ಬಜೆಟ್ ಮಂಡನೆಗೂ ಮುನ್ನ ಮಂಗಳೂರಿನ ಕದ್ರಿ ದೇವಾಲಯದಲ್ಲಿ ವಿಶೇಷ ಪೂಜೆ
ಮಂಗಳೂರು, ಜುಲೈ 04: ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರಕಾರದ ಬಜೆಟ್ ನಾಳೆ ಮಂಡನೆ ಯಾಗಲಿದೆ. ರಾಜ್ಯದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನಾಳೆ ಮೈತ್ರಿ ಸರಕಾರದ ನೂತನ ಬಜೆಟ್
ಮಂಡನೆ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಗಳೂರಿನ ದೇವಾಲಯದಲ್ಲಿ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಿದರು.
ಎಚ್ಡಿಕೆ ಬಜೆಟ್ : ರೈತಸ್ನೇಹಿ, ಅಭಿವೃದ್ಧಿ ಪೂರಕ ಆಯವ್ಯಯ ನಿರೀಕ್ಷೆ
ನಾಳೆ ನಡೆಯಲಿರುವ ರಾಜ್ಯದ ಐತಿಹಾಸಿಕ ಬಜೆಟ್ ಮಂಡನೆಗೆ ಯಾವುದೇ ಆತಂಕ, ಅಡೆತಡೆ, ಸಮಸ್ಯೆ ಕಾಡದಿರಲಿ ಎಂದು ಪ್ರಾರ್ಥಿಸಿ ಜೆಡಿಎಸ್ ಕಾರ್ಯಕರ್ತರು ದೇವರ ಮೊರೆ ಹೋಗಿದ್ದಾರೆ. ಮಂಗಳೂರು ನಗರದ ಇತಿಹಾಸ ಪ್ರಸಿದ್ಧ ಕದ್ರಿ ಮಂಜುನಾಥ್ ಸ್ವಾಮಿ ದೇವಾಲಯದಲ್ಲಿ ಸೇರಿದ ಜೆಡಿಎಸ್ ಕಾರ್ಯಕರ್ತರು ಹಾಗು ಮುಖಂಡರು ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ರಾಜ್ಯದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಯಶಸ್ವಿಯಾಗಿ ಬಜೆಟ್ ಮಂಡಿಸಲಿ ಎಂದು ಪ್ರಾರ್ಥಿಸಿದ ಜೆಡಿಎಸ್ ಕಾರ್ಯಕರ್ತರು ಕದ್ರಿ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದ ಸನ್ನಿಧಿಯಲ್ಲಿ ಏಕರುದ್ರಾಭಿಷೇಕ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ವಸಂತ ಪೂಜಾರಿ, ಮಾಜಿ ಸಚಿವ ಅಮರನಾಥ್ ಶೆಟ್ಟಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ, ರಾಜ್ಯದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಬಡವರ, ರೈತರ ಪರ ಕಾಳಜಿಯುಳ್ಳ ವ್ಯಕ್ತಿ ಅವರು ಈ ನಿಟ್ಟಿನಲ್ಲಿ ಯಶಸ್ವಿಯಾಗಿ ಬಜೆಟ್ ಮಂಡನೆ ಮಾಡಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇವೆ ಎಂದು ಹೇಳಿದರು.