ನನ್ನನ್ನು ಬಂಧಿಸಲು ಸರಕಾರ ಕುತಂತ್ರ ರೂಪಿಸುತ್ತಿದೆ: ವಜ್ರದೇಹಿ ಸ್ವಾಮೀಜಿ
ಮಂಗಳೂರು, ಜನವರಿ 19: ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ವಿರುದ್ಧ ರಾಜ್ಯ ಸರಕಾರ ಕೆಂಗಣ್ಣು ಬೀರಿದೆ. ಮೂರು ವರ್ಷಗಳ ಹಿಂದೆ ನಡೆದ ಉಳಾಯಿಬೆಟ್ಟು ಘರ್ಷಣೆ ಪ್ರಕರಣವನ್ನು ಸರ್ಕಾರ ಮತ್ತೆ ಕೆದಕಿದ್ದು ಸ್ವಾಮೀಜಿಗೆ ನೋಟಿಸ್ ಜಾರಿ ಮಾಡಿದೆ.
2014ರ ಡಿಸೆಂಬರ್ 9 ರಂದು ಮಂಗಳೂರು ಹೊರವಲಯದ ಉಳಾಯಿಬೆಟ್ಟುವಿನಲ್ಲಿ ದತ್ತ ಮಾಲಾಧಾರಿಗಳ ಹಲ್ಲೆ ಖಂಡಿಸಿ ಸ್ವಾಮೀಜಿ ನೇತೃತ್ವದಲ್ಲಿ ಪ್ರತಿಭಟನೆ ನಡೆದಿತ್ತು.
ನಿಷೇಧಾಜ್ಞೆಯ ನಡುವಿನಲ್ಲಿಯೂ ನಡೆದ ಪ್ರತಿಭಟನೆ ಹಿಂಸಾರೂಪಕ್ಕೆ ತೆರಳಿ ಘರ್ಷಣೆ ನಡೆದಿತ್ತು. ಈ ವೇಳೆ ಸ್ವಾಮೀಜಿ ಸೇರಿದಂತೆ ಹಿಂದೂ ಸಂಘಟನೆಯ ಮುಖಂಡರ ವಿರುದ್ದ ಪ್ರಕರಣ ದಾಖಲಾಗಿತ್ತು. ರಾಜಶೇಖರಾನಂದ ಸ್ವಾಮೀಜಿ ವಿರುದ್ದ ಜಾಮೀನು ರಹಿತ ಸೆಕ್ಷನ್ ಗಳೂ ಸೇರಿದಂತೆ ಒಂಭತ್ತು ಪ್ರಕರಣಗಳು ದಾಖಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ವಿಚಾರಣೆಗೆ ಹಾಜರಾಗುವಂತೆ ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸರು ಸಮನ್ಸ್ ಜಾರಿಗೊಳಿಸಿದ್ದಾರೆ. ಮೂರು ವರ್ಷಗಳ ಬಳಿಕ ಪ್ರಕರಣ ರೀ ಒಪನ್ ಆಗಿದ್ದು ಇದು ರಾಜ್ಯ ಸರ್ಕಾರದ ಕುತಂತ್ರ ಎಂದು ರಾಜಶೇಖರಾನಂದ ಸ್ವಾಮೀಜಿ ಆರೋಪಿಸಿದ್ದಾರೆ.
ಅಲ್ಲದೆ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ ಕುಮಾರ್ ಹೆಗಡೆ ವಜ್ರದೇಹಿ ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿಯೇ ಪೊಲೀಸರು ನೋಟಿಸ್ ನೀಡಿದ್ದು ರಾಜ್ಯ ಸರ್ಕಾರ ನೇರವಾಗಿ ತಮ್ಮನ್ನು ಟಾರ್ಗಟ್ ಮಾಡಿದೆ ಎಂದು ಸರ್ಕಾರದ ವಿರುದ್ದ ರಾಜಶೇಖರಾನಂದ ಸ್ವಾಮೀಜಿ ಕಿಡಿಕಾರಿದ್ದಾರೆ.