್, ವಾರ್ ಕ್ರಾಫ್ಟ್, ಸ್ಟಾರ್ ವಾರ್ಸ್ ಎಪಿಸೋಡ್ 7 ಮತ್ತು ಸ್ಟಾರ್ ವಾರ್ಸ್ ರೋಗ್ ಒನ್ ಚಿತ್ರಗಳಲ್ಲಿ ಬಳಸಲಾಗಿದೆ.
ಒಂದು ವರ್ಷದ ಹಿಂದೆ ಕಿರಣ್ ಐಎಲ್ ಎಂ ಬಿಟ್ಟು ತಮ್ಮದೇ ಸ್ವಂತ ಉದ್ಯಮ ಲೂಮ್.ಎಐ ಆರಂಭಿಸಿದರು. ಭಾವಚಿತ್ರಗಳಿಂದ ವೈಯಕ್ತಿಕರಿಸಿದ ಮತ್ತು ತ್ರಿಡಿ ಡಿಜಿಟಲ್ ಅವತಾರಗಳನ್ನು ಅವರು ಸೃಷ್ಟಿಸಿದರು.
ಇವುಗಳನ್ನು ಗೇಮ್ಗಳಲ್ಲಿ, ಮೆಸೇಜಿಂಗ್ ತಾಣಗಳಲ್ಲಿ, ಸೋಶಿಯಲ್ ವರ್ಚುವಲ್ ರಿಯಾಲಿಟಿ ಮತ್ತು ಇ-ಕಾಮರ್ಸ್ ಗಳಲ್ಲಿ ಬಳಸಬಹುದಾಗಿದೆ. ಅಮೆರಿಕದಲ್ಲಿ 2017ನೇ ಸಾಲಿನ ಟಾಪ್ 5 ಟೆಕ್ ಟ್ರೆಂಡ್ ಗಳ ಪೈಕಿ ಇದೂ ಒಂದು' ಎನ್ನುತ್ತಾರೆ ಕಿರಣ್ ತಂದೆ ಶ್ರೀನಿವಾಸ ಭಟ್.
ಸದ್ಯ ಕಿರಣ್ ಒಂದು ಹೊಸ ಪ್ರಾಜೆಕ್ಟ್ನ ಕೆಲಸದಲ್ಲಿ ತೊಡಗಿದ್ದಾರೆ. ಒಂದು ಅಥವಾ ಎರಡು ವರ್ಷಗಳ ಬಳಿಕ ಸಿನೆಮಾ ರಂಗದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ತೀರ್ಮಾನ ಪ್ರಕಟಿಸಲಿದ್ದಾರೆ.
ಈ ಪ್ರತಿಷ್ಠಿತ ಪ್ರಶಸ್ತಿ ಸ್ವೀಕರಿಸುತ್ತಿರುವ ಎಂಟನೇ ಭಾರತೀಯ. ಕೊಯಂಬತ್ತೂರಿನ ಕೊತ್ತಲಂಗೊ ಲಿಯೋನ್, ಕಳೆದ ವರ್ಷವಷ್ಟೇ ಇದೇ ಪ್ರಶಸ್ತಿಗೆ ಪಾತ್ರರಾಗಿದ್ದರು.
ಅಕಾಡೆಮಿ ಆಫ್ ಮೋಶನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್ ಜನವರಿ 4ರಂದು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ 18 ಮಂದಿಗೆ ಪ್ರಶಸ್ತಿಗಳನ್ನು ಪ್ರಕಟಿಸಿತು.
ಫೆಬ್ರವರಿ 11ರಂದು ಬೆವರ್ಲಿ ವಿಲ್ಶೈರ್ ನಲ್ಲಿ ಈ ಪ್ರಶಸ್ತಿಗಳನ್ನು 34 ಮಂದಿ ಸಾಧಕರಿಗೆ ಪ್ರದಾನ ಮಾಡಲಾಗುತ್ತಿದೆ.
ಕಿರಣ್ ಭಟ್ ಬಗ್ಗೆ ಒಂದಿಷ್ಟು: ಇವರ ತಂದೆ ಮೂಡಬಿದ್ರೆ ಬಳಿಯ ಡಂದಲೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಸಮೀಪದವರು. ಸದ್ಯ ಉದ್ಯಮ ನಿಮಿತ್ತ ಕೊಯಮತ್ತೂರಿನಲ್ಲಿ ನೆಲೆಸಿದ್ದಾರೆ. ಕಿರಣ್ ಕೊಯಂಬತ್ತೂರಿನ ಸ್ಟೇನ್ಸ್ ಆಂಗ್ಲೋ ಇಂಡಿಯನ್ ಸ್ಕೂಲ್ ನ ಹಳೇ ವಿದ್ಯಾರ್ಥಿ.
ರಾಜಸ್ಥಾನದ ಪಿಲಾನಿಯ ಬಿರ್ಲಾ ಇನ್ಸ್ ಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಮೆಕ್ಯಾನಿಕಲ್ ಹಾಗೂ ಎಲೆಕ್ಟ್ರಿಕಲ್ ಆಂಡ್ ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಇಂಜಿನಿಯರಿಂಗ್ ಪದವಿ ಪಡೆದರು.
ಬಳಿಕ ಅಮೆರಿಕದ ಕರ್ನೆಗಿ ಮೆಲೋನ್ ಯುನಿವರ್ಸಿಟಿಯಲ್ಲಿ ಕಂಪ್ಯೂಟರ್ ವಿಜ್ಞಾನದಲ್ಲಿ ಗೌರವ ಡಾಕ್ಟರೇಟ್ ಪಡೆದುಕೊಂಡಿದ್ದಾರೆ.