ಕಾಂಗ್ರೆಸ್ ಸೋಲಲು ಹಿಂದುಗಳ ಕಡೆಗಣನೆಯೇ ಕಾರಣ: ಜೆಡಿಎಸ್ನ ಭೋಜೇಗೌಡ
ಮಂಗಳೂರು, ಆಗಸ್ಟ್ 04: ರಾಜ್ಯದ ಮೈತ್ರಿ ಸರಕಾರದಲ್ಲಿ ಒಗ್ಗೂಡಿರುವ ಕಾಂಗ್ರೆಸ್ ಮತ್ತು ಜೆ.ಡಿ.ಎಸ್ ತಮ್ಮ ಅಸ್ಥಿತ್ವ ಉಳಿಸಿಕೊಳ್ಳಲು ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೈತ್ರಿಯಿಂದ ದೂರ ಉಳಿಯಲು ನಿರ್ಧರಿಸಿವೆ .ಈ ನಡುವೆ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರ ವಾಗ್ದಾಳಿಗಳು ಆರಂಭವಾಗಿದೆ. ದೋಸ್ತಿಗಳ ನಡುವಿನ ವಾಕ್ಸಮರ ರಾಜ್ಯ ರಾಜಕೀಯದಲ್ಲಿ ಕುತೂಹಲ ಆರಂಭಿಸಿದೆ.
ಹಿಂದೂಗಳನ್ನು ಕಡೆಗಣಿಸಿದ್ದೇ ಕಾಂಗ್ರೆಸ್ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಸೋಲಲು ಪ್ರಮುಖ ಕಾರಣ ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ನೆಲಕಚ್ಚಲು ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದದ್ದೇ ಕಾರಣ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಈ ಹಿಂದೆ 8 ವಿಧಾನ ಸಭಾ ಕ್ಷೇತ್ರಗಳ ಪೈಕಿ 7 ರಲ್ಲಿ ಗೆದ್ದಿದ್ದ ಕಾಂಗ್ರೆಸ್ ಕಳೆದ ಚುನಾವಣೆಯಲ್ಲಿ 7 ಕ್ಷೇತ್ರವನ್ನು ಕಳೆದು ಕೊಂಡು ಕೇವಲ 1 ಸ್ಥಾನ ಪಡೆಯಿತು ಎಂದು ಜೆಡಿಎಸ್ ಮುಖಂಡ ಬೋಜೆಗೌಡ ಅಭಿಪ್ರಾಯ ಪಟ್ಟಿದ್ದಾರೆ.
2019 ರ ಚುನಾವಣೆಯಲ್ಲಿ ಮಹಾಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರು?
ಮಂಗಳೂರಿನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂಗಳನ್ನು ಕಡೆಗಣಿಸಿದ್ದೇ ಹಾಗಾಗಿ ಕಾಂಗ್ರೆಸ್ ಇಲ್ಲಿ ಸೋತಿದೆ ಎಂದು ಹೇಳುವ ಮೂಲಕ ದೋಸ್ತಿ ಪಕ್ಷದ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಸಂಘಟನೆಗೆ ಆದ್ಯತೆ ನೀಡಲಾಗಿದ್ದು ಹಿಂದೂಗಳನ್ನು ಕಡೆಗಣಿಸದಂತೆ ಜೆಡಿಎಸ್ ಮುಖಂಡರಿಗೆ ಹೇಳಿದ್ದೇನೆ ಎಂದು ಅವರು ತಿಳಿಸಿದರು. ಹಿಂದೂಗಳನ್ನು ಕಡೆಗಣಿಸಿದರೆ ಸರ್ಕಾರ ಉಳಿಯಲ್ಲ. ಅಲ್ಪಸಂಖ್ಯಾತರ ವಿಶ್ವಾಸ ಗಳಿಸಿ ಹಿಂದೂಗಳನ್ನು ಕಡೆಗಣಿಸದೆ ಪಕ್ಷ ಸಂಘಟನೆ ಮಾಡುವುದಾಗಿ ಅವರು ತಿಳಿಸಿದರು.