ಮಂಗಳೂರು : ಪೊಲೀಸರಿಂದ ಜ್ಯುವೆಲ್ಲರಿ ಶಾಪ್ ದರೋಡೆ!
ಮಂಗಳೂರು, ಆ.5 : ಬೆಂಗಳೂರಿನ ಯಲಹಂಕ ಪೊಲೀಸರು ಜ್ಯುವೆಲ್ಲರಿ ಶಾಪ್ ನಿಂದ ಹಣ ಮತ್ತು ಚಿನ್ನಾಭರಣ ಲೂಟಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಈ ಕುರಿತು ದೂರು ನೀಡಲಾಗಿದೆ.
ಮಂಗಳೂರು ನಗರದಲ್ಲಿ ಜ್ಯುವೆಲ್ಲರಿ ಶಾಪ್ ಹೊಂದಿರುವ ಎ.ಸತೀಶ್ ಐಜಿಪಿ ಮತ್ತು ಪೊಲೀಸ್ ಆಯುಕ್ತರಿಗೆ ಈ ಕುರಿತು ದೂರು ನೀಡಿದ್ದಾರೆ. ಚಿನ್ನದ ಗುಣಮಟ್ಟ ಪರಿಶೀಲನೆಗೆ ಆಗಮಿಸಿದ ಪೊಲೀಸರು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಲೂಟಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಘಟನೆ ವಿವರ : ಜುಲೈ 19ರಂದು ಸಂಜೆ ಐದು ಗಂಟೆ ಸುಮಾರಿಗೆ ಈ ಘಟನೆ ನಡೆಸಿದೆ. ಇನ್ನೋವಾ ಕಾರಿನಲ್ಲಿ ಬಂದ ಆರು ಜನರು ಎಂ.ಟಿ.ಸಿ.ಗೋಲ್ಡ್ ಟೆಸ್ಟಿಂಗ್ ಅಂಗಡಿಯ ಸಿಬ್ಬಂದಿ ಸದಾಶಿವ ಆಚಾರ್ ಅವರಿಗೆ ಮೊದಲು ಕರೆ ಮಾಡಿದ್ದಾರೆ.
ತಾವು ಕರೆತಂದ ವ್ಯಕ್ತಿಯೊಬ್ಬನಿಂದ ಕರೆ ಮಾಡಿಸಿ ತನ್ನ ಚಿನ್ನದ ಆಭರಣಗಳು ಮಂಗಳೂರಿನ ಕರಾವಳಿ ಬ್ಯಾಂಕಿನಲ್ಲಿ ಗಿರವಿ ಇಟ್ಟಿದ್ದು, ಅದನ್ನು ಮಾರಾಟ ಮಾಡಬೇಕಾಗಿರುವುದರಿಂದ ತಾವು ಬಂದು ಅದರ ಗುಣಮಟ್ಟ ಪರಿಶೀಲಿಸಿ ಕೊಡಬೇಕೆಂದು ಮನವಿ ಮಾಡಿದ್ದಾರೆ.
ಸದಾಶಿವ ಆಚಾರ್ ಕರಾವಳಿ ಬ್ಯಾಂಕಿನ ಬಳಿ ಹೋದಾಗ, ಅವರನ್ನು ಆರು ಮಂದಿ ಬಲವಂತವಾಗಿ ಕಾರಿನಲ್ಲಿ ಕರೆದುಕೊಂಡು ಬೆಂಗಳೂರಿನತ್ತ ತೆರಳಿದ್ದಾರೆ.
ಅಂಗಡಿ ಮಾಲೀಕರಿಗೆ ಕರೆಮಾಡಲು ಪ್ರಯತ್ನ ನಡೆಸಿದಾಗ ಮೊಬೈಲ್, 55,250ರೂ. ಹಣ ಕಿತ್ತುಕೊಂಡಿದ್ದಾರೆ. ಬಳಿಕ ಅಂಗಡಿಗೆ ಬಂದ ಅವರು, ನಾವು ಬೆಂಗಳೂರಿನ ಪೊಲೀಸರು ಎಂದು ಪರಿಚಯಿಸಿಕೊಂಡಿದ್ದಾರೆ.
ಅಂಗಡಿಯಲ್ಲಿದ್ದ ದೂರುದಾರ ಸತೀಶ್ ಅವರ ಸಹೋದರ ಮೋಹನ್ ಜೊತೆ ಮಾತುಕತೆ ನಡೆಸಿರುವ ಪೊಲೀಸರು ಸತೀಶ್ ಕಳ್ಳತನದ ಮಾಲುಗಳನ್ನು ಮಧ್ಯವರ್ತಿ ಚಂದ್ರಶೇಖರ್ ಅವರಿಂದ ಕೊಂಡಿದ್ದಾರೆ ಎಂದು ಹೇಳಿದ್ದಾರೆ.
ನಿಮ್ಮ ಸಿಬ್ಬಂದಿಯನ್ನು ಬೆಂಗಳೂರಿಗೆ ಕರೆದುಕೊಂಡು ಹೋಗುತ್ತೇವೆ ಅಲ್ಲಿಗೆ ಬನ್ನಿ ಎಂದು ಮೋಹನ್ ಅವರಿಗೆ ತಿಳಿಸಿದ್ದಾರೆ. ಇದಕ್ಕೆ ನಿರಾಕರಿಸಿದಾಗ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ೧೮೦ ಗ್ರಾಂ ಚಿನ್ನದ ಗಟ್ಟಿಯನ್ನು ಬಲವಂತವಾಗಿ ತೆಗೆದುಕೊಂಡು ಹೋಗಿದ್ದಾರೆ.
ಪೊಲೀಸ್ ಆಯುಕ್ತರಿಗೆ ನೀಡಿರುವ ದೂರಿನಲ್ಲಿ ಸತೀಶ್ ಪೊಲೀಸರು ಸಿಬ್ಬಂದಿ ಬಳಿ ಖಾಲಿ ಕಾಗದಕ್ಕೆ ಸಹಿ ಹಾಕಿಸಿಕೊಂಡು ಹೋಗಿದ್ದಾರೆ. 180 ಗ್ರಾಂ ಚಿನ್ನ ಹಾಗೂ 55,250 ರೂ.ಗಳನ್ನು ತೆಗೆದುಕೊಂಡ ಹೋದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.