ಮಂಗಳೂರಿನಲ್ಲಿ ಸಂಭ್ರಮದ ಕನ್ನಡ ರಾಜ್ಯೋತ್ಸವ ಆಚರಣೆ
ಮಂಗಳೂರು, ನವೆಂಬರ್ 1: ಮಂಗಳೂರಿನಲ್ಲಿ ಸಂಭ್ರಮದಿಂದ 62ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಜಿಲ್ಲಾಡಾಳಿತ ವತಿಯಿಂದ ನಗರದ ನೆಹರೂ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಬೆಳಗಾವಿ: ಎಂಇಎಸ್ ಕರಾಳ ದಿನದಲ್ಲಿ ಮೇಯರ್ ಸಂಜೋತಾ ಭಾಗಿ
ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ಪಡೆ ಸೇರಿದಂತೆ ಎನ್.ಸಿ.ಸಿ ಪ್ಲಟೂನ್ ಗಳು ಹಾಗೂ ಶಾಲಾ ವಿದ್ಯಾರ್ಥಿಗಳ ಆಕರ್ಷಕ ಪಥಸಂಚಲನ ನಡೆಯಿತು.
ಕನ್ನಡ ಉಳಿಸುವ ಜವಾಬ್ದಾರಿ ನಮ್ಮದು
ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ್ ರೈ, "ಇಂದಿನ ಜಾಗತೀಕರಣ, ಉದಾರೀಕರಣ, ಖಾಸಗೀಕರಣದಂತ ಸ್ಥಿತ್ಯಂತರದ ಯುಗದಲ್ಲಿ ಕನ್ನಡ ನಾಡು- ನುಡಿ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ನಮ್ಮದಾಗಿದೆ," ಎಂದು ಅಭಿಪ್ರಾಯ ಪಟ್ಟರು.
ಆಡಳಿತದಲ್ಲಿ ಕನ್ನಡ ಜಾರಿ
ಆಡಳಿತದಲ್ಲಿ ಕನ್ನಡವನ್ನು ಕಡ್ಡಾಯವಾಗಿ ಜಾರಿಗೆ ತರುವುದು, ಕನ್ನಡ ತಂತ್ರಾಂಶ ವ್ಯಾಪಕಗೊಳಿಸುವುದು ಸೇರಿದಂತೆ ಪ್ರಾಥಮಿಕ ಶಾಲೆಗಳಿಂದಲೇ ಕನ್ನಡ ಕಡ್ಡಾಯಕ್ಕೆ ಕನ್ನಡಿಗರ ಇಚ್ಛಾಶಕ್ತಿ ಮತ್ತು ಬದ್ಧತೆ ಅಗತ್ಯ ಎಂದು ಹೇಳಿದರು.
ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ
ಕಾರ್ಯಕ್ರಮದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 15 ಮಂದಿ ಮಹನೀಯರು ಹಾಗೂ 4 ಸಂಸ್ಥೆಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಬಾರಿ ಡಾ. ನಂದಕಿಶೋರ್, ಡಿ.ಕೃಷ್ಣ ಸಾಲ್ಯಾನ್, ಕೋಟಿ ಪರವ ಮಾಡಾವು, ಬೆಂಗ್ರೆ ವಿಜಯ ಸುವರ್ಣ, ಕೇಶವ ಕುಂದರ್, ಶ್ರೀಧರ ಹೊಳ್ಳ, ಕೆ.ಆರ್.ನಾಥ್, ಮೋನಪ್ಪ ಆಚಾರ್ಯ, ಅಶೋಕ್ ಭಟ್ ಎನ್, ವಿನ್ನಿ ಫೆರ್ನಾಂಡಿಸ್, ಮುಂತಾದವರಿಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಅಂಬೇಡ್ಕರ್ ವೃತ್ತದಿಂದ ಮೆರವಣಿಗೆ
ಕಾರ್ಯಕ್ರಮದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜಾ, ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್, ಐಜಿಪಿ ಹೇಮಂತ್ ನಿಂಬಾಳ್ಕರ್, ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್, ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ಉಪಸ್ಥಿತರಿದ್ದರು.
ಈ ಮೊದಲು ನಗರದ ಜ್ಯೋತಿ ಅಂಬೇಡ್ಕರ್ ವೃತ್ತದಿಂದ ರಾಜ್ಯೋತ್ಸವ ಮೆರವಣಿಗೆ ನಡೆಸಲಾಯಿತು. ಹಿರಿಯ ಸಾಹಿತಿ ನಾಡೋಜ ಸಾರಾ ಅಬೂಬಕ್ಕರ್ ಮೆರವಣಿಗೆಗೆ ಚಾಲನೆ ನೀಡಿದರು.