ರಾಜ್ಯದಲ್ಲಿ ರಣಕಹಳೆ ಎಬ್ಬಿಸಿರುವ ಕಂಬಳ ಬಗ್ಗೆ ಯಾರು ಏನಂದ್ರು?
ಮಂಗಳೂರು, ಜನವರಿ 24 : ಜಲ್ಲಿಕಟ್ಟು ನಿಷೇಧ ತೆರವುಗೊಳಿಸಿದ ಬೆನ್ನಲ್ಲಿಯೇ ಕಂಬಳ ಪರ ದ್ವನಿ ಎತ್ತಿದ ನಟ ಜಗ್ಗೇಶ್ ನಿಂದ ಆರಂಭಗೊಂಡ ಈ ಕಂಬಳ ರಣಕಹಳೆಗೆ ಕಂಬಳ ಮೇಲಿನ ನಿಷೇಧವನ್ನು ಹಿಂಪಡೆಯುವಂತೆ ಕರಾವಳಿ ಭಾಗದಲ್ಲಿ ಪ್ರತಿಭಟನೆ ವ್ಯಾಪಕವಾಗುತ್ತಿದೆ.
ಒಂದು ಕಡೆ ಕಂಬಳದ ವಿಚಾರಣೆ ಕೋರ್ಟ್ ನಲ್ಲಿ ಬಾಕಿ ಇದ್ದರೂ ಅದರ ವಿರೋಧದ ನಡುವೆಯೂ ಜನವರಿ 28ರಂದು ಕಂಬಳ ನಡೆಸಲು ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿ ಧೃಡ ನಿರ್ಧಾರಕ್ಕೆ ಬಂದಿದೆ.
ರಾಜ್ಯದಲ್ಲಿ ಪಕ್ಷಾತೀತವಾಗಿ ಬೆಂಬಲ ವ್ಯಕ್ತವಾಗುತ್ತಿದೆ. ಇನ್ನು ಕಂಬಳಕ್ಕೆ ಸಂಬಂಧಿಸಿದಂತೆ ಕಂಬಳ ಸಮಿತಿ, ತುಳುನಾಡ ರಕ್ಷಣಾ ವೇದಿಕೆ ಸೇರಿದಂತೆ ಅನೇಕ ಸಂಘಟನೆಗಳು ಒಗ್ಗೂಡಿದ್ದು, ಕಂಬಳಕ್ಕಾಗಿ ಶಾಂತಿಯುತ ಹೋರಾಟ ನಡೆಸುವುದಾಗಿ ತಿಳಿಸಿವೆ.
ಕಂಬಳದ ಕುರಿತು ಕರಾವಳಿ ಭಾಗದ ಸಚಿವರು ಏನು ಹೇಳಿದ್ದಾರೆ ಎಂಬುವುದುನ್ನು ತಿಳಿಯಲು ಮುಂದೆ ಓದಿ..
ಕೇಂದ್ರ ಸಚಿವ ಸದಾನಂದ ಗೌಡ
'ಕಂಬಳವನ್ನು ರಾಜ್ಯದ ಕ್ರೀಡೆಯನ್ನಾಗಿ ಘೋಷಿಸಬೇಕು. ಈ ಬಗ್ಗೆ ಪ್ರಧಾನಿಯವರ ಗಮನಕ್ಕೆ ತರುತ್ತೇನೆ. ಕಂಬಳ ಉಳಿಸಲು ನಾನೇ ಮುಂದಾಳತ್ವ ವಹಿಸುತ್ತೇನೆ. ನಾನು ಮುಖ್ಯಮಂತ್ರಿಯಾಗಿದಾಗ ಕಂಬಳಕ್ಕೆ 100ಕೋಟಿ ಬಿಡುಗಡೆ ಮಾಡಿದ್ದೇನೆ' ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ತಿಳಿಸಿದ್ದಾರೆ.
ದ.ಕ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ
ದ.ಕ ಜಿಲ್ಲೆಯ ಜಾನಪದ ಕಲೆಯಾದ 'ಕಂಬಳ'ವನ್ನು ರಕ್ಷಿಸಲು ಕಾಂಗ್ರೆಸ್ ಕಟಿಬದ್ಧವಾಗಿದೆ. ಈ ಕಲೆಗೆ ಕಾಂಗ್ರೆಸ್ ಆರಂಭದಿಂದಲೂ ಪ್ರೋತ್ಸಾಹ ನೀಡುತ್ತಾ ಬಂದಿದೆ. ರಾಜ್ಯ ಸರಕಾರದ ಮೂಲಕ ಕೇಂದ್ರ ಸರಕಾರಕ್ಕೆ ಒತ್ತಡ ಹೇರುವ ನಿರಂತರ ಪ್ರಯತ್ನ ನಡೆಸಿದೆ. ಈ ನೆಲೆಯಲ್ಲಿ ಕೇಂದ್ರ ಸರಕಾರ ಜಲ್ಲಿಕಟ್ಟುಗೆ ನೀಡಿದ ಪ್ರಾಮುಖ್ಯತೆಯನ್ನು ಕಂಬಳಕ್ಕೂ ನೀಡಬೇಕು. ಅಲ್ಲದೆ ಎಲ್ಲ ಗೊಂದಲ ಪರಿಹರಿಸಿ ಕಂಬಳವನ್ನು ಉಳಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸುತ್ತದೆ ಎಂದು ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದ್ದಾರೆ.
ಆಹಾರ ಸಚಿವ ಯು.ಟಿ. ಖಾದರ್
ಕರಾವಳಿಯ ಜನಪ್ರಿಯ ಜನಪದ ಕ್ರೀಡೆ ಕಂಬಳವನ್ನ ರಾಜ್ಯ ಸರಕಾರ ಸದಾ ಬೆಂಬಲಿಸುತ್ತದೆ.'ಯಕ್ಷಗಾನ, ಕಂಬಳ ಕರಾವಳಿಯ ಸಂಸ್ಕೃತಿಯ ಎರಡು ಕಣ್ಣುಗಳು. ಹೈಕೋರ್ಟಿನಲ್ಲಿ ನಡೆಯುತ್ತಿರುವ ಕಂಬಳ ವಿಷಯದಲ್ಲಿ ಕರಾವಳಿಯ ಪರ ನ್ಯಾಯ ಸಿಗಲಿದೆ ಎಂಬ ವಿಶ್ವಾಸವಿದೆ. ಕಂಬಳ ನಡೆಸಲು ಸರಕಾರ ಸಂಪೂರ್ಣ ಬೆಂಬಲ ನೀಡಲಿದೆ. ಕಂಬಳ ಪರ ನಿಂತು ನೇರ ಹಾಗೂ ಸ್ಪಷ್ಟವಾಗಿ ಬೆಂಬಲಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಜಿಲ್ಲೆಯ ಜನತೆಯ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದ್ದಾರೆ. ಹಾಗೂ ಜಲ್ಲಿಕಟ್ಟು ಕ್ರೀಡೆಗೆ ಕೇಂದ್ರ ಸರಕಾರ ಬೆಂಬಲ ನೀಡಿದ್ದು, ಕಂಬಳ ಕ್ರೀಡೆಗೂ ಬೆಂಬಲ ನೀಡುವುದು ಕೇಂದ್ರ ಸರಕಾರದ ಜವಾಬ್ದಾರಿಯಾಗಿದೆ ಎಂದು ಸಚಿವ ಖಾದರ್ ಹೇಳಿದ್ದಾರೆ.
ಜನವರಿ 30ಕ್ಕೆ ಕಂಬಳ ವಿಚಾರಣೆ
ಇದೆ ಜನವರಿ 30ರಂದು ರಾಜ್ಯ ಹೈಕೋರ್ಟ್ ಕಂಬಳದ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದ್ದು, ಕೋರ್ಟ್ ನ ತೀರ್ಪು ತೀವ್ರ ಕುತೂಹಲ ಮೂಡಿಸಿದೆ.
ಜನವರಿ 28ಕ್ಕೆ ಕಂಬಳ ಆಯೋಜನೆ
ಕೋರ್ಟ್ ಗೆ ಸೆಡ್ಡು ಹೊಡೆದಿರುವ ಕಂಬಳ ಸಮಿತಿ ಜನವರಿ 28ರಂದು ಬೆಳಗ್ಗೆ 11. 30ಕ್ಕೆ ಜೋಡುಕೆರೆಯಲ್ಲಿ ಕಂಬಳವನ್ನು ನಡೆಸಿಯೇ ತೀರುತ್ತೇವೆ ಎಂದು ಪಣ ತೊಟ್ಟಿದೆ.