ಕರಾವಳಿ ಕದನ: ಶಕು ಅಕ್ಕ, ಸುನೀಲ್ ಕುಮಾರ್, ಹಾಲಾಡಿಗೆ ವಾಕ್ ಓವರ್?
ಮಂಗಳೂರು, ಏಪ್ರಿಲ್ 17 :ಕರ್ನಾಟಕದ ಹಿಂದುತ್ವದ ಪ್ರಯೋಗಶಾಲೆ, ಬಲ-ಎಡ ಪಂಥೀಯ ಎಂದು ಬಿರುದಾಂಕಿತವಾಗಿರುವ ಕರಾವಳಿಯ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಚುನಾವಣಾ ಕಣ ರಂಗೇರಿದೆ.
ಈ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೆಡಿಎಸ್ ಪ್ರಭಾವ ಅಷ್ಟಕಷ್ಟೇ ಎಂಬಂತಿರುವುದರಿಂದ ಸ್ಪರ್ಧೆ ಇರುವುದು ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ. ಹತ್ತಾರು ಹಿಂದೂ-ಮುಸ್ಲಿಂ ಯುವಕರ ಕೊಲೆ ಕಾರಣಕ್ಕಾಗಿ ಜಿಲ್ಲೆ ಕಳೆದ ಐದು ವರ್ಷಗಳಲ್ಲಿ ಹಲವಾರು ಬಾರಿ ಕೋಮು ಉದ್ವಿಘ್ನತೆ ಕಂಡಿದೆ.
ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್
ಕಾಂಗ್ರೆಸ್ ನಾಯಕರು ಬಿಜೆಪಿ-ಸಂಘ ಪರಿವಾರವನ್ನು ಇದಕ್ಕೆಲ್ಲಾ ದೂಷಿಸಿದರೆ, ಬಿಜೆಪಿ-ಸಂಘ ಪರಿವಾರದ ನಾಯಕರು ಕಾಂಗ್ರೆಸ್ ಪಕ್ಷವನ್ನು, ಅದರಲ್ಲೂ ಮುಖ್ಯವಾಗಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಉಳ್ಳಾಲದ ಶಾಸಕ, ಸಚಿವ ಯುಟಿ ಖಾದರ್ ಕೂಡ ಸಂಘ ಪರಿವಾರದ ಇನ್ನೊಂದು ಪ್ರಮುಖ ರಾಜಕೀಯಕ್ಕಾಗಿ ಪ್ರಮುಖ ಗುರಿ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಟಿಕೆಟ್ ರಾಜಕೀಯ
ಇದೀಗ ಎರಡೂ ಪಕ್ಷಗಳೂ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಕ್ಷೇತ್ರಗಳಿಗೆ ತಮ್ಮ ಅಭ್ಯರ್ಥಿ ಪಟ್ಟಿಯನ್ನು ಪ್ರಕಟಿಸಿವೆ. ಮೇಲ್ನೋಟಕ್ಕೆ ಉಭಯ ಪಕ್ಷಗಳು ಬಲಿಷ್ಠ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ ಎಂದೆನಿಸಿದರೂ, ಮತದಾರರ ಪ್ರಕಾರ ಕೆಲವು ಕ್ಷೇತ್ರಗಳಲ್ಲಿ ಪಕ್ಷಗಳ ತಪ್ಪು ನಿರ್ಧಾರ ವಿರೋಧಿ ಅಭ್ಯರ್ಥಿಗಳಿಗೆ ವಾಕ್ ಓವರ್ ನೀಡಿದಂತಿದೆ. ಹೇಗೆಂದು ತಿಳಿಯಲು ಮುಂದೆ ಓದಿ...
ಪುತ್ತೂರಿನಲ್ಲಿ ಅಂಥಾ ಫೈಟ್ ಇಲ್ಲ
ಇಲ್ಲಿಂದ ಕಾಂಗ್ರೆಸ್ ಹಾಲಿ ಶಾಸಕಿ ಶಕುಂತಲಾ ಶೆಟ್ಟಿ ಯಾನೆ ಶಕು ಅಕ್ಕನನ್ನು ನಿರೀಕ್ಷೆಯಂತೆ ಕಣಕ್ಕಿಳಿಸಿದೆ. ಆರ್ಎಸ್ಎಸ್ ನ ಗುಪ್ತ ಮತಗಳು ಈ ಬಾರಿಯೂ ಶಕು ಅಕ್ಕನಿಗೆ ಖಚಿತ. ಬಿಜೆಪಿ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರ ದೂರದ ಸಂಬಂಧಿ ಸಂಜೀವ ಮಠಂದೂರು ಅವರನ್ನು ಬಿಜೆಪಿ ಮತ್ತೊಮ್ಮೆ ತನ್ನ ಅಭ್ಯರ್ಥಿಯಾಗಿ ಘೋಷಿಸಿದೆ. ಸಾಮಾನ್ಯ ಮತದಾರರ ಪ್ರಕಾರ ಶಕು ಅಕ್ಕನಿಗೆ ಸಂಜೀವ ಮಠಂದೂರು ಸರಿ ಸಮಾನ ಅಭ್ಯರ್ಥಿಯಲ್ಲ. ಟಿಕೆಟ್ ವಂಚಿತ ಬಿಜೆಪಿ ಹಿರಿಯ ನಾಯಕ ಪುತ್ತಿಲ ಜೆಡಿಎಸ್ ನಿಂದ ಕಣಕ್ಕಿಳಿಯುವ ಸೂಚನೆ ಇದೆ. ಬೇರೊಬ್ಬ ಅಭ್ಯರ್ಥಿಯನ್ನು ಬಿಜೆಪಿ ಕಣಕ್ಕಿಳಿಸಿದ್ದರೆ ಒಂಚೂರು ಫೈಟ್ ಇತ್ತು ಎನ್ನುವ ಮಾತುಗಳು ಪುತ್ತೂರಿನಾದ್ಯಂತ ಕೇಳಿ ಬರುತ್ತಿದೆ. ಶಕು ಅಕ್ಕ ಚುನಾವಣಾ ಪ್ರಚಾರದ ಬದಲು ವಿಜಯ ಯಾತ್ರೆ ಕೈಗೊಳ್ಳಬಹುದು ಎಂಬುದು ಕ್ಷೇತ್ರದಾದ್ಯಂತ ಹರಡಿರುವ ಜೋಕ್!
ಕಾರ್ಕಳದಲ್ಲಿ ಗೋಪಾಲ್ ಭಂಡಾರಿಗೆ ಟಿಕೇಟ್
ಕಾಂಗ್ರೆಸ್ ನ ಹಿರಿಯ ನಾಯಕ, ಲೋಕೋಪಯೋಗಿ ಸಚಿವ ಎಚ್.ಸಿ. ಮಹದೇವಪ್ಪ ಆಪ್ತ ಉದಯ್ ಕುಮಾರ್ ಶೆಟ್ಟಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಸಮಾಜ ಸೇವೆಗಾಗಿ ಕಳೆದೊಂದು ವರ್ಷದಲ್ಲಿ ಸಾಕಷ್ಟು ಖರ್ಚು ಕೂಡ ಮಾಡಿದ್ದರು. ಆದರೆ ಪಕ್ಷ ಟಿಕೆಟ್ ನೀಡಿರುವುದು ಹಳೆ ಹುಲಿ, ಮಾಜಿ ಶಾಸಕ ಗೋಪಾಲ್ ಭಂಡಾರಿಗೆ. ಇದರ ಹಿಂದೆ ವೀರಪ್ಪ ಮೊಯ್ಲಿ ಕೈವಾಡವಿದೆ ಎನ್ನುವ ಆರೋಪ ಬಲವಾಗಿದೆ. ಸೋಮವಾರ ತಾಲೂಕಿನಾದ್ಯಂತ ಶೆಟ್ಟಿ ಬೆಂಬಲಿಗರು ದೊಡ್ಡ ಮಟ್ಟದಲ್ಲೇ ಪ್ರತಿಭಟನೆ ನಡೆಸಿದ್ದಾರೆ. ಪಕ್ಷದೊಳಗಿನ ಆಂತರಿಕ ಭಿನ್ನಮತದ ಲಾಭ ದೊರೆತಿರುವುದು ಬಿಜೆಪಿ ಯುವ ನಾಯಕ ಸುನೀಲ್ ಕುಮಾರ್ ಗೆ. ಒಂದೊಮ್ಮೆ ಕಾಂಗ್ರೆಸ್ ಪರವಾಗಿ ಶೆಟ್ಟಿ ಬೆಂಬಲಿಗರು ಪ್ರಚಾರ ನಡೆಸದಿದ್ದರೆ ಕುಮಾರ್ ಗೆಲುವು ಅತಿ ಸುಲಭ ಎನ್ನುವ ಸೂಚನೆ ಇದೆ. ಬಿಜೆಪಿ ಅಧಿಕಾರಕ್ಕೆ ಬಂದರೆ, ಸುನೀಲ್ ಕುಮಾರ್ ಗೆ ಸಚಿವ ಸ್ಥಾನ ಗ್ಯಾರಂಟಿ ಎನ್ನುವ ಪ್ರಚಾರದ ಮೂಲಕ ಬಿಜೆಪಿ ನಾಯಕರು ಅತ್ಯುತ್ಸಾಹದಿಂದ ಪ್ರಚಾರ ನಡೆಸುತ್ತಿದ್ದಾರೆ.
ಕುಂದಾಪುರದಲ್ಲಿ ಹಾಲಾಡಿಯವ್ರದ್ದೇ ಮಾತಂತೆ
ಹಾಲಿ ಪಕ್ಷೇತರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಇಲ್ಲಿ ಬಿಜೆಪಿ ಅಭ್ಯರ್ಥಿ. ಕಾಂಗ್ರೆಸ್ ಮಾಜಿ ರೌಡಿ ಯಾನೆ ಹಾಲಿ ಸಮಾಜಸೇವಕ, ಕಾರ್ಮಿಕ ಮುಂದಾಳು ರಾಕೇಶ್ ಮಲ್ಲಿಯನ್ನು ಕಣಕ್ಕಿಳಿಸಿದೆ. ಹಾಲಾಡಿ ಶೆಟ್ಟರ ವ್ಯಕ್ತಿತ್ವಕ್ಕೆ ಸಮಾನದ ಅಭ್ಯರ್ಥಿ ಮಲ್ಲಿ ಅಲ್ಲ ಎನ್ನುವುದನ್ನು ಕಾಂಗ್ರೆಸ್ ನಾಯಕರೇ ಬಹಿರಂಗವಾಗಿ ಹೇಳುತ್ತಿದ್ದಾರೆ. ಸದ್ಯದ ಟ್ರೆಂಡ್ ಪ್ರಕಾರ ಮಲ್ಲಿ ಅವರನ್ನು ಕಣಕ್ಕಿಳಿಸುವ ಮೂಲಕ ಹಾಲಾಡಿ ಶೆಟ್ಟರು ಮತ್ತೊಮ್ಮೆ ದಾಖಲೆ ಅಂತರದ ಜಯ ಸಾಧಿಸಲು ಕಾಂಗ್ರೆಸ್ ಭೂಮಿಕೆ ಸಿದ್ಧಪಡಿಸಿದೆ ಎನ್ನುವ ಮಾತುಗಳನ್ನು ಪಕ್ಷದ ಕಾರ್ಯಕರ್ತರು ಆಡುತ್ತಿದ್ದಾರೆ.
ಟ್ರೆಂಡ್ ಬದ್ಲಾಗ್ಬೋದು
ಇದೆಲ್ಲಾ ಚುನಾವಣೆಯ ಆರಂಭದ ಟ್ರೆಂಡ್. ಸಾಮಾಜಿಕ ಮಾಧ್ಯಮಗಳು ಅತ್ಯಂತ ಪ್ರಬಲವಾಗಿರುವ ಇಂದಿನ ದಿನಗಳಲ್ಲಿ ಒಂದೆರಡು ದಿನಗಳಲ್ಲೇ ಟ್ರೆಂಡ್ ಬದಲಾಗಬಹುದು. ಯಾರಿಗೆ ಸೋಲು ? ಯಾರಿಗೆ ಗೆಲುವು ಎಂಬುದನ್ನು ಈಗಲೇ ನಿರ್ಧರಿಸುವುದು ಸ್ವಲ್ಪ ಕಷ್ಟ. ನಾವೆಲ್ಲರೂ ನೋಡಿರುವಂತೆ ಹಿಂದೆ ನಡೆದಿರುವ ಚುನಾವಣೆಗಳಲ್ಲಿ ಬಹುತೇಕರು ಕೆಲವೇ ಅಂತರಗಳಲ್ಲಿ ಸೋಲು-ಗೆಲುವು ಕಂಡಿರುವುದನ್ನು ಕೇಳಿದ್ದೇವೆ. ಆದ್ದರಿಂದ ಮತದಾರರ ನಿಜವಾದ ಒಲವು ತಿಳಿಯಲು ಮೇ 15 ಚುನಾವಣಾ ಫಲಿತಾಂಶ ಬರುವವರೆಗೆ ಕಾಯಲೇಬೇಕಿದೆ.