ಕಾವ್ಯ ಸಾವಿನ ನ್ಯಾಯಕ್ಕಾಗಿ ಅರೆಬೆತ್ತಲೆ ಮೆರವಣಿಗೆ, ಹೋರಾಟಗಾರರ ಎಚ್ಚರಿಕೆ
Recommended Video
ಮಂಗಳೂರು, ಸೆಪ್ಟೆಂಬರ್ 13: ಆಳ್ವಾಸ್ ವಿದ್ಯಾರ್ಥಿನಿ ಕಾವ್ಯ ಪೂಜಾರಿ ನಿಗೂಢ ಸಾವಿನ ಕುರಿತು ಪೊಲೀಸರು ನಡೆಸಿದ ತನಿಖೆಯ ಪೂರ್ಣವರದಿಯ ಸತ್ಯಾಂಶವನ್ನು ಸಪ್ಟೆಂಬರ್ 20 ರ ಒಳಗೆ ಬಹಿರಂಗಗೊಳಿಸದಿದ್ದರೆ ಸಪ್ಟೆಂಬರ್ 23 ರಂದು ಮಂಗಳೂರಿನಲ್ಲಿ ಅರೆಬೆತ್ತಲೆ ಮೆರವಣೆಗೆ ನಡೆಸುವುದಾಗಿ 'ಜಸ್ಟಿಸ್ ಫಾರ್ ಕಾವ್ಯ' ಹೋರಾಟ ಸಮಿತಿ ಎಚ್ಚರಿಸಿದೆ.
ಮಂಗಳೂರಿನಲ್ಲಿ ಮಂಗಳವಾರ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಹೋರಾಟ ಸಮಿತಿಯ ದಿನಕರ್ ಶಟ್ಟಿ, ಆಳ್ವಾಸ್ ವಿದ್ಯಾರ್ಥಿನಿ ಕಾವ್ಯ ಪೂಜಾರಿ ಅವರ ಸಾವು ಸಂಭವಿಸಿ ಇಂದಿಗೆ 53ದಿನಗಳು ಕಳೆದಿದೆ. ಆದರೆ ಈವರೆಗೆ ಕಾವ್ಯ ಸಾವಿನ ಸತ್ಯಾಂಶ ಸ್ಪಷ್ಟಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಸಿಪಿ ರಾಜೇಂದ್ರ ಕುಮಾರ್ ಅವರ ನೇತೃತ್ವದಲ್ಲಿ ಆರಂಭವಾಗಿದ್ದ ತನಿಖೆ ಪೂರ್ಣಗೊಂಡಿದೆ. ಆದರೆ ಪೊಲೀಸ್ ಇಲಾಖೆ ತನಿಖೆಯ ವರದಿಯನ್ನು ಬಹಿರಂಗಗೊಳಿಸಿಲ್ಲ ಎಂದು ಅವರು ಕಿಡಿಕಾರಿದರು.
ಕಾವ್ಯ ಸಾವಿನ ನ್ಯಾಯಕ್ಕಾಗಿ ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದಾದ್ಯಂತ ಹೋರಾಟಗಳು ನಡೆದಿವೆ. ಆದರೆ ಬಡ ವಿದ್ಯಾರ್ಥಿನಿಯೊಬ್ಬಳ ಸಾವಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ನಿರ್ಲಕ್ಷ್ಯತೋರಿದೆ ಎಂದು ಅವರು ದೂರಿದರು.
ಕಾವ್ಯ ಸಾವಿನ ನ್ಯಾಯಕ್ಕಾಗಿ ಸೆಪ್ಟೆಂಬರ್ 16 ರಂದು ಹೋರಾಟ ಸಮಿತಿ ಜಿಲ್ಲಾ ಬಂದ್ ಗೆ ಕರೆ ನೀಡಲು ನಿರ್ಧರಿಸಿತ್ತು. ಆದರೆ ಜಿಲ್ಲೆಯ ಪ್ರಸ್ತುತ ಪರಿಸ್ಥಿತಿಯಲ್ಲಿ ಅಶಾಂತಿಯ ವಾತಾವರಣವಿದ್ದು ಬಂದ್ ಕರೆ ನೀಡುವುದು ಬೇಡ ಎಂದು ಪೊಲೀಸ್ ಇಲಾಖೆ ವಿನಂತಿಸಿತ್ತು. ಈ ಹಿನ್ನೆಲೆಯಲ್ಲಿ ಬಂದ್ ಕರೆ ನೀಡುವ ನಿರ್ಧಾರ ಹಿಂಪಡೆಯಾಗಿತ್ತು ಎಂದು ಅವರು ತಿಳಿಸಿದರು.
ಆದರೆ, ಪೊಲೀಸ್ ಇಲಾಖೆ ಕಾವ್ಯ ಸಾವಿನ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸುತ್ತಿದೆ ಎಂಬ ಸಂಶಯ ಮೂಡುತ್ತಿದೆ. ಸೆಪ್ಟೆಂಬರ್ 20ರ ಒಳಗಾಗಿ ಪೊಲೀಸ್ ಇಲಾಖೆ ತನಿಖೆಯ ಪೂರ್ಣ ವರದಿಯನ್ನು ಬಹಿರಂಗಗೊಳಿಸದಿದ್ದರೆ ಸೆಪ್ಟೆಂಬರ್ 23 ರಂದು ಮಂಗಳೂರಿನಲ್ಲಿ ಕಾವ್ಯ ಸಾವಿನ ನ್ಯಾಯಕ್ಕಾಗಿ ಅರೆಬೆತ್ತಲೆ ಮೆರವಣಿಗೆ ನಡೆಸಲಾಗುವುದೆಂದು ಅವರು ಎಚ್ಚರಿಸಿದರು.