ಕಟೀಲು ದೇಗುಲ ಅರ್ಚಕರ ಮನೆ ಕಳವು ಆರೋಪಿಗಳು ಅಂದರ್
ಮಂಗಳೂರು, ಅಕ್ಟೋಬರ್ 19: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ವಾಸುದೇವ ಅಸ್ರಣ್ಣ ಅವರ ಮನೆಯಲ್ಲಿ ಡಕಾಯಿತಿ ನಡೆಸಿದ ಆರೋಪದ ಮೇಲೆ ಉದ್ಯಮಿ ಸೇರಿದಂತೆ ಐವರು ಆರೋಪಿಗಳನ್ನು ಬಜ್ಪೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಮಂಗಳೂರು ನಗರ ಪೊಲೀಸ್ ಕಮಿಷನರ್ ಎಂ. ಚಂದ್ರಶೇಖರ್, ಅಕ್ಟೋಬರ್ 4ರಂದು ಕಟೀಲು ದೇವಸ್ಥಾನದ ಪ್ರಧಾನ ಅರ್ಚಕರ ಮನೆಯಲ್ಲಿ ದರೋಡೆ ನಡೆದಿತ್ತು. ಈ ಪ್ರಕರಣದ ಸೂತ್ರಧಾರನಾಗಿರುವ ಬಿಜೈ ಕಾಪಿಕಾಡ್ ನ ಉದ್ಯಮಿ ಸುಧೀಂದ್ರರಾವ್ (33), ಕೃತ್ಯಕ್ಕೆ ಸಹಕಾರ ನೀಡಿದ ತೆಂಕ ಎಕ್ಕಾರಿನ ಚಿದಾನಂದ (33), ಎಕ್ಕಾರಿನ ಸೂರಜ್ ಕುಮಾರ್ (35), ಬಂಟ್ವಾಳ ಪುಣಚ ಮೂಡಂಬೈಲ್ನ ಸುರೇಶ್ ಕುಮಾರ್ ಎಂ. (40) ಹಾಗೂ ತೆಂಕ ಎಕ್ಕಾರಿನ ಸದಾಶಿವ ಶೆಟ್ಟಿ (49) ಎಂಬವರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.
ಬಂಧಿತರಿಂದ ಚಿನ್ನಾಭರಣಗಳನ್ನು ಮಾರಾಟ ಮಾಡಿದ ಹಣ 4.25 ಲಕ್ಷ ರು., 3.910 ಗ್ರಾಂ ತೂಕದ ಕಟೀಲು ದುರ್ಗಾಪರಮೇಶ್ವರಿ ದೇವರ ಭಾವಚಿತ್ರವಿರುವ ಒಂದು ಪೆಂಡೆಂಟ್, ಆರೋಪಿಗಳು ಬಳಸಿದ ಐದು ಮೊಬೈಲ್ ಫೋನ್ಗಳು, ಕೃತ್ಯಕ್ಕೆ ಬಳಸಿದ ಐ20 ಕಾರನ್ನು ವಶಕ್ಕೆ ಪಡೆಯಲಾಗಿದೆ ಎಂದು ಚಂದ್ರಶೇಖರ್ ತಿಳಿಸಿದರು.
ಆರೋಪಿಗಳ ಪತ್ತೆಗಾಗಿ ನಾಲ್ಕು ತಂಡಗಳನ್ನು ರಚಿಸಲಾಗಿತ್ತು. ಆರೋಪಿಗಳ ಬಗ್ಗೆ ಮಂಗಳೂರು ನಗರದ ಸಿಸಿಬಿ ಘಟಕದ ಪೊಲೀಸ್ ಇನ್ ಸ್ಪೆಕ್ಟರ್ ಸುನೀಲ್ ವೈ. ನಾಯಕ್ಗೆ ಮಾಹಿತಿ ಬಂದಿತ್ತು. ಸಿಸಿಬಿ ಸಿಬ್ಬಂದಿ ಹಾಗೂ ಪೊಲೀಸರ ತಂಡ ತಕ್ಷಣವೇ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ತೆಂಕ ಎಕ್ಕಾರು ಗ್ರಾಮದ ಹುಣ್ಸೆಕಟ್ಟೆ ಬಸ್ ನಿಲ್ದಾಣದ ಬಳಿ ಬಂಧಿಸಿದೆ.