ಅಡ್ಡಪಲ್ಲಕ್ಕಿ ಮೂಲಕ ಕಾಶೀಮಠಾಧೀಶರ ಮಂಗಳೂರು ಪುರಪ್ರವೇಶ
ಮಂಗಳೂರು, ಫೆ 14: ಕಾಶೀಮಠ ಸಂಸ್ಥಾನದ ಸಂಯಮೀಂದ್ರ ಶ್ರೀಗಳು ತಮ್ಮ ಕೇರಳ ಮೊಕ್ಕಾನಿಂದ ನಗರದ ರಥಬೀದಿಯಲ್ಲಿರುವ ಶ್ರೀವೆಂಕಟರಮಣ ದೇವಳದಲ್ಲಿ ನಡೆಯುತ್ತಿರುವ 'ಮಂಗಳೂರು ರಥೋತ್ಸವ' ಕ್ಕೆ ಶನಿವಾರ ರಾತ್ರಿ (ಫೆ 13) ಆಗಮಿಸಿದರು.
ಕಾಶೀ ಶ್ರೀಗಳ ಪುರಪ್ರವೇಶ ಕಾರ್ಯಕ್ರಮ ವಿಶೇಷ ರೀತಿಯಲ್ಲಿ ಜರುಗಿತು. ಪ್ರಾರಂಭದಲ್ಲಿ ರಥಬೀದಿಯಲ್ಲಿರುವ ಸ್ವದೇಶಿ ಸ್ಟೋರ್ ಬಳಿಯಿಂದ ಶ್ರೀಗಳನ್ನು ವಿಶೇಷ 'ಅಡ್ಡಪಲ್ಲಕ್ಕಿ' ಯಲ್ಲಿ ಕುಳ್ಳಿರಿಸಿ ವಿವಿಧ ವಾದ್ಯಘೋಷ, ಬಿರುದಾವಳಿಗಳೊಂದಿಗೆ ಸ್ವಾಗತಿಸಲಾಯಿತು. (ಕಷ್ಟದ ಬದುಕನ್ನು ಗೆದ್ದ ಅನುಪಮಾ ಶೆಣೈ)
ಶ್ರೀ ಸಂಸ್ಥಾನದ ದೇವರ ಮತ್ತು ಶ್ರೀಸುಧೀಂದ್ರತೀರ್ಥರ ಭಾವಚಿತ್ರಗಳನ್ನು ಪ್ರತ್ಯೇಕ ಪಲ್ಲಕಿಗಳಲ್ಲಿ ಕುಳ್ಳಿರಿಸಿ, ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ದೇವಳಕ್ಕೆ ಕರೆತರಲಾಯಿತು.
ಶ್ರೀಗಳ ಪುರಪ್ರವೇಶ ಬಳೀಕ ದೇವರ ಭೇಟಿ ಮತ್ತು ದೇವರ ಮೃಗಭೇಟೆ ಉತ್ಸವ ನಡೆಯುತು. ಬಳಿಕ ಶ್ರೀಗಳು ಡೊಂಗರಕೇರಿ ಕಟ್ಟೆಯಲ್ಲಿ ಮೃಗಭೇಟೆ ಉತ್ಸವದಲ್ಲಿ ಪಾಲ್ಗೊಂಡರು.
ಭಾನುವಾರ ನಡೆಯಲಿರುವ ಬ್ರಹ್ಮರಥೋತ್ಸವದಲ್ಲಿ ಶ್ರೀಗಳು ಉಪಸ್ಥಿತರಿರಲಿದ್ದಾರೆ. ಸಂಯಮೀಂದ್ರ ಶ್ರೀಗಳು ಕಾಶೀ ಮಠಾಧೀಶರಾದ ಬಳಿಕ ಪ್ರಪ್ರಥಮ ಬಾರಿಗೆ ರಥಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷ. (ಚಿತ್ರ: ಮಂಜು ನೀರೇಶ್ವಾಲ್ಯ)