ಸೌಹಾರ್ದ ರ್ಯಾಲಿ, ಸಿದ್ದರಾಮಯ್ಯಗೆ ಕೇರಳ ಸಿಎಂ ಅಭಿನಂದನೆ
ಮಂಗಳೂರು, ಮಾರ್ಚ್ .01 : ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಫೆಬ್ರವರಿ 25ರಂದು ಮಂಗಳೂರಿನಲ್ಲಿ ಶಾಂತಿಯುತ ಸೌಹಾರ್ದ ಕಾರ್ಯಕ್ರಮ ಸುವ್ಯವಸ್ಥೆಯಿಂದ ನಡೆಸಲು ಸೂಕ್ತ ಭದ್ರತೆ ಒದಗಿಸಿದ್ದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಅಭಿನಂದನೆ ಸಲ್ಲಿಸಿದ್ದಾರೆ.
ಫೆಬ್ರವರಿ 25ರಂದು ಮಂಗಳೂರಿನಲ್ಲಿ ಶಾಂತಿಯುತ ಸೌಹಾರ್ದ ಕಾರ್ಯಕ್ರಮಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆಗಮನವನ್ನು ಹಿಂದೂಪರ ಸಂಘಟನೆಗಳು ತೀವ್ರವಾಗಿ ವಿರೋಧಿಸಿದ್ದರು. ಇದಕ್ಕೆ ರಾಜ್ಯ ಸರ್ಕಾರ ಅವರಿಗೆ ಸೂಕ್ತ ಭದ್ರತೆಯನ್ನು ಒದಗಿಸಿ ಸುಲಲಿತವಾಗಿ ಸೌಹಾರ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ವ್ಯವಸ್ಥೆ ಮಾಡಿತ್ತು.[ಸೌಹಾರ್ದ ರ್ಯಾಲಿ, ಮಂಗ್ಳೂರು ಬಂದ್ ಎಫೆಕ್ಟ್ ರೌಂಡಪ್]
ಇದರಿಂದ ಕೇರಳ ಸಿಎಂ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರದ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ. ಪಿಣರಾಯಿ ವಿಜಯನ್ ಅವರು ಬರೆದ ಪತ್ರದಲ್ಲಿ ಏನಿದೆ ಎಂಬುವುದನ್ನು ಮುಂದೆ ಓದಿ...
ಪ್ರಿಯ ಶ್ರೀ ಸಿದ್ದರಾಮಯ್ಯ ಜೀ...
ನಿಮಗೆ ತಿಳಿದಿರುವಂತೆ 25.02.2017ರಂದು ಮಂಗಳೂರಿನಲ್ಲಿ ನನ್ನ ಕಾರ್ಯಕ್ರಮಗಳು ನಿಗದಿಯಾಗಿದ್ದವು. RSS ಮತ್ತು ಅದರ ಸಹ ಸಂಘಟನೆಗಳು ವಿವಾದ ಎಬ್ಬಿಸಿ, ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ನನಗೆ ಅವಕಾಶ ಕೊಡುವುದಿಲ್ಲ ಎಂದು ಸಾರ್ವಜನಿಕ ಹೇಳಿಕೆ ನೀಡಿದ್ದವು.[ಪಿಣರಾಯಿ ಭೇಟಿ: ಕರ್ನಾಟಕ-ಕೇರಳ ಪೊಲೀಸರ ಎಸ್ಕಾರ್ಟ್ ಗಲಾಟೆ]
ನಾವೆಲ್ಲರೂ ಇಷ್ಟು ವರ್ಷಗಳ ಕಾಲ ಪೋಷಿಸಿಕೊಂಡು ಬಂದ ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಸಂಪೂರ್ಣ ವಿರುದ್ಧವಾದ ಈ ಸಂಘಟನೆಗಳ ಫ್ಯಾಸಿಸ್ಟ್ ಧೋರಣೆ ಆಘಾತ ತರಿಸಿತ್ತು.
ವೈಯಕ್ತಿಕವಾಗಿ ನಾನು ಮತ್ತು ನಾನು ಪ್ರತಿನಿಧಿಸುವ ರಾಜಕೀಯ ಪಕ್ಷ ಇಂತಹ ಬೆದರಿಕೆಗಳನ್ನು ಬಹಳ ಬಾರಿ ಎದುರಿಸಿದ್ದೇವೆ. ಪ್ರಸ್ತುತ ನಾನು ಸಾಂವಿಧಾನಾತ್ಮಕವಾಗಿ ಪಡೆದಿರುವ ಹುದ್ದೆಯು ಅವರ ಸವಾಲುಗಳಿಗೆ ಅವರದೇ ಧಾಟಿಯಲ್ಲಿ ಉತ್ತರ ಕೊಡದಂತೆ ಮಿತಿ ಹೇರಿವೆ.
ನಿಮ್ಮ ನೇತೃತ್ವದ ಕರ್ನಾಟಕ ಸರ್ಕಾರವು ಈ ಸಂದರ್ಭವನ್ನು ನಿಭಾಯಿಸಿ, ಕಾರ್ಯಕ್ರಮ ಶಾಂತಿಯಿಂದ ನೆರವೇರುವಂತೆ ದೃಢತೆಯಿಂದ ಕಾರ್ಯ ನಿರ್ವಹಿಸಿದ್ದು ನನಗೆ ಸಂತಸ ತಂದಿದೆ.
ನನ್ನ ಭೇಟಿಯ ಸಂದರ್ಭದಲ್ಲಿ ಸೂಕ್ತ ಭದ್ರತೆ ನೀಡಿ ಕಾರ್ಯಕ್ರಮಗಳು ಸುಸೂತ್ರವಾಗಿ ನಡೆಯುವಂತೆ ಸಹಕರಿಸಿದ ತಮಗೆ ನಾನು ವಿಧ್ಯುಕ್ತವಾಗಿ ಧನ್ಯವಾದವನ್ನು ಸಮರ್ಪಿಸುತ್ತಿದ್ದೇನೆ.
ವಂದನೆಗಳೊಂದಿಗೆ,
ತಮ್ಮ
ವಿಶ್ವಾಸಿ
ಪಿಣರಾಯಿ
ವಿಜಯನ್