ಕೇರಳದಂತೆಯೇ ಮುಳುಗುತ್ತಿದೆ ದ.ಕ, ಆ. 25ವರೆಗೆ ಶಿರಾಡಿ ಘಾಟ್ ರಸ್ತೆ ಬಂದ್
ಮಂಗಳೂರು, ಆಗಸ್ಟ್ 16: ಕೇರಳದಲ್ಲಿ ಮಳೆ ಸೃಷ್ಟಿಸಿರುವ ಭೀತಿಯು ದಕ್ಷಿಣ ಕನ್ನಡ ಜಿಲ್ಲೆಯನ್ನೂ ಆವರಿಸತೊಡಗಿದೆ. ಕೇರಳದಲ್ಲಿ ಆಗುತ್ತಿರುವ ಅನಾಹುತಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಗೋಚರಿಸತೊಡಗಿವೆ. ಪಶ್ಚಿಮ ಘಟ್ಟ ತಪ್ಪಲು ಪ್ರದೇಶಗಳಾದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಸುಳ್ಯ, ಸುಬ್ರಹ್ಮಣ್ಯ ಪ್ರದೇಶಗಳಲ್ಲಿ ಭಾರೀ ಮಳೆ ಆಗುತ್ತಿದೆ.
ಈ ಪ್ರದೇಶದಲ್ಲಿ ಹರಿಯುವ ಕುಮಾರಧಾರ, ಪಯಶ್ವಿನಿ ಸೇರಿದಂತೆ ಇನ್ನಿತರ ಸಣ್ಣ ಹೊಳೆಗಳು ಉಕ್ಕಿ ಹರಿಯುತ್ತಿವೆ. ಸಮಯ ಕಳೆಯುತ್ತಿದ್ದಂತೆ ನದಿಯ ನೀರಿನ ಮಟ್ಟದಲ್ಲಿ ಏರಿಕೆ ಆಗುತ್ತಿದೆ. ಜನವಸತಿ ಪ್ರದೇಶಗಳಿಗೂ ನೀರು ನುಗ್ಗುತ್ತಿದೆ. ಸುಳ್ಯ, ಬೆಳ್ತಂಗಡಿ ಸೇರಿದಂತೆ ಕುಕ್ಕೆ ಸುಬ್ರಹ್ಮಣ್ಯ ಸಂಪರ್ಕಿಸುವ ರಸ್ತೆ ಕಡಿತಗೊಂಡಿದೆ.
ಆಗಸ್ಟ್ 20ರವರೆಗೆ ಶಿರಾಡಿ ಘಾಟ್ ಸಂಚಾರ ಸಂಪೂರ್ಣ ಬಂದ್
ಈ ರಸ್ತೆಗಳಲ್ಲಿ ಇರುವ ಸೇತುವೆಗಳು ಪ್ರವಾಹದ ನೀರಿನಲ್ಲಿ ಮುಳುಗಿವೆ. ಕೆಲವೆಡೆ ಗುಡ್ಡ ಕುಸಿತದ ಘಟನೆಗಳು ನಡೆದಿವೆ. ಅಪಾಯದ ಮಟ್ಟ ಮೀರಿ ನೇತ್ರಾವತಿ ನದಿ ಹರಿಯುತ್ತಿದ್ದು, ನೇತ್ರಾವತಿ ನದಿ ನೀರಿನ ಮಟ್ಟ 8.6 ಮೀಟರ್ ದಾಖಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬಂಟ್ವಾಳ ಹಲವು ಪ್ರದೇಶಗಳು ಮುಳುಗಡೆ ಆಗುವ ಭೀತಿ ಎದುರಾಗಿದೆ.
ಸಂತ್ರಸ್ತರು ಸುರಕ್ಷಿತ ಪ್ರದೇಶಗಳಿಗೆ ರವಾನೆ
ನೇತ್ರಾವತಿ ನದಿ ತಟದ ಗ್ರಾಮಗಳು ಜಲಾವೃತಗೊಂಡಿದ್ದು, ಸಂತ್ರಸ್ತರನ್ನು ಸುರಕ್ಷಿತ ಪ್ರದೇಶಗಳಿಗೆ ರವಾನಿಸಲಾಗಿದೆ. ಕರಾವಳಿಯಲ್ಲಿ ಮತ್ತೆ ಮಹಾ ಮಳೆಯ ಆತಂಕ ಕಾಡಲಾರಂಬಿಸಿದೆ. ಮುಂದಿನ 24 ಗಂಟೆಯಲ್ಲಿ ಕರಾವಳಿಯ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆಯಿಂದ ಹೈ ಅಲರ್ಟ್ ಘೋಷಿಸಲಾಗಿದೆ.
ಶಿರಾಡಿಘಾಟ್ ನಲ್ಲಿ ನಿರಂತರ ಭೂಕುಸಿತ
ಕಡಲಲ್ಲಿ ಭಾರೀ ವೇಗವಾಗಿ ಗಾಳಿ ಬೀಸಲಿದ್ದು, ಸಮುದ್ರದಲ್ಲಿ ಭಾರಿ ಗಾತ್ರದ ಅಲೆಗಳು ಏಳಲಿವೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಕಡಲ ಅಬ್ಬರ ಹೆಚ್ಚಾಗಿರುವುದರಿಂದ ಮೀನುಗಾರರು ಮೀನುಗಾರಿಕೆಗೆ ತೆರಳದಂತೆ ಎಚ್ಚರಿಕೆ ನೀಡಲಾಗಿದೆ. ಈ ನಡುವೆ ಮಂಗಳೂರು -ಬೆಂಗಳೂರು ಸಂಪರ್ಕಿಸುವ ಶಿರಾಡಿಘಾಟ್ ನಲ್ಲಿ ನಿರಂತರ ಭೂಕುಸಿತ ಉಂಟಾಗುತ್ತಿದೆ.
ಸತತ ಮಳೆಗೆ ನಲುಗಿದ ಕೊಡಗಿನಲ್ಲಿ ಭೂ ಕುಸಿತಕ್ಕೆ ಮೂವರು ಸಾವು
ಮಣ್ಣು ಹಾಗೂ ಕಲ್ಲು ಬಂಡೆ ತೆರವಿಗೆ 6 ದಿನಗಳು ಬೇಕು
ಈ ಹಿನ್ನೆಲೆಯಲ್ಲಿ ರಸ್ತೆಗೆ ಬಿದ್ದಿರುವ ಭಾರೀ ಪ್ರಮಾಣದ ಮಣ್ಣು ಹಾಗೂ ಕಲ್ಲು ಬಂಡೆಗಳನ್ನು ತೆರವುಗೊಳಿಸಲು ಕನಿಷ್ಠ 6 ದಿನಗಳು ಬೇಕಾಗಲಿವೆ ಎಂದು ಅಂದಾಜಿಸಲಾಗಿದೆ. ಹದಗೆಟ್ಟಿರುವ ರಸ್ತೆ ದುರಸ್ತಿಗೂ ಕಾಲಾವಕಾಶ ಬೇಕಾಗಿರುವ ಕಾರಣ ಆಗಸ್ಟ್ 25 ರವರೆಗೆ ಶಿರಾಡಿ ಘಾಟ್ ರಸ್ತೆ ಬಂದ್ ಮಾಡಲು ತೀರ್ಮಾನಿಸಲಾಗಿದೆ.
ಕೇರಳದಲ್ಲಿ ಸಾವಿನ ಸಂಖ್ಯೆ ಎಪ್ಪತ್ತೊಂಬತ್ತಕ್ಕೆ
ಕೇರಳದಲ್ಲಿ ಮಳೆಯ ಅನಾಹುತ ಮುಂದುವರಿದಿದೆ. ಪ್ರವಾಹ, ಭೂ ಕುಸಿತದಿಂದ ಮೃತ ಪಟ್ಟವರ ಸಂಖ್ಯೆಯು ಎಪ್ಪತ್ತೊಂಬತ್ತಕ್ಕೆ ಹೆಚ್ಚಿದ್ದು, ಆ ಸಂಖ್ಯೆಯು ಇನ್ನಷ್ಟು ಏರಿಕೆ ಆಗುವ ಸಾಧ್ಯತೆಗಳಿವೆ. ಕೇರಳಕ್ಕೆ ಹೆಚ್ಚುವರಿ ನೆರವು ನೀಡುವಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡಿದ್ದಾರೆ.