ಯೋಗಿ ಆದಿತ್ಯನಾಥ್ ಗೂ ಮಂಗಳೂರಿನ ಕದ್ರಿಗೂ ಏನಿದು ನಂಟು?
ಯೋಗಿ ಆದಿತ್ಯನಾಥ್ ಗೂ ಮಂಗಳೂರಿನ ಕದ್ರಿ ಜೋಗಿ ಮಠಕ್ಕೂ ಇರುವ ಅವಿನಾಭಾವ ನಂಟು ಹೆಚ್ಚಿನವರಿಗೆ ಗೊತ್ತಿಲ್ಲ. ಈ ಹಿಂದೆ ಹಲವು ಬಾರಿ ಯೋಗಿ ಆದಿತ್ಯನಾಥ್ ಮಂಗಳೂರಿಗೆ ಆಗಮಿಸಿದ್ದಿದೆ. ಇಲ್ಲಿನ ಮಹೋತ್ಸವಗಳಲ್ಲಿ ಭಾಗವಹಿಸಿದ್ದರು.
ಮಂಗಳೂರು, ಮಾರ್ಚ್ 20: ಅಚ್ಚರಿಯ ರೀತಿಯಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ ಆಯ್ಕೆಗೊಂಡಿರುವುದು ನಮಗೆಲ್ಲಾ ಗೊತ್ತೇ ಇದೆ.
ಆದರೆ ಯೋಗಿ ಆದಿತ್ಯನಾಥ್ ಗೂ ಮಂಗಳೂರಿನ ಕದ್ರಿ ಜೋಗಿ ಮಠಕ್ಕೂ ಇರುವ ಅವಿನಾಭಾವ ನಂಟು ಹೆಚ್ಚಿನವರಿಗೆ ಗೊತ್ತಿಲ್ಲ. ಈ ಹಿಂದೆ ಹಲವು ಬಾರಿ ಯೋಗಿ ಆದಿತ್ಯನಾಥ್ ಮಂಗಳೂರಿಗೆ ಆಗಮಿಸಿದ್ದಿದೆ. ಇಲ್ಲಿನ ಮಹೋತ್ಸವಗಳಲ್ಲಿ ಭಾಗವಹಿಸಿದ್ದರು. ಇಲ್ಲೇ ವಾಸ್ತವ್ಯ ಕೂಡಾ ಹೂಡಿದ್ದರು ಎಂದರೆ ಅಚ್ಚರಿಯಾಗಬಹುದು. ಆದರೆ ಇದೆಲ್ಲಾ ನಿಜವಾದ ಸಂಗತಿಗಳು[XXX ಸ್ಟಾರ್ ಜತೆ ಉತ್ತರಪ್ರದೇಶ ಸಿಎಂ 'ಯೋಗಿ' ಹೋಲಿಕೆ]
ಪಟ್ಟಾಭಿಷೇಕ ಮಹೋತ್ಸವದ ಅತಿಥಿ
2016ರ ಮಾರ್ಚ್ 6 ಮತ್ತು 7 ರಂದು ಕದ್ರಿ ಜೋಗಿ ಮಠದಲ್ಲಿ ಪರ್ಯಾಯ ರಾಜ ಪಟ್ಟಾಭಿಷೇಕ ಮಹೋತ್ಸವ ನಡೆದಿತ್ತು. ಈ ಮಹೋತ್ಸವದಲ್ಲಿ ಅತಿಥಿಯಾಗಿ ಭಾಗವಹಿಸಲು ಯೋಗಿ ಆದಿತ್ಯನಾಥ್ ಮಂಗಳೂರಿಗೆ ಆಗಮಿಸಿದ್ದರು. ಎರಡು ದಿನ ಮಠದಲ್ಲೇ ವಾಸ್ತವ್ಯ ಹೂಡಿ ಕಾರ್ಯಕ್ರಮದ ರೂಪುರೇಷೆ ವಹಿಸಿದ್ದರು.
ಯೋಗಿಯಿಂದಲೇ 'ರಾಜ' ಯೋಗಿ ಆಯ್ಕೆ
ಕದ್ರಿಯಲ್ಲಿರುವ ಯೋಗೇಶ್ವರ (ಜೋಗಿ) ಮಠವು ನಾಥ ಸಂಪ್ರದಾಯದ ಮಠ. ಇಲ್ಲಿರುವುದು ಏಕೈಕ 'ರಾಜ' ಯೋಗಿ ಮಾಥ್ರ. ಇವರನ್ನು ಆಯ್ಕೆ ಮಾಡುವುದು ಇದೇ ಯೋಗಿ ಆದಿತ್ಯನಾಥ್ . ಈಗಾಗಲೇ ಈ ಮಠದ ಇಬ್ಬರು ರಾಜಯೋಗಿಗಳನ್ನು ಆದಿತ್ಯನಾಥ ಆಯ್ಕೆ ಮಾಡಿದ್ದಾರೆ.[ಯೋಗಿ ಆದಿತ್ಯನಾಥ್ ಯಾರು? ಏನವರ ಹಿನ್ನೆಲೆ?]
ನಿರ್ಮಲಾನಾಥ್ ಜೀ ಹೇಳುವುದೇನು?
ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶ ಮುಖ್ಯಮಂತ್ರಿಯಾದ ಬಗ್ಗೆ ಯೋಗೇಶ್ವರ ಮಠದ ಶ್ರೀ ನಿರ್ಮಾಲಾನಾಥ್ ಜೀ ಅವರ ಅಭಿಪ್ರಾಯ ಕೇಳಿದಾಗ, 'ನಾಥ ಪಂಥದ ಅಧ್ಯಕ್ಷರಾದ ಆದಿತ್ಯನಾಥರು ಉತ್ತರ ಪ್ರದೇಶದ ಮುಖ್ಯಮಾತ್ರಿಯಾಗಿರುವುದು ಸಂತಸ ತಂದಿದೆ," ಎಂದು ಹೇಳಿದ್ದಾರೆ.
'ಜೋಗಿ' ಮಠದ ಇತಿಹಾಸ
ಮಂಗಳೂರಿನ ಕದ್ರಿ ಗುಡ್ಡದ ತುದಿಯಲ್ಲಿ ಕದಳಿ ಯೋಗೇಶ್ವರ (ಜೋಗಿ) ಮಠವಿದೆ. ಇದಕ್ಕೆ 1000 ವರ್ಷಗಳ ಇತಿಹಾಸವಿದೆ. ಇದು ದಕ್ಷಿಣ ಭಾರತದಲ್ಲಿರುವ ನಾಥ ಪಂಥದ ಪ್ರಮುಖ ಕೇಂದ್ರ. ಇಲ್ಲಿ ಪರಶುರಾಮರು ತಪಸ್ಸನ್ನಾಚರಿಸಿದ ಕುರುಹಾಗಿ ಸದಾ ಅಗ್ನಿ ಪ್ರಜ್ವಲಿಸುತ್ತಿರುವ ಪರಶುರಾಮ ಅಗ್ನಿಕುಂಡ ಇದೆ. ಮಠದ ಸುತ್ತ ಇರುವ ವನವನ್ನು 'ಕದಳಿವನ' ಎನ್ನುತ್ತಾರೆ.[ಉತ್ತರ ಪ್ರದೇಶ ಮುಖ್ಯಮಂತ್ರಿ ಪಟ್ಟ ಯೋಗಿ ಪಾಲಾಗಿದ್ದೇಗೆ?]
ಇಲ್ಲಿ ಈ ಹಿಂದೆ ರಾಜರಾಗಿ ಪಟ್ಟಾಭಿಷಿಕ್ತರಾದವರ ಸಮಾಧಿಗಳನ್ನು ಕಾಣಬಹುದು. ಈ ಪೈಕಿ ಸಿದ್ದಗುರು ಜ್ವಾಲಾನಾಥರ ಸಮಾಧಿ ಅತ್ಯಂತ ಪವಿತ್ರವಾದುದು. ಇಲ್ಲಿ ಮುಕ್ತಿ ಹೊಂದುವ ಪರಿಪಾಟವಿದ್ದು ಇದನ್ನು "ಮುಕ್ತಿವನ" ಎಂದೂ ಕರೆಯುತ್ತಾರೆ.
ನಾಥ ಪಂಥದ ಮೂಲ ಪ್ರವರ್ತಕ
ಮತ್ಸ್ಯೆಂದ್ರನಾಥರು ಮತ್ತು ಅವರ ಪ್ರಮುಖ ಶಿಷ್ಯ ಗೋರಕ್ಷನಾಥರು ನಾಥಪಂಥದ ಮೂಲ ಪ್ರವರ್ತಕರಾಗಿರು. ನಾಥಪಂಥವು ಗುರು ಶಿಷ್ಯ ಪರಂಪರೆಯಾಗಿದ್ದು ಯೋಗದ ಮುಖೇನ ಮುಕ್ತಿಹೊಂದುವುದನ್ನು ಬೋಧಿಸುತ್ತದೆ. ಈ ಪರಂಪರೆ ಭಾರತದೆಲ್ಲೆಡೆ ಅಲ್ಲದೆ ನೆರೆ ರಾಷ್ಟ್ರಗಳಾದ ನೇಪಾಳ, ಟಿಬೆಟ್, ಸಿಂಹಳ, ಬರ್ಮ, ಪಾಕಿಸ್ತಾನ, ಅಫಘಾನಿಸ್ಥಾನ, ಬಲುಚಿಸ್ಥಾನ, ಇರಾನ್ಗಳಲ್ಲೂ ಪಸರಿಸಿದೆ. 1938ರಲ್ಲಿ ಕೊಲ್ಕತ್ತದಲ್ಲಿ ಪ್ರಕಟವಾದ ಆಂಗ್ಲ ವಿದ್ವಾಂಸ ಜಿ.ಡಬ್ಲೂ. ಬ್ರಿಗ್ಸ್ ಬರೆದ "ಗೋರಕ್ಷನಾಥ ಆ್ಯಂಡ್ ಕಾನ್ಫಟಾ ಯೋಗಿಸ್" ಪುಸ್ತಕದಲ್ಲಿ ನಾಥಪಂಥದ ಬಗ್ಗೆ ಅಪಾರ ಮಾಹಿತಿ ಲಭ್ಯವಿದೆ.
ಕುಂಭ ಮೇಳದಿಂದ ಮಂಗಳೂರಿನವರೆಗೆ
ಕುಂಭಮೇಳದಲ್ಲಿ ಆಯ್ಕೆಯಾದ ರಾಜರು ತ್ರೈಂಬಕೇಶ್ವರದಿಂದ ಹೊರಟು ಕಾಲ್ನಡಿಗೆಯಲ್ಲಿ ಮಂಗಳೂರು ವರೆಗಿನ ಸುಮಾರು 1100ಕಿ.ಮೀ ದೂರವನ್ನು 500ಕ್ಕೂ ಮಿಕ್ಕಿ ಸಾಧುಗಳೊಡಗೂಡಿ ಆರು ತಿಂಗಳಲ್ಲಿ ಕ್ರಮಿಸುತ್ತಾರೆ. ಈ ಪಾದಯಾತ್ರೆಯನ್ನು "ನವನಾಥ ಝುಂಡಿ" ಯಾತ್ರೆ ಎನ್ನುತ್ತಾರೆ. ರಾಜರು ತಮ್ಮೊಂದಿಗೆ "ಪಾತ್ರ ದೇವತೆ"ಯನ್ನು ಹೊತ್ತು ತರುತ್ತಾರೆ. ಯಾತ್ರೆಯ ಸಂದರ್ಭದಲ್ಲಿ ಹಾಗೂ ಮುಂದಿನ 12 ವರ್ಷಗಳ ಕಾಲ ಯಾರು ಪೀಠಾಧಿಪತಿಗಳಾಗಿರುವರೋ ಅವರ ಅವಧಿಯಲ್ಲಿ ಪಾತ್ರದೇವತೆಗೆ ನಿತ್ಯ ಪೂಜೆ ನಡೆಯುತ್ತದೆ.
ಕಿಂಡಿ ಯಾತ್ರೆಯು ನಾಗರ ಪಂಚಮಿಯಂದು ತ್ರ್ಯೆಂಬಕೇಶ್ವರದಿಂದ ಹೊರಟು ಶಿವರಾತ್ರಿಗೆ ಸುಮಾರು 10 ದಿನ ಮೊದಲು ಮಂಗಳೂರನ್ನು ತಲುಪುತ್ತದೆ. ಈ ಅವಧಿಯಲ್ಲಿ ಝುಂಡಿಯು ದಾರಿಯಲ್ಲಿ ನಾಥಪಂಥದ 17 ಮಠಗಳು ಸೇರಿದಂತೆ 92 ಕಡೆ ತಂಗುತ್ತದೆ.
ಕದ್ರಿ ದೇವಸ್ಥಾನದ ಜಾತ್ರೆಗಳಲ್ಲಿ ವಿಶಿಷ್ಟ ಪಾತ್ರ
ಕದಳಿ ಯೋಗೇಶ್ವರ (ಜೋಗಿ) ಮಠದ ಪೀಠಾಧಿಪತಿಗಳಿಗೆ ಕದ್ರಿ ದೇವಸ್ಥಾನದ ಜಾತ್ರೆಗಳಲ್ಲಿ ವಿಶಿಷ್ಟ ಪಾತ್ರವಿದೆ. ಕದ್ರಿ ರಥೋತ್ಸವದ ದಿನ ಪೀಠಾಧಿಪತಿಗಳು ಬ್ರಹ್ಮರಥದ ಎದುರಿನಲ್ಲಿ ಕುದುರೆಯನ್ನೇರಿ ರಥದ ಮುಂದೆ ಚಲಿಸುವ ಪದ್ಧತಿ ಮತ್ಸ್ಯೆಂದ್ರನಾಥ, ಗೋರಕ್ಷನಾಥರ ಸಮಯದಿಂದ ನಡೆದು ಬಂದಿರುತ್ತದೆ. ಹಾಗೆನೇ ಕದ್ರಿ ಮಂಜುನಾಥ ದೇವಸ್ಥಾನದ ಜಾತ್ರೆ ಪ್ರಾರಂಭದ ಮುನ್ನಾದಿನ ಕದಳಿ ಪೀಠಾಧಿಪತಿಗಳು ಮಂಗಳಾದೇವಿ ದೇವಸ್ಥಾನಕ್ಕೆ ತೆರಳಿ ಫಲ, ಪುಷ್ಪ, ಸೀರೆ, ಅರ್ಪಿಸಿ ಕದ್ರಿ ದೇವಸ್ಥಾನದ ಜಾತ್ರೆ ನಿರ್ವಿಘ್ನವಾಗಿ ಜರಗಲಿ ಎಂದು ಪ್ರಾರ್ಥಿಸುವ ಪದ್ಧತಿ ಇಂದಿಗೂ ನಡೆದು ಬಂದಿದೆ.
ಕುದ್ರೋಳಿ, ವೆಂಕಟರಮಣ ದೇವಸ್ಥಾನದಲ್ಲಿ ಆತಿಥ್ಯ
ನವನಾಥ ಝುಂಡಿಯು ಮಂಗಳೂರು ನಗರದಲ್ಲಿ ಸಾಗುವ ದಾರಿ ಮಧ್ಯೆ ಕುದ್ರೋಳಿಯ ಗೋಕರ್ಣನಾಥ ಕ್ಷೇತ್ರ ಹಾಗೂ ರಥಬೀದಿಯ ವೆಂಕಟರಮಣ ದೇವಸ್ಥಾನದಲ್ಲಿ ಆಥಿತ್ಯ ಸ್ವೀಕರಿಸಿ ಸ್ವಲ್ಪಹೊತ್ತು ವಿಶ್ರಮಿಸುತ್ತದೆ. ಇದು ನಾಥಪಂಥಕ್ಕೂ ಈ ಎರಡು ಕ್ಷೇತ್ರಗಳಿಗೂ ಇರುವ ಸಂಬಂಧವನ್ನು ತೋರಿಸುತ್ತದೆ. ವೆಂಕಟರಮಣ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲ್ಪಟ್ಟಿರುವ ಶ್ರೀ ವೀರವೆಂಕಟೇಶ ದೇವರ ಮೂರ್ತಿ 1804 ನೇ ಇಸವಿಯಲ್ಲಿ ನಾಥ ಸನ್ಯಾಸಿಯೊಬ್ಬರು ನೀಡಿರುವುದಕ್ಕೆ ಪುರಾವೆ ಲಭ್ಯವಿದೆ.
ಕದಳ ಮಠದ ಪೀಠಾಧಿಪತಿಗಳು
ಕದಳಿ ಮಠಕ್ಕೆ ನೂತನ ಪೀಠಾಧಿಪತಿಗಳನ್ನು ಪ್ರತಿ 12 ವರ್ಷಗಳಿಗೊಮ್ಮೆ ನೇಮಿಸಲಾಗುತ್ತದೆ. ವಿಜಯನಗರ ಸಾಮ್ರಾಜ್ಯದ ವಿವಿಧ ಅರಸರು ಶ್ರೀ ಕ್ಷೇತ್ರದ ಪೀಠಾಧಿಪತಿಗಳಿಗೆ ಸುಮಾರು 150 ಎಕರೆಗಳಷ್ಟು ಜಮೀನು ದಾನ ನೀಡಿ ಈ ಪ್ರದೇಶದ ಆಳುವಿಕೆಯನ್ನು ನಡೆಸುವಂತೆ ಕೋರಿದ ಹಿನ್ನಲೆಯಲ್ಲಿ ಪೀಠಾಧಿಪತಿಗಳನ್ನು "ರಾಜ" ಎಂದು ಸಂಬೋಧಿಸಲಾಗುತ್ತದೆ.
ರಾಜರ ಆಯ್ಕೆ
ರಾಜರ ಆಯ್ಕೆ ವಾಡಿಕೆಯಂತೆ ತ್ರೈಂಬಕೇಶ್ವರ (ನಾಸಿಕ) ದಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ಶ್ರಾವಣ ಮಾಸದಲ್ಲಿ ಜರಗುವ ಕುಂಭ ಮೇಳದಲ್ಲಿ ನಡೆಯುತ್ತದೆ. ನಾಥಪಂಥದ 12 ಕವಲುಗಳಿಗೆ (ನಟೇಶ್ವರಿ, ಗಂಗಾನಾಥ್, ಕಪಲಾನಿ, ಬೈರಾಗ್, ಸತ್ಯನಾಥ್, ಆಯಿ, ಧರ್ಮನಾಥ್, ಕನ್ಹಡಿ, ಮಾನ್ನಾಥ್, ಪಾಗಲ್ ಮತ್ತು ಧ್ವಜಾ) ಸೇರಿದ ಸಾಧುಗಳು ಅಖಿಲ ಭಾರತ ವರ್ಷೀಯ ಅವಧೂತ ಯೋಗಿ ಮಹಾಸಭಾ ಬೇಖ್ ಬಾರಹಪಂಥ್ದ ಪದಾಧಿಕಾರಿಗಳ ಸಮ್ಮುಖದಲ್ಲಿ ನೂತನ ರಾಜರ ಆಯ್ಕೆಯನ್ನು ನಡೆಸುತ್ತಾರೆ. ಗಂಗಾನಾಥ್, ನಟೇಶ್ವರಿ, ಬೈರಾಗ್ ಮತ್ತು ಕಪಲಾನಿ ಕವಲುಗಳಿಗೆ ಸೇರಿದ ಸಾಧುಗಳು ಮಾತ್ರ ಕದಳಿ ಮಠಕ್ಕೆ ರಾಜರಾಗಿ ಆಯ್ಕೆಗೊಳ್ಳಲು ಅರ್ಹರಾಗಿರುತ್ತಾರೆ. ಹೀಗೆ ಪ್ರತೀ ಕವಲಿಗೆ 48 ವರ್ಷಗಳಿಗೊಮ್ಮೆ ರಾಜರಾಗಿ ಆಯ್ಕೆಗೊಳ್ಳುವ ಅವಕಾಶ ಇರುತ್ತದೆ.
ಜೋಗಿ ಮಠದ ಮುಂದಿನ ರಾಜರು ಬೈರಾಗಿ ಕವಲಿಗೆ ಸೇರಿದವರಾಗಿರುತ್ತಾರೆ.