ಮಂಗಳೂರು : ಕಂಕನಾಡಿ ಮಾರುಕಟ್ಟೆಗೆ ಹುಸಿ ಬಾಂಬ್ ಬೆದರಿಕೆ ಕರೆ
ಮಂಗಳೂರು, ಜನವರಿ 27 : ಮಂಗಳೂರಿನ ಕಂಕನಾಡಿ ಮಾರುಕಟ್ಟೆಯಲ್ಲಿ ಬಾಂಬ್ ಇಡಲಾಗಿದೆ ಎಂಬ ಬೆದರಿಕೆ ಕರೆ ಬಂದಿತ್ತು. ತಪಾಸಣೆ ನಡೆಸಿದ ಬಳಿಕ ಇದು ಹುಸಿ ಬೆದರಿಕೆ ಕರೆ ಎಂಬುದು ಎಂದು ತಿಳಿದುಬಂದಿತು. ಬೆದರಿಕೆ ಕರೆ ಮಾಡಿದ್ದ ಅಪ್ರಾಪ್ತ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ಮಂಗಳವಾರ ಸಂಜೆ ಪೊಲೀಸ್ ಕಂಟ್ರೋಲ್ ರೂಂಗೆ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಕರೆ ಬಂದಿತು. ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು, ಶ್ವಾನ ದಳ ಮತ್ತು ಬಾಂಬ್ ನಿಷ್ಕ್ರೀಯ ದಳದೊಂದಿಗೆ ಮಾರುಕಟ್ಟೆಯಲ್ಲಿ ತಪಾಸಣೆ ನಡೆಸಿದರು. [ಮಂಗಳೂರಿನಲ್ಲಿ ಶಂಕಿತ ಉಗ್ರನ ಬಂಧನ]
ಮಾರುಕಟ್ಟೆಯನ್ನು ಸಂಪೂರ್ಣವಾಗಿ ಪರಿಶೀಲಿಸಿದ ಬಳಿಕ ಬಾಂಬ್ ಇಲ್ಲ, ಇದು ಹುಸಿ ಬೆದರಿಕೆ ಕರೆ ಎಂದು ಪೊಲೀಸರು ಘೋಷಿಸಿದರು. ಕರೆ ಮಾಡಿದ ವ್ಯಕ್ತಿಗಾಗಿ ಕದ್ರಿ ಪೊಲೀಸರು ಹುಡುಕಾಟ ನಡೆಸಿದರು. ಆಗ, ಕಂಕನಾಡಿ ಸಮೀಪದ ಎಸ್ಟಿಡಿ ಬೂತ್ನಿಂದ ಕರೆ ಬಂದಿರುವುದು ತಿಳಿಯಿತು. [ನನ್ನ ಮಗ ಉಗ್ರನಲ್ಲ, ಅಮಾಯಕ : ತಾಯಿಯ ಕರುಳು]
ಅಲ್ಲಿಗೆ ತೆರಳಿ ವಿಚಾರಣೆ ನಡೆಸಿದ ಪೊಲೀಸರಿಗೆ ಬಾಲಕನೊಬ್ಬ ಕರೆ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಯಿತು. ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು, ಬಾಲಕನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಕರೆ ಮಾಡಿರುವ ಬಾಲಕ, ಕಂಕನಾಡಿಯ ಮಾರುಕಟ್ಟೆಯ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ನಿರೀನ ಟ್ಯಾಂಕ್ನಲ್ಲಿ ಕೊಳೆತ ಶವ ಪತ್ತೆ : ಬಜ್ಪೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಂ.ಎಸ್.ಇ.ಝಡ್ ಕಾಲೋನಿಯ ಬೃಹತ್ ಗಾತ್ರದ ಓವರ್ ಹೆಡ್ ನೀರಿನ ಟ್ಯಾಂಕ್ನಲ್ಲಿ ವ್ಯಕ್ತಿಯೊಬ್ಬರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತಪಟ್ಟ ವ್ಯಕ್ತಿಯನ್ನು ನೀರು ಸರಬರಾಜು ಮಾಡುತ್ತಿದ್ದ ಸದಾಶಿವ ಶೆಟ್ಟಿ ಕಳವಾರು (50) ಎಂದು ಗುರುತಿಸಲಾಗಿದೆ.
ಸುಮಾರು 2 ಲಕ್ಷ ಲೀಟರ್ ಸಾಮರ್ಥ್ಯದ ಬೃಹತ್ ಗಾತ್ರದ ನೀರಿನ ಟ್ಯಾಂಕ್ ಅನ್ನು ಕಳೆದ ವರ್ಷ ನಿರ್ಮಾಣ ಮಾಡಲಾಗಿತ್ತು. ಸದಾಶಿವ ಅವರು ಮೂರು ತಿಂಗಳಿನಿಂದ ನೀರು ಸರಬರಾಜು ಮಾಡುವ ಕೆಲಸ ಮಾಡುತ್ತಿದ್ದರು. ಕಳೆದ ಮೂರು ದಿನಗಳಿಂದ ನೀರು ಸರಬರಾಜು ಸ್ಥಗಿತಗೊಂಡಿತ್ತು ಮತ್ತು ಸದಾಶಿವ ಶೆಟ್ಟಿ ಅವರು ನಾಪತ್ತೆಯಾಗಿದ್ದರು.
ಅನುಮಾನಗೊಂಡ ಸ್ಥಳೀಯರು ಟ್ಯಾಂಕ್ ಸಮೀಪ ಪರಿಶೀಲನೆ ನಡೆಸಿದಾಗ ಟ್ಯಾಂಕ್ ಹತ್ತಲು ಅಳವಡಿಸಿದ್ದ ಏಣಿಯ ಬಳಿ ಚಪ್ಪಲಿ ಪತ್ತೆಯಾಗಿತ್ತು. ಅನುಮಾನದಿಂದ ಟ್ಯಾಂಕ್ ಪರಿಶೀಲಿಸಿದಾಗ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸದಾಶಿವ ಅವರು ಆಯತಪ್ಪಿ ಬಿದ್ದರೋ, ಆತ್ಮಹತ್ಯೆ ಮಾಡಿಕೊಂಡರೋ? ಎಂಬುದು ಖಚಿತವಾಗಿಲ್ಲ. ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.