ಮಂಗಳೂರಿನ ಕದ್ರಿ ಪಾರ್ಕಿನಲ್ಲಿ ಮತ್ತೆ ಓಡಲಿದೆ ಪುಟಾಣಿ ರೈಲು
ಮಂಗಳೂರು, ಆಗಸ್ಟ್ 20: ಮಂಗಳೂರಿನ ಕದ್ರಿ ಪಾರ್ಕ್ ನಲ್ಲಿ ಕಳೆದ 5 ವರ್ಷಗಳಿಂದ ಸ್ಥಗಿತ ಗೊಂಡಿದ್ದ ಮಕ್ಕಳ ಪುಟಾಣಿ ಚುಕು-ಬುಕು ರೈಲು ಬಾಲ ಮಂಗಳ ಎಕ್ಸ್ಪ್ರೆಸ್ ಮತ್ತೆ ಓಡುವ ದಿನಗಳು ಸನ್ನಿಹಿತ ವಾಗಿವೆ.
ಕಳೆದ 5 ವರ್ಷಗಳಿಂದ ಇದು ಸ್ಥಗಿತಗೊಂಡಿದ್ದು, ಜನಪ್ರತಿನಿಧಿ ಹಾಗೂ ಅಧಿಕಾರಿಗಳ ನಿರಾಸಕ್ತಿಯಿಂದ ಮೂಲೆ ಸೇರಿದ್ದ ಈ ಪುಟಾಣಿ ರೈಲು ಮಕ್ಕಳ ಚಿಲಿಪಿಲಿ ಯೊಂದಿಗೆ ಮತ್ತೆ ಹಳಿಯ ಮೇಲೆ ಓಡಲಿದೆ.
ಬೆಂಗಳೂರಿನ ಕಬ್ಬನ್ ಪಾರ್ಕ್ ನಲ್ಲಿ ಸಂಚರಿಸುತ್ತಿದ್ದ ಈ ಹಳೇ ರೈಲನ್ನೇ ಕದ್ರಿ ಪಾರ್ಕ್ಗೆ ತರಲಾಗಿತ್ತು. ಕೇವಲ ಎರಡು ಬೋಗಿಗಳು ಇರುವ ಈ ರೈಲು 1975ರಲ್ಲಿ ತಯಾರಿಸಲಾಗಿದೆ.
ಪುಟಾಣಿ ರೈಲಿಗೆ ಭೂಮಿ ಪೂಜೆ
ಕದ್ರಿ ಪಾರ್ಕ್ನಲ್ಲಿ ಈ ಪುಟಾಣಿ ರೈಲು ಮತ್ತೆ ಓಡಿಸುವ ನಿಟ್ಟಿನಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಶನಿವಾರ ಮಂಗಳೂರು ದಕ್ಷಿಣ ಶಾಸಕರಾದ ಜೆ.ಆರ್.ಲೋಬೊರವರು ಪುಟಾಣಿ ರೈಲು ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
ಸಮಗ್ರ ಅಭಿವೃದ್ಧಿಗೆ ಯೋಜನೆ
ಈ ಸಂದರ್ಭದಲ್ಲಿ ಮಾತನಾಡಿದ ಜೆ.ಆರ್. ಲೋಬೋ, "ಕದ್ರಿ ಪಾರ್ಕ್ ನ ಸಮಗ್ರ ಅಭಿವೃದ್ಧಿಗೆ ಈಗಾಗಲೇ ಹಲವಾರು ಯೋಜನೆಗಳನ್ನು ಹಾಕಿಕೊಂಡಿದ್ದು ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿದೆ," ಎಂದು ಹೇಳಿದರು.
ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿ
"ಕದ್ರಿ ಪಾರ್ಕ್ ನಲ್ಲಿ ಇನ್ನಷ್ಟು ಪ್ರಗತಿ ಕಾಮಗಾರಿಯನ್ನು ಹಮ್ಮಿಕೊoಡು ಇದನ್ನು ಒಂದು ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿಪಡಿಸಲಾಗುವುದು," ಎಂದು ಜೆ.ಆರ್ ಲೋಬೋ ತಿಳಿಸಿದ್ದಾರೆ.
80 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ
ಪುಟಾಣಿ ರೈಲು ನಿರ್ಮಾಣಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ 80ಲಕ್ಷ ಅನುದಾನವನ್ನು ಒದಗಿಸಲಾಗಿದೆ. ಪ್ರಸ್ತುತ ಇರುವ ಇಲ್ಲಿನ ರೈಲಿನ ವ್ಯವಸ್ಥೆಗಳು ಸಂಪೂರ್ಣ ಹಾಳಾಗಿದ್ದು ದುರಸ್ತಿಗೊಳಿಸಬೇಕಿದೆ. ನೂತನ ರೈಲು ಹಳಿ ನಿರ್ಮಾಣವಾಗಬೇಕಿದೆ.
ಮುಂದಿನ ಬೇಸಿಗೆಗೆ ಚುಕು ಬುಕು ರೈಲು
ಈಗ ಮಹಾ ನಗರವಾಗಿ ರೂಪುಗೊಂಡಿರುವ ಮಂಗಳೂರು ನಗರದ ಜನ ಸಂಖ್ಯೆ ಏರಿಕೆಯಾಗಿದ್ದು ಮಕ್ಕಳ ಸಂಖ್ಯೆಯು ಹೆಚ್ಚಿದೆ. ನೂತನ ರೈಲಿಗೆ ಇನ್ನೂ ಮೂರು ಬೋಗಿಗಳ ಜೋಡನೆ ಆಗಬೇಕಿದೆ. ಎಲ್ಲವೂ ಸುಸೂತ್ರವಾಗಿ ನಡೆದರೆ ಮುಂದಿನ ಬೇಸಿಗೆ ರಜೆಗೆ ಮಕ್ಕಳಿಗೆ ಆಡಲು ಈ ಚುಕು ಬುಕು ಪುಟಾಣಿ ರೈಲು ಸಿಗಬಹುದು.