ಉದ್ಯೋಗ ಅರಸಿ ಬಂದ ಕಾಶ್ಮೀರಿ ಯುವಕರು ಮಂಗಳೂರಿನಲ್ಲಿ ಮಾಡ್ತಿರೋದೇನು?
ಮಂಗಳೂರು, ಸೆಪ್ಟೆಂಬರ್.18 : ಕರಾವಳಿಯಲ್ಲಿರುವ ಸಂಘ ಸಂಸ್ಥೆಗಳ ಭದ್ರತೆ ಜವಾಬ್ದಾರಿಯನ್ನು ದೂರದ ಜಮ್ಮು ಕಾಶ್ಮೀರದ ಯುವಕರು ಹೊತ್ತಿದ್ದಾರೆ . ಇದು ಊಹೆಗೂ ನಿಲುಕದ ವಿಚಾರವಾದರೂ ಸತ್ಯ. ಕರಾವಳಿಯ ಸೆಕ್ಯೂರಿಟಿ ಅಥವಾ ಕಾವಲುಗಾರ ಹುದ್ದೆಯತ್ತ ಕಾಶ್ಮೀರಿ ಯುವಕರು ಚಿತ್ತ ಹರಿಸುತ್ತಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ನಡೆಯುವ ದಿನನಿತ್ಯದ ಸಂಘರ್ಷಗಳಿಂದ ಬೇಸತ್ತಿರುವ ಈ ಯುವಕರು ದಕ್ಷಿಣ ಭಾರತ ದತ್ತ ಉದ್ಯೋಗ ಅರಸಿ ಬರಲಾರಂಭಿಸಿದ್ದಾರೆ.
ನೌಕರಿ ಧಿಕ್ಕರಿಸಿ ಕುರಿ ಸಾಕಾಣಿಕೆಯಲ್ಲಿ ಬದುಕು ಕಟ್ಟಿಕೊಂಡ ಪದವೀಧರ
ಭೂ ಲೋಕದ ಸ್ವರ್ಗ ಎಂದೇ ಕರೆಯಲಾಗುತ್ತಿದ್ದ ಜಮ್ಮು ಕಾಶ್ಮೀರ ಕಳೆದ ಕೆಲವು ದಶಕಗಳಿಂದ ಸಂಘರ್ಷದ ಕುದಿ ನೆಲವಾಗಿ ಪರಿವರ್ತನೆಗೊಂಡಿದೆ. ಇಲ್ಲಿ ಕರ್ಫ್ಯೂ ಸರ್ವೇಸಾಮಾನ್ಯ . ಇಲ್ಲಿ ನಡೆಯುವ ಗಲಭೆಗಳು ಪ್ರತಿದಿನ ಪತ್ರಿಕೆ ಹಾಗೂ ಸುದ್ದಿವಾಹಿನಿಗಳಲ್ಲಿ ಫೋಟೋದೊಂದಿಗೆ ಪ್ರಮುಖ ಸುದ್ದಿಯಾಗುತ್ತದೆ.
ಇಲ್ಲಿ ಭದ್ರತಾಪಡೆಯ ಯೋಧರ ಹಾಗೂ ಭಯೋತ್ಪಾದಕರ ನಡುವಿನ ಎನ್ ಕೌಂಟರ್ ಗಳು, ಉಗ್ರರ ನಿಗ್ರಹ ಸರ್ವೆ ಸಾಮಾನ್ಯವೆನೆಸಿಬಿಟ್ಟಿದೆ. ರಾಜಕೀಯ ದೊಂಬರಾಟ, ರಾಜಕೀಯ ಪಕ್ಷಗಳ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಘರ್ಷಣೆಯ ನಡುವೆ ಇಲ್ಲಿನ ಅಭಿವೃದ್ಧಿ ಮರೀಚಿಕೆಯಾಗಿದೆ.
ಇಲ್ಲಿಯ ಯುವಕರನ್ನು ಮರಳುಮಾಡಿ ಭಯೋತ್ಪಾದನೆಯತ್ತ ಸೆಳೆಯುವ ಪ್ರಯತ್ನಗಳು ಎಗ್ಗಿಲ್ಲದೇ ಸಾಗುತ್ತಿದೆ. ಈ ಎಲ್ಲಾ ಜಂಜಾಟಗಳಿಂದ ಬೇಸತ್ತಿರುವ ಕಾಶ್ಮೀರಿ ಯುವಕರು ಹೊಸ ಬದುಕು ಕಟ್ಟಿಕೊಳ್ಳುವ ದೃಷ್ಟಿಯಿಂದ ಈಗ ಉದ್ಯೋಗ ಅರಸಿ ದಕ್ಷಿಣ ಭಾರತದತ್ತ ಬರುತ್ತಿದ್ದಾರೆ.
58 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಪಿಜಿಸಿಐಎಲ್
ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಪ್ರದೇಶಗಳಲ್ಲಿ ಬ್ಯಾಂಕ್ ಗಳು, ಚಿನ್ನದ ಮಳಿಗೆಗಳು, ಖಾಸಗಿ ಸಂಸ್ಥೆಗಳ ಭದ್ರತೆಗೆ ಕಾಶ್ಮೀರಿ ಯುವಕರು ಸೇರಿಕೊಳ್ಳುತ್ತಿದ್ದಾರೆ. ಇಲ್ಲಿಯ ಸಂಘ ಸಂಸ್ಥೆಗಳ ಸೆಕ್ಯುರಿಟಿ ಗಾರ್ಡ್ ಗಳಾಗಿ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ಜಮ್ಮು ಕಾಶ್ಮೀರದ ಯುವಕರು ಆಸಕ್ತಿ ತೋರುತ್ತಿದ್ದಾರೆ. ಈ ಕುರಿತ ಪೂರ್ಣ ಮಾಹಿತಿ ಇಲ್ಲಿದೆ...
ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವ ಯುವಕರು
ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಮ್ಮು ಕಾಶ್ಮೀರದ ಯುವಕರು ಇಲ್ಲಿಯ ಸೆಕ್ಯುರಿಟಿ ಏಜೆನ್ಸಿಗಳಲ್ಲಿ ಸೇರಿಕೊಳ್ಳುತ್ತಿದ್ದಾರೆ. ಮೊದಲೆಲ್ಲಾ ಖಾಸಗಿ ಸಂಸ್ಥೆಗಳಿಗೆ ಸೆಕ್ಯುರಿಟಿ ಗಾರ್ಡ್ ಗಳನ್ನು ಒದಗಿಸುವ ಕಂಪನಿಗಳಿಗೆ ಅಸ್ಸಾಂ, ಒಡಿಶಾ, ಉತ್ತರ ಪ್ರದೇಶ, ಸಿಕ್ಕಿಂ, ಮಣಿಪುರದ ಯುವಕರು ಸೆಕ್ಯೂರಿಟಿ ಗಾರ್ಡ್ ಗಳಾಗಿ ಕಾರ್ಯನಿರ್ವಹಿಸಲು ಬರುತ್ತಿದ್ದರು.
ಆದರೆ ಇತ್ತೀಚಿನ ದಿನಗಳಲ್ಲಿ ಜಮ್ಮುವಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಬಂದು ಸೇರಿಕೊಳ್ಳುತ್ತಿದ್ದಾರೆ .
ಬೆಂಗಳೂರಿನಲ್ಲೂ ಇದ್ದಾರೆ
ಮಂಗಳೂರಿನ ಚಿನ್ನದಂಗಡಿಗಳು, ಹಣಕಾಸು ಸೇರಿದಂತೆ ನಾನಾ ಕಚೇರಿ, ಖಾಸಗಿ ಕಚೇರಿ ಮತ್ತಿತರ ಸಂಸ್ಥೆಗಳಲ್ಲಿ 50ಕ್ಕೂ ಹೆಚ್ಚು ಮಂದಿ ಸೆಕ್ಯುರಿಟಿ ಗಾರ್ಡ್ ಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಮಂಗಳೂರು ಹೊರವಲಯದ ಬಜಪೆ, ಸುರತ್ಕಲ್ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿರುವ ಖಾಸಗಿ ಕಂಪನಿಗಳಲ್ಲೂ ಕಾವಲುಗಾರರಾಗಿ ದುಡಿಯುತ್ತಿದ್ದಾರೆ. ಅಲ್ಲದೆ ಗುಜರಾತ್, ಮಹಾರಾಷ್ಟ್ರ, ಸೇರಿದಂತೆ ಬೆಂಗಳೂರಿನಲ್ಲೂ ನಮ್ಮವರಿದ್ದಾರೆ ಎನ್ನುತ್ತಾರೆ ಜಮ್ಮು ಮೂಲದ ಸೆಕ್ಯುರಿಟಿ ಗಾರ್ಡ್ ಮಹೇಂದ್ರ ಸಿಂಗ್.
ಮೈಸೂರಿನಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
20 ಸಾವಿರ ಸಂಬಳ
ಜಮ್ಮುವಿನ ರಾಜೌರಿ ಜಿಲ್ಲೆಯ ಸೆಕ್ಯುರಿಟಿ ಗಾರ್ಡ್ ಲಿಯಾಕತ್ ಅಲಿ ಹೇಳುವ ಪ್ರಕಾರ "ನಮ್ಮಲ್ಲಿ ಕೆಲವರು ಜಮ್ಮು ಪೊಲೀಸ್ ಇಲಾಖೆಗೆ ಸೇರಿದ್ದಾರೆ. ಅಲ್ಲಿ ಉದ್ಯೋಗ ಸಿಗುವುದು ಕಷ್ಟ. ಇತ್ತೀಚಿನ ವರ್ಷಗಳಲ್ಲಿ ಅಲ್ಲಿಯ ಪರಿಸ್ಥಿತಿ ಕೂಡ ಸರಿ ಇಲ್ಲ. ಈ ಹಿನ್ನೆಲೆಯಲ್ಲಿ ಉದ್ಯೋಗ ಅರಸಿ ಈ ಕಡೆ ಬಂದಿದ್ದೇವೆ ಎನ್ನುತ್ತಾರೆ.
"ನಮ್ಮ ಜಮ್ಮುವಿನಲ್ಲಿ ಒಂದು ಭಯೋತ್ಪಾದಕರ ಭಯ ಕಾಡುತ್ತಿರುತ್ತದೆ. ಅಲ್ಲಿ ಕೆಲಸ ಸಿಕ್ಕರೂ ಸಂಬಳ ತುಂಬ ಕಡಿಮೆ. ಇಲ್ಲಿ ತಿಂಗಳಿಗೆ 10 ರಿಂದ 12 ಸಾವಿರ ಸಿಗುತ್ತದೆ. ಬ್ಯಾಂಕ್ ಅಥವಾ ಇನ್ನಿತರ ಖಾಸಗಿ ಸಂಸ್ಥೆಗಳಲ್ಲಿ ಗನ್ ಮ್ಯಾನ್ ಆಗಿ ಕೆಲಸ ಮಾಡಿದರೆ 20 ಸಾವಿರ ಸಂಬಳಕ್ಕೆ ಮೋಸವಿಲ್ಲ.
ಇಷ್ಟು ಸಂಬಳವನ್ನು ನಾವು ಜಮ್ಮುಕಾಶ್ಮೀರದಲ್ಲಿ ಊಹಿಸಲೂ ಸಾಧ್ಯವಿಲ್ಲ" ಎನ್ನುತ್ತಾರೆ ಗಾರ್ಡ್ ಸಮರ್ ಸಿಂಗ್
1 ತಿಂಗಳು ರಜೆ ಮಾಡ್ತಾರೆ
ದಕ್ಷಿಣ ಭಾರತದಲ್ಲಿ ವರ್ಷವಿಡೀ ಕೆಲಸ ದೊರಕುತ್ತದೆ. ಕೈ ತುಂಬಾ ಸಂಬಳದೊಂದಿಗೆ ಉಳಿದುಕೊಳ್ಳಲು ಉಚಿತ ರೂಂ ದೊರಕುತ್ತದೆ ಎನ್ನುವ ಕಾರಣಕ್ಕೆ ಕಾಶ್ಮೀರಿ ಯುವಕರು ಮಂಗಳೂರು ಬೆಂಗಳೂರು ಸೆಕ್ಯುರಿಟಿ ಸಂಸ್ಥೆಗಳಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಿದ್ದಾರೆ.
ಮಂಗಳೂರಿನಿಂದ ಜಮ್ಮುಕಾಶ್ಮೀರಕ್ಕೆ ತೆರಳಲು 4 ದಿನದ ಪ್ರಯಾಣ. ಇಲ್ಲಿ 6 ತಿಂಗಳು ದುಡಿದು 1 ತಿಂಗಳು ರಜೆ ಮಾಡಿ ಈ ಯುವಕರು ಜಮ್ಮುವಿಗೆ ಹಿಂದಿರುಗುತ್ತಾರೆ.