ಸದಾನಂದ ಗೌಡರ ನಾಟಕದ ಕಣ್ಣೀರು ಬೇಡ: ಜೆಡಿಎಸ್ ವಕ್ತಾರ ಭೋಜೇ ಗೌಡ
ಮಂಗಳೂರು, ಜುಲೈ 11: ಬಂಟ್ವಾಳ, ಬಿ.ಸಿ.ರೋಡ್, ಕಲ್ಲಡ್ಕದಲ್ಲಿ ಅಶಾಂತಿ ಸೃಷ್ಟಿಯಾಗಿದೆ. ಮಹಿಳೆಯರು, ಮಕ್ಕಳ ಸಹಿತ ಜನರು ಭಯದ ವಾತಾವರಣದಲ್ಲಿದ್ದಾರೆ. ಇಂತಹ ಸಂದರ್ಭ ಸಂಸದೆ ಶೋಭಾ ಕರಂದ್ಲಾಜೆ ವೀರಾವೇಶದ ಮಾತುಗಳನ್ನಾಡುವ ಬದಲು ಶಾಂತಿಯತ್ತ ಚಿತ್ತ ಹರಿಸಲಿ ಎಂದು ರಾಜ್ಯ ಜನತಾ ದಳ ವಕ್ತಾರ ಭೋಜೇ ಗೌಡ ಸಲಹೆ ನೀಡಿದ್ದಾರೆ.
ಓಟಿಗಾಗಿ ಶರತ್ ಮಡಿವಾಳ ಶವಯಾತ್ರೆ - ರಮಾನಾಥ ರೈ ಆರೋಪ
ಸೋಮವಾರ ಮಂಗಳೂರು ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, "ಡಿ.ವಿ. ಸದಾನಂದ ಗೌಡ ಇತ್ತೀಚೆಗೆ ಹತ್ಯೆಗೀಡಾದ ಶರತ್ ಮಡಿವಾಳರ ಮನೆಗೆ ತೆರಳಿ ಶರತ್ರ ತಂದೆಯ ದು:ಖ ನನ್ನ ನೋವನ್ನು ಇಮ್ಮಡಿಗೊಳಿಸಿದೆ ಎಂದು ಮೊಸಳೆ ಕಣ್ಣೀರು ಸುರಿಸಿದ್ದಾರೆ. ಜಿಲ್ಲೆಯಲ್ಲಿ ಈಗಾಗಲೆ ಸಾಕಷ್ಟು ಮತೀಯ ಗಲಭೆಗಳು, ಹತ್ಯೆಗಳಾಗಿವೆ. ಆವಾಗಲೇ ಡಿ.ವಿ. ಸದಾನಂದ ಗೌಡರು ಎಚ್ಚೆತ್ತುಕೊಂಡು ಸೂಕ್ತ ಕ್ರಮ ಜರಗಿಸಿದ್ದರೆ ಶರತ್ ಮಡಿವಾಳರಂತಹ ಯುವಕರ ಕೊಲೆಯಾಗುತ್ತಿರಲಿಲ್ಲ. ಕೊಲೆಯಾದ ಬಳಿಕ ಮೊಸಳೆ ಕಣ್ಣೀರು ಸುರಿಸುವ ಅಗತ್ಯವಿಲ್ಲ," ಎಂದು ಕಿಡಿಕಾರಿದ್ದಾರೆ.
"ಬಿಜೆಪಿ ಗೋಹತ್ಯೆಯ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ. ಗೋ ರಕ್ಷಣೆಯ ಹೆಸರಿನಲ್ಲಿ ಸ್ವಯಂ ಘೋಷಿತ ಗೋರಕ್ಷಕರು ಮಾನವ ಹತ್ಯೆ ಮಾಡುತ್ತಿದ್ದಾರೆ. ಇವರಿಗೆ ಒಂದೇ ಒಂದು ಗೋವನ್ನು ಸಾಕಿ, ಸಲಹಿ ಗೊತ್ತಿಲ್ಲ. ಮೊದಲು ಇವರು ಗೋವುಗಳನ್ನು ಸಾಕಲಿ," ಎಂದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಅಮರನಾಥ ಶೆಟ್ಟಿ, ಜೆಡಿಎಸ್ ದ.ಕ. ಜಿಲ್ಲಾಧ್ಯಕ್ಷ ವಿಟ್ಲ ಮುಹಮ್ಮದ್ ಮತ್ತಿತರು ಉಪಸ್ಥಿತರಿದ್ದರು.