ಕೃಷ್ಣರಾಜ ಕ್ಷೇತ್ರದ ಭವಿಷ್ಯ ನಿರ್ಧರಿಸಲಿದೆ ಕಸದ ವಾಸನೆ!
ಮೈಸೂರು, ಏಪ್ರಿಲ್ 13 : ನಿಮ್ಮ ಕ್ಷೇತ್ರದಲ್ಲಿ ಕಸ ವಿಂಗಡಣೆಯಾಗಿದೆಯಾ? ನೀರು ಬರುತ್ತಿದೆಯಾ? ವಿದ್ಯುತ್ ಸಮಸ್ಯೆ, ರೋಡು ರಿಪೇರಿಯಾ? ಹೀಗೆ ಹಲವು ಜನನಾಯಕರು ಮನೆ ಬಾಗಿಲಿಗೆ ಬಂದು ಕೇಳುತ್ತಿದ್ದಾರೆ. ಈ ಕ್ಷೇತ್ರದ ಯಾರೊಬ್ಬರಿಗೂ ಕೇಳಿದರೂ ಸಾಕು, ಕೈ ಮುಗಿಯುತ್ತೇವೆ ನಮ್ಮ ಕ್ಷೇತ್ರದ ಕಸದ ಸಮಸ್ಯೆ ಬಗೆಹರಿಸಿ ಸಾಕು ಎಂದು ಅಂಗಲಾಚುತ್ತಿದ್ದಾರೆ.
ಇದ್ಯಾವ ಕ್ಷೇತ್ರ ಎಂದು ಯೋಚಿಸಬೇಡಿ. ದೇಶದಲ್ಲೇ ಸ್ವಚ್ಛ ನಗರಿಯ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದ ಮೈಸೂರು ಜಿಲ್ಲೆಯ ಕ್ಷೇತ್ರವಾದ ಕೃಷ್ಣರಾಜದ ಗೋಳಿನ ಕಥೆಯಿದು.
ಕೆ.ಆರ್.ಕ್ಷೇತ್ರದಿಂದ ಸುಚಿತ್ರಾ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ
ಇಲ್ಲಿನ ವಿದ್ಯಾರಣ್ಯಪುರಂನಲ್ಲಿರುವ ಸೂಯೇಜ್ ಫಾರಂನ ತ್ಯಾಜ್ಯ ಸಮಸ್ಯೆ ರಾಜ್ಯವೇಕೇ, ಕೇಂದ್ರದ ಕದವೂ ತಟ್ಟಿದೆ. ಮುಂದುವರೆದೂ ಅದು ರಾಜಕೀಯ ಕೆಸರೆರಚಾಟದ ಬಗೆಯತ್ತಲೂ ಸಾಗಿದೆ. ಇಲ್ಲಿನ ಕಸದ ಸಮಸ್ಯೆಗೆ 8 ವಾರ್ಡ್ ಜನರು ನಲುಗಿ ಹೋಗಿದ್ದಾರೆ. ಕಸದ ಸಮಸ್ಯೆಯಿಂದಾಗಿ ಈ ಕ್ಷೇತ್ರ ಸೊಳ್ಳೆಗಳ ತವರುಮನೆಯಿದ್ದಂತಾಗಿದೆ..
ಇದು ಮುಂದುವರೆದು ಆರೋಗ್ಯದ ಮೇಲೂ ಪರಿಣಾಮ ಬೀರಿದಂತಿದೆ. ಇದೊಂದು ತ್ಯಾಜ್ಯ ಸಂಸ್ಕರಣಾ ಘಟಕವಾಗಿದ್ದು, ದಿನನಿತ್ಯ ಟನ್ ಗಟ್ಟಲೆ ಕಸವನ್ನು ತಂದು ಪೌರಕಾರ್ಮಿಕರು ಸುರಿಯುತ್ತಿರುವುದೇ ಇಲ್ಲಿನ ಬಹುದೊಡ್ಡ ಸಮಸ್ಯೆ.
ಇನ್ನು ಈ ಕ್ಷೇತ್ರದಿಂದ ಸ್ಫರ್ಧಿಸಿ ಹಿಂದೆ ಗೆದ್ದಿದ್ದ ಬಿಜೆಪಿಯ ರಾಮದಾಸ್ ಆಗಲೂ ತ್ಯಾಜ್ಯ ಸಮಸ್ಯೆ ನಿವಾರಣೆಗೆ ಕ್ರಮ ಜರುಗಿಸಲಿಲ್ಲ. ಜಿಲ್ಲೆಯವರೇ ಮುಖ್ಯಮಂತ್ರಿ ಆಗಿದ್ದರೂ ಕ್ಷೇತ್ರದ ಈಗಿನ ಶಾಸಕ ಸೋಮಶೇಖರ್ ಅವರು ಕೂಡ ಸಮಸ್ಯೆ ಬಗೆಹರಿಸಲು ಮುಂದೆ ಬರುತ್ತಿಲ್ಲ ಎನ್ನುವುದು ಹಲವರ ಅಭಿಪ್ರಾಯ.
ಇತ್ತ ಚುನಾವಣೆಯ ಈ ಹೊತ್ತಿನಲ್ಲಿ ರಾಯನಕೆರೆಯಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕ ಪ್ರಾರಂಭಿಸಿ ಕಸದ ಸಮಸ್ಯೆಗೆ ತೇಪೆ ಹಾಕಲು ಪ್ರಯತ್ನ ನಡೆಸಲಾಗುತ್ತಿದೆ ಎಂದು ದೂರುತ್ತಿದ್ದಾರೆ ಮತದಾರರು. ಆದರೆ ಇಷ್ಟು ದಿನ ಇವರೆಲ್ಲಾ ಏನು ಮಾಡುತ್ತಿದ್ದರು ಎಂಬುದು ಮಾತ್ರ ಸಾರ್ವಜನಿಕರ ಪ್ರಶ್ನೆ.
ಹಾಲಿ ಶಾಸಕರು ಸುಲಭವಾಗಿ ಕೈಗೆ ಸಿಗುತ್ತಾರೆ ಎಂಬುದು ಕ್ಷೇತ್ರದ ಜನರ ಮಾತು. ಕೆಲ ಸಮಸ್ಯೆಗಳಿಗೆ ಮುಕ್ತಿ ದೊರಕಿದೆ ಎನ್ನುವ ಅವರು, ಇದೇ ಮಾತನ್ನು ಅಭಿವೃದ್ಧಿ ವಿಚಾರದಲ್ಲಿ ಒಪ್ಪಿಕೊಳ್ಳುವುದಿಲ್ಲ. ಜನರ ಸಮಸ್ಯೆಗಳು ಕುಂದು ಕೊರತೆಗಳನ್ನು ಬಗೆಹರಿಸುವುದರಲ್ಲಿ ಶಾಸಕರು ಮುಂದಿರುತ್ತಾರೆ. ಮನೆ ಬಳಿಗೆ ಬಂದು ಸಮಸ್ಯೆ ಏನೆಂದು ಕೇಳುತ್ತಿರುತ್ತಾರೆ. ಆದರೆ ರಸ್ತೆಗಳು, ಉದ್ಯಾನಗಳ ಅಭಿವೃದ್ಧಿಗಷ್ಟೇ ಅವರು ಸೀಮಿತವಾದಂತಿದೆ. ಅದನ್ನು ಹೊರತು ಪಡಿಸಿದ ಅಭಿವೃದ್ಧಿ ಕಾಣಸಿಗುತ್ತಿಲ್ಲ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.
ಮಳೆ ಬಂದರೆ ಜಲಾವೃತ
ಜಗತ್ಪ್ರಸಿದ್ಧ ಅರಮನೆ ವ್ಯಾಪ್ತಿಯಲ್ಲಿ ಬರುವ ಬಡಾವಣೆಗಳ ಉದ್ಯಾನ , ಶಿಕ್ಷಣ , ಆರೋಗ್ಯ ಸಂಸ್ಥೆಗಳ ತಾಣವಾಗಿರುವ ಈ ಕ್ಷೇತ್ರದಲ್ಲಿ ಐದು ವರ್ಷಗಳಲ್ಲಿ ಕೆಲ ಅಭಿವೃದ್ಧಿ ಕೆಲಸಗಳು ನಡೆದಿವೆ. ಅಷ್ಟೇ ಸಮಸ್ಯೆಗಳೂ ಇವೆ. ಇಲ್ಲಿ ನಡೆಯಬೇಕಾಗಿರುವ ಅಭಿವೃದ್ಧಿ ಕೆಲಸ ಮತ್ತಷ್ಟಿದೆ. ಅದಕ್ಕೆ ಉದಾಹರಣೆ ಕೆಲವು ತಿಂಗಳ ಹಿಂದೆ ಧಾರಾಕಾರ ಮಳೆ ಸುರಿದಾಗ ನಿರ್ಮಾಣವಾಗಿದ್ದ ಸಮಸ್ಯೆ ಹಾಗೂ ಇಲ್ಲಿನ ಹಲವು ಬಡಾವಣೆಗಳು ಜಲಾವೃತಗೊಂಡಿದ್ದವು ಇದನ್ನು ಮಾತ್ರ ಯಾರೂ ಮರೆಯುವಂತಿಲ್ಲ.
ಧಾರಾಕಾರ ಮಳೆಯಾದಾಗ ಇಲ್ಲಿನ ಕ್ಷೇತ್ರದ ಶಾಸಕರೊಂದಿಗೆ ಸ್ವತಃ ಸಿದ್ದರಾಮಯ್ಯ ಛತ್ರಿ ಹಿಡಿದುಕೊಂಡು ಮಾಡಿದ ಪರಿಶೀಲನೆ ನಡೆಸಿದ್ದರು. ಇದರ ಜೊತೆಗೆ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲು ಸೂಚನೆ ಅಂದು ನೀಡಿದ್ದರು. ಆದರೆ ಶ್ರೀರಾಂಪುರದಲ್ಲಿ ಸೇತುವೆ ನಿರ್ಮಾಣ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ. ಆ ಭಾಗದ ರಸ್ತೆ ಅಭಿವೃದ್ಧಿಯೂ ನಡೆದಿಲ್ಲ. ಇಲ್ಲಿನ ಅನೇಕ ಬಡ ಬಡಾವಣೆಗಳು ಕೆಲವೆಡೆ ರಾಜಕಾಲುವೆ, ಚರಂಡ, ಮೋರಿಗಳಲ್ಲಿ ಕಸಕಡ್ಡಿ ತುಂಬಿಕೊಂಡಿರುವುದು ಕಂಡುಬರುತ್ತದೆ.
ನಿರುದ್ಯೋಗ ಸಮಸ್ಯೆ
ವಸತಿ ಸಮಸ್ಯೆ, ನಿರುದ್ಯೋಗ ಸಮಸ್ಯೆ ಕೂಡ ಇಲ್ಲಿ ಬಗೆಹರಿದಿಲ್ಲ. ದಲಿತರು ವಾಸವಿರುವ ಅಶೋಕಪುರಂನ ಸಮಸ್ಯೆ ಇನ್ನೂ ಕೂಡ ಇಲ್ಲಿ ಕಂಡುಬರುತ್ತಿದೆ. ಕ್ಷೇತ್ರದ ಒಟ್ಟಾರೆ ಅಭಿವೃದ್ಧಿ ಉತ್ತಮವಾಗಿ ಇದ್ದು, ಇಲ್ಲಿನ ಸ್ಮಶಾನದಲ್ಲಿ ಮೂಲ ಸೌಕರ್ಯ ನೀಡುವಂತೆ ಕೋರಿ ಸಾಕಷ್ಟು ವರ್ಷಗಳೇ ಸಂದಿವೆ. ಅಲ್ಲಿ ಸೌದೆ ಹಾಗೂ ನೀರು ಕೂಡ ಸಿಗುವುದಿಲ್ಲ ಎನ್ನುತ್ತಾರೆ ಇಲ್ಲಿನ ಸ್ಥಳೀಯರು.
ಕೆಲಸಗಳೂ ಆಗಿವೆ ಅಂತಾರೆ ಶಾಸಕರು
ಈ ಕುರಿತಾಗಿ ಇಲ್ಲಿನ ಶಾಸಕ ಸೋಮಶೇಖರ ರವರನ್ನು ಸಂಪರ್ಕಿಸಿದಾಗ, ಐದು ವರ್ಷಗಳಲ್ಲಿ ಮೂರು ಬಾರಿ ಕ್ಷೇತ್ರದ ನಿವಾಸಿಗಳ ಮನೆ ಬಾಗಿಲಿಗೆ ಹೋಗಿ ಸಮಸ್ಯೆ ಆಲಿಸಿದ್ದೇನೆ. ನಾನು ಶಾಸಕನಾಗಿ ಆಯ್ಕೆಯಾದಾಗ ಈ ಕ್ಷೇತ್ರದಲ್ಲಿ ಬಹಳಷ್ಟು ಸಮಸ್ಯೆಗಳು ಇದ್ದವು. ಅದರಲ್ಲಿ ಕುಡಿಯುವ ನೀರಿನ ಸಮಸ್ಯೆಯೂ ಒಂದು. ರಸ್ತೆಗಳು ಸರಿ ಇರಲಿಲ್ಲ. ಮೋರಿಗಳಲ್ಲಿ ಕಸ ತುಂಬಿಕೊಂಡಿತ್ತು. ಈ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಿದ್ದೇನೆ. ಒಮ್ಮೆ ಕ್ಷೇತ್ರ ಸುತ್ತಾಡಿದರೆ ಅಭಿವೃದ್ಧಿಗೆ ಕಣ್ಣಿಗೆ ಕಟ್ಟುತ್ತದೆ ಎಂದು ನುಡಿಯುತ್ತಾರೆ. ಕ್ಷೇತ್ರ ವ್ಯಾಪ್ತಿಯಲ್ಲಿ ನಾಲ್ಕು ಇಂದಿರಾ ಕ್ಯಾಂಟೀನ್ ನಿರ್ಮಿಸಲಾಗಿದೆ. ಉದ್ಯಾನಗಳು ಅಭಿವೃದ್ಧಿ ಮಾಡಲಾಗಿದೆ. ಶಾಲಾ ಕಾಲೇಜುಗಳಿಗೆ ಅನುದಾನ ಲಭಿಸಿದೆ. ಕ್ಷೇತ್ರ ಹಿಂದೆ ಹೇಗಿತ್ತು, ಈಗ ಹೇಗಿದೆ ಯಾರು ಅಭಿವೃದ್ಧಿ ಮಾಡಿದ್ದಾರೆ ಎಂಬುದನ್ನು ಚುನಾವಣೆಯಲ್ಲಿ ಜನರೇ ನಿರ್ಧರಿಸುತ್ತಾರೆ ಎನ್ನುತ್ತಾರೆ.
ಬಿಜೆಪಿ ವರಸೆಯೇ ಬೇರೆ
ಈ ಕುರಿತಾಗಿ ಅನೇಕ ಹೋರಾಟಗಳನ್ನು ತ್ಯಾಜ್ಯದ ಕುರಿತಾಗಿ ಮಾಡಿದ್ದ ಮಾಜಿ ಸಚಿವ ಎಸ್. ಎ ರಾಮದಾಸ್ ಅವರನ್ನು ಸಂಪರ್ಕಿಸಿದಾಗ, ಕೃಷ್ಣರಾಜ ಕ್ಷೇತ್ರದಲ್ಲಿ ಕೈಗೊಂಡಿರುವ ಬಹುತೇಕ ಯೋಜನೆಗಳಿಗೆ ಕಾರಣ ಹಿಂದಿನ ಬಿಜೆಪಿ ಸರ್ಕಾರ. ರಸ್ತೆ ಅಭಿವೃದ್ಧಿಗೆ ನಮ್ಮ ಸರ್ಕಾರವೇ ಹಣ ಬಿಡುಗಡೆ ಮಾಡಿತ್ತು. ಕಾಂಗ್ರೆಸ್ ನ ಶಾಸಕರು ಈಗ ಆ ಯೋಜನೆಗಳನ್ನು ಪೂರ್ಣಗೊಳಿಸಿ ತಮ್ಮ ಯೋಜನೆಯೆಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಕೆಲವೆಡೆ ರಸ್ತೆ ಒಳಚರಂಡಿ ವ್ಯವಸ್ಥೆ ಹದಗೆಟ್ಟಿದೆ. ಕೇಂದ್ರದ ಯೋಜನೆಯಡಿ ನಗರ ಪಾಲಿಕೆ ನಿರ್ಮಿಸಿಕೊಟ್ಟಿರುವ ಮನೆ ಹೊರತುಪಡಿಸಿದರೆ ಈಗಿನ ಶಾಸಕರು ಒಂದು ಮನೆ ನಿರ್ಮಿಸಿಕೊಟ್ಟಿಲ್ಲ. ಕಸದ ಸಮಸ್ಯೆಗೆ ಮುಕ್ತಿ ತೋರಿಸಲು ಇವರಿಗೆ ಸಾಧ್ಯವಾಗಲಿಲ್ಲ. ಈ ಬಗ್ಗೆ ಶಾಸಕರು ಸಾರ್ವಜನಿಕ ವೇದಿಕೆಯಲ್ಲಿ ಚರ್ಚೆಗೆ ಬರಲಿ. ಯಾರ ಕಾಲದ ಅಭಿವೃದ್ಧಿ ಎಂದು ಚರ್ಚೆ ನಡೆಸೋಣ ಎನ್ನುತ್ತಾರೆ. ಚುನಾವಣಾ ಸಮಯದಲ್ಲಷ್ಟೇ ನಾಯಕರು ಮತದಾರನ ಮೊಗ ನೋಡುವುದು ಎಂಬ ಮಾತಿದೆ. ಇಲ್ಲಿನ ಜನರು ಪ್ರತಿಪಾದಿಸುತ್ತಿರುವುದು ಅದನ್ನೇ!