ಕಾವ್ಯ ಪ್ರಕರಣ ಪಾರದರ್ಶಕ ತನಿಖೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ
ಮಂಗಳೂರು, ಆಗಸ್ಟ್ 9: ಆಳ್ವಾಸ್ ವಿದ್ಯಾರ್ಥಿನಿ ಕಾವ್ಯ ಪೂಜಾರಿ ಸಾವಿನ ಪ್ರಕರಣದ ಬಗ್ಗೆ ಸಮಗ್ರ ತನಿಖೆಗೆ ಒತ್ತಾಯಿಸಿ 'ಜಸ್ಟಿಸ್ ಫಾರ್ ಕಾವ್ಯ' ಹೋರಾಟ ಸಮಿತಿ ವತಿಯಿಂದ ಮಂಗಳೂರಿನಲ್ಲಿ ಇಂದು ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಹಲವಾರು ವಿದ್ಯಾರ್ಥಿ ಸಂಘಟನೆ ಕಾವ್ಯ ಪ್ರಕರಣದಲ್ಲಿ ಪೊಲೀಸ್ ಇಲಾಖೆ ತೋರುತ್ತಿರುವ ವಿಳಂಬ ನೀತಿಯನ್ನು ಖಂಡಿಸಿದವು.
ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಂಗಳೂರು ಮೇಯರ್ ಕವಿತಾ ಸನಿಲ್, "ಕಾವ್ಯಳದ್ದು ಆತ್ಮಹತ್ಯೆಯೋ? ಅಥವಾ ಕೊಲೆಯೋ? ಅನ್ನೋದು ತನಿಖೆಯಾಗಬೇಕು .
ಪಾರದರ್ಶಕ ತನಿಖೆಯಿಂದ ಕಾವ್ಯ ಸಾವಿನ ಸತ್ಯ ಹೊರಬರಲಿದೆ," ಎಂದು ಅವರು ಹೇಳಿದರು.
ಸಂಶಯಕ್ಕೆ ಉತ್ತರ ಸಿಗಬೇಕು
"ಕಾವ್ಯ ಸಾವಿನ ಕುರಿತು ಹೆತ್ತವರಿಗೆ ಇರುವ ಸಂಶಯಕ್ಕೆ ಉತ್ತರ ಸಿಗಬೇಕಾಗಿದೆ," ಎಂದು ಹೇಳಿದ ಕವಿತಾ ಸನಿಲ್, ಕಾವ್ಯಳಿಗೆ ನ್ಯಾಯ ಒದಗಿಸಲು ಸಂಪೂರ್ಣ ಬೆಂಬಲ ನೀಡುವುದಾಗಿ ಅವರು ಹೇಳಿದರು.
ಪ್ರಕರಣವನ್ನು ವಿಶೇಷ ತನಿಖಾ ತಂಡಕ್ಕೆ ನೀಡಿ
ಈ ಸಂದರ್ಭದಲ್ಲಿ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸರ್ವಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷ ದಿನಕರ ಶೆಟ್ಟಿ, "ಕಾವ್ಯ ಸಾವಿನ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡಕ್ಕೆ ವಹಿಸಿ," ಎಂದು ಆಗ್ರಹಿಸಿದರು .
25 ಲಕ್ಷ ಪರಿಹಾರಕ್ಕೆ ಒತ್ತಾಯ
ಕಾವ್ಯ ಕುಟುಂಬಕ್ಕೆ ಈ ಕೂಡಲೇ 25 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ ದಿನಕರ್ ಶೆಟ್ಟಿ, ಡಾ. ಮೋಹನ್ ಆಳ್ವಾ ಅವರ ಪರ ಕೆಲವರು ಹೋರಾಟ ಆರಂಭಿಸಿದ್ದಾರೆ. ಈ ಹೋರಾಟ ನಿಲ್ಲಿಸದಿದ್ದರೆ ಮಂಗಳೂರು ಬಂದ್ ಗೆ ಕರೆ ನೀಡುವುದಾಗಿ ಅವರು ಎಚ್ಚರಿಸಿದರು.
ಹೋರಾಟ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿರುದ್ಧ ಅಲ್ಲ
ಪ್ರತಿಭಟನಾ ಸಭೆಯಲ್ಲಿ ಎಸ್ಎಫ್ಐ ಸಂಘಟನೆಯ ಜಿಲ್ಲಾಧ್ಯಕ್ಷ ನಿತಿನ್ ಕುತ್ತಾರ್ ಮಾತನಾಡಿ, "ನಮ್ಮ ಹೋರಾಟ ಆಳ್ವಾ ಶಿಕ್ಷಣ ಸಂಸ್ಥೆಯ ವಿರುದ್ಧ ಅಲ್ಲ. ಕಾವ್ಯಳಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಮಾತ್ರ ನಡೆಯುತ್ತಿರುವ ಪ್ರತಿಭಟನೆ ಇದು," ಎಂದು ಹೇಳಿದರ ಅವರು, ಆತ್ಮಹತ್ಯೆ ಮಾಡಿಕೊಳ್ಳುವವರು ಸ್ಪೋರ್ಟ್ಸ್ ಗೆ ಅನ್ ಫಿಟ್ ಎಂಬ ಹೇಳಿಕೆಯನ್ನು ಮೋಹನ್ ಆಳ್ವ ಈ ಕೂಡಲೇ ಹಿಂದಕ್ಕೆ ಪಡೆಯಬೇಕೆಂದು ಎಂದು ಒತ್ತಾಯಿಸಿದರು .
ಕಾವ್ಯ ಹೆತ್ತವರೂ ಭಾಗಿ
ಕಾವ್ಯ ಸಾವಿನ ಪಾರದರ್ಶಕ ತನಿಖೆಗೆ ಒತ್ತಾಯಿಸಿ ನಡೆದ ಪ್ರತಿಭಟನೆಯಲ್ಲಿ ಒಂದೆಡೆ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿದರೆ ಇನ್ನೊಂದೆಡೆ ಕಾವ್ಯ ಹೆತ್ತವರು ಕೂಡ ಪಾಲ್ಗೊಂಡಿದ್ದರು .