ಶ್ರೀಕ್ಷೇತ್ರ ಕಟೀಲಿನ 6 ಮೇಳಗಳ ತಿರುಗಾಟ ಮುಕ್ತಾಯ
ಮಂಗಳೂರು, ಮೇ 25: ಶ್ರೀಕ್ಷೇತ್ರ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಯಕ್ಷಗಾನ ಮೇಳಗಳ ತಿರುಗಾಟ ಕೊನೆಗೊಳ್ಳಲಿವೆ. ಪತ್ತನಾಜೆಯ ಆಟದೊಂದಿಗೆ ಇಂದು ಶ್ರೀಕ್ಷೇತ್ರದ 6 ಮೇಳಗಳ ಕಲಾವಿದರು ಯಕ್ಷಗಾನ ಸೇವೆ ಪೂರ್ಣಗೊಳಿಸಿ ಗೆಜ್ಜೆಯನ್ನು ಕಳಚುವ ಮೂಲಕ ತಿರುಗಾಟ ಅಂತ್ಯಗೊಳಿಸಲಿದ್ದಾರೆ.
193 ದಿನಗಳ ತಿರುಗಾಟ ಪೂರ್ಣಗೊಂಡಿದ್ದು, 1,148 ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನಗಳನ್ನು ಈ ಮೇಳಗಳು ನೀಡಿವೆ.
ಪ್ರಚಾರಕ್ಕೆ ಅಡ್ಡಿ: 'ದೇವಿಮಹಾತ್ಮೆ' ಯಕ್ಷಗಾನ ನಿಲ್ಲಿಸಿದರೇ ಕಾಂಗ್ರೆಸ್ ಕಾರ್ಯಕರ್ತರು?
ಅತ್ಯಂತ ಹೆಚ್ಚು ಯಕ್ಷಗಾನ ಮೇಳಗಳನ್ನು ಹೊಂದಿರುವ ದೇವಳ ಎಂಬ ಪ್ರಖ್ಯಾತಿಯನ್ನು ಶ್ರೀ ಕ್ಷೇತ್ರ ಕಟೀಲು ಪಡೆದಿದೆ. ಇಂದು ರಥ ಬೀದಿಯಲ್ಲಿ 6 ಮೇಳಗಳ ಕಲಾವಿದರಿಂದ ಆಟ ನಡೆಯುತ್ತಿದ್ದು, ಯಕ್ಷಗಾನದ ಪೂರ್ವ ರಂಗ ರಥಬೀದಿಯಲ್ಲಿ ಹಾಕಿದ 6 ರಂಗಸ್ಥಳದಲ್ಲಿ ನಡೆದರೆ, ಪ್ರಸಂಗ ಪೀಠಿಕೆಯಿಂದ ನಂತರ ಆಟ ಒಂದೇ ರಂಗಸ್ಥಳದಲ್ಲಿ ನಡೆಯುತ್ತದೆ.
ಈ ಸಾಲಿನ ತಿರುಗಾಟವನ್ನು ನವಂಬರ್ 13ರಂದು ಆರಂಭಿಸಲಾಗಿತ್ತು. ಹೀಗೆ ಹೊರಟ ತಿರುಗಾಟದ ಮೇಳಗಳು ದಕ್ಷಿಣ ಕನ್ನಡ, ಉಡುಪಿ ಮಾತ್ರವಲ್ಲದೆ ಶಿವಮೊಗ್ಗದ ಸಾಗರ, ಕೇರಳದ ಕಾಸರಗೋಡುಗಳಲ್ಲಿ ಪ್ರದರ್ಶಸನ ನೀಡಿದ್ದವು.
ಇಂದು ಶ್ರೀದೇವಿ ಸನ್ನಿಧಿಯಲ್ಲಿ ಗೆಜ್ಜೆ ಕಟ್ಟಿ ದೇವಳದ ರಥಬೀದಿಯ 6 ರಂಗಸ್ಥಳಗಳಲ್ಲಿ ಏಕಕಾಲಕ್ಕೆ ಸೇವೆಯಾಟ, ಸರಸ್ವತಿ ಸದನದ ಭವ್ಯ ಮಂಟಪಗಳಲ್ಲಿ ಮೇಳದ ದೇವರ ಚೌಕಿ ಪೂಜೆಯೊಂದಿಗೆ ಪಾಂಡವಾಶ್ವಮೇಧ ಪ್ರಸಂಗ ಪ್ರದರ್ಶನಗೊಳ್ಳಲಿದೆ.
ಏಕಕಾಲದಲ್ಲಿ 6 ಭವ್ಯ ಮಂಟಪಗಳಲ್ಲಿ ಮೇಳದ ದೇವರ ಚೌಕಿ ಪೂಜೆ ಕಾಣುವ ಸೌಭಾಗ್ಯ ಒಂದೆಡೆಯಾದರೆ ಝಗಮಗಿಸುವ 6 ರಂಗಸ್ಥಳಗಳಲ್ಲಿ ಚೆಂಡೆ, ಮದ್ದಳೆ, ಗಂಟೆಯ ನಾದ-ನಿನಾದಗಳೊಂದಿಗೆ ಭಾಗವತಿಕೆಯ ಗಾಯನ, ಯಕ್ಷ ನಾಟ್ಯದ ಸೊಬಗನ್ನು ಏಕಕಾಲಕ್ಕೆ ಕಾಣುವುದೇ ಕಣ್ಣಿಗೆ ಹಬ್ಬ; ಅವಿಸ್ಮರಣೀಯ ಅನುಭವ.
ಈ ಬಾರಿಯ ತಿರುಗಾಟದೊಂದಿಗೆ ಹಲವು ವಿವಾದಗಳೂ ಸೃಷ್ಟಿಯಾಗಿದ್ದವು. ಪಟ್ಲಸತೀಶ್ ಶೆಟ್ಟಿ ಭಾಗವತರನ್ನು ಐದನೇ ಮೇಳದಿಂದ ನಾಲ್ಕನೇ ಮೇಳಕ್ಕೆ ವರ್ಗಾಯಿಸಿದ್ದರಿಂದ ಐದನೇ ಮೇಳದ ಕಲಾವಿದರು ಮುನಿಸಿಕೊಂಡು ರಾಜೀನಾಮೆ ಕೊಟ್ಟಿದ್ದರು. ನಂತರದ ಬೆಳವಣಿಗೆಯಲ್ಲಿ ಒಟ್ಟು 7 ಜನ ಕಲಾವಿದರನ್ನು ಮೇಳದಿಂದ ಹೊರಗಿಡಲಾಗಿತ್ತು. ಈ ಪ್ರಕರಣ ಬಹಳಷ್ಟು ವಿವಾದಗಳನ್ನೇ ಸೃಷ್ಟಿಸಿತ್ತು.
ಚುನಾವಣೆಯ ಆರಂಭದಲ್ಲೂ ವಿವಾದಗಳು ಮೇಳಕ್ಕೆ ಸುತ್ತಿಕೊಂಡವು. ಕಟೀಲಿನ 6ನೇ ಮೇಳದ ದೇವಿ ಮಹಾತ್ಮೆ ಪ್ರಸಂಗದಲ್ಲಿ ಮಾಲಿನಿ ಧೂತನಾಗಿ ಅಭಿನಯಿಸಿದ ಕಲಾವಿದ ಪೂರ್ಣೇಶ್ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರ ಕನ್ನಡ ಭಾಷಣವನ್ನು ಉಲ್ಲೇಖಿಸಿ ಬಸವಣ್ಣರ ವಚನಗಳ ಉಚ್ಚಾರವನ್ನು ಹಾಸ್ಯಕ್ಕೆ ಬಳಸಿಕೊಂಡಿದ್ದರು.
ಈ ಸಂದರ್ಭ ಚುನಾವಣಾ ಆಯೋಗದಿಂದ ನೋಟಿಸಿನೊಂದಿಗೆ ನಿಷೇಧಕ್ಕೆ ಒಳಗಾಗಿ, ಯಕ್ಷ ಅಭಿಮಾನಿಗಳಿಂದ ಇದಕ್ಕೆ ವಿರೋಧ ವ್ಯಕ್ತವಾಗಿತ್ತು. ದೊಡ್ದ ವಿವಾದವೇ ಸೃಷ್ಟಿಯಾಗಿ ನಂತರ ಸುಖಾಂತ್ಯಗೊಂಡಿತ್ತು.