25 ವರ್ಷದ ಬಳಿಕ ಮತ್ತೆ ಭತ್ತದ ಗದ್ದೆಯತ್ತ ಮುಖ ಮಾಡಿದ ಕುಟುಂಬ
ಮಂಗಳೂರು, ಜುಲೈ 14 : ಇತ್ತೀಚಿನ ದಿನಗಳಲ್ಲಿ ಭತ್ತದ ಕೃಷಿ ಕಡಿಮೆಯಾಗುತ್ತಿದೆ. ಬೆಲೆ ಕುಸಿತ, ಕಾರ್ಮಿಕರ ಸಮಸ್ಯೆ ಸೇರಿದಂತೆ ಇನ್ನಿತರ ಕಾರಣಗಳಿಂದಾಗಿ ಕೃಷಿಕರು ಭತ್ತದ ಬೆಳೆಯಿಂದ ವಿಮುಖರಾಗುತ್ತಿದ್ದಾರೆ. ಅದರಲ್ಲೂ ಕರಾವಳಿ ಭಾಗದಲ್ಲಿ ಭತ್ತದ ಕೃಷಿಗಾಗಿ ಬಳಸುತ್ತಿದ್ದ ಗದ್ದಗೆಳಲ್ಲಿ ವಾಣಿಜ್ಯ ಬೆಳೆಗಳು ಕಣ್ಣಿಗೆ ಕಾಣುತ್ತಿವೆ.
ದಕ್ಷಿಣ ಕನ್ನಡದಲ್ಲಿ ಇಂದು ಭತ್ತದ ಕೃಷಿಯಲ್ಲಿ ತೊಡಗಿಕೊಳ್ಳುತ್ತಿರುವವರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುತ್ತಿದೆ. ಒಂದು ಕಾಲದಲ್ಲಿ ಭತ್ತದ ಗದ್ದೆಗಳಿದ್ದ ಪ್ರದೇಶಗಳಲ್ಲಿ ಇಂದು ವಾಣಿಜ್ಯ ಬೆಳೆಗಳು ಹಾಗೂ ಕಟ್ಟಡಗಳು ತಲೆ ಎತ್ತುತ್ತಿವೆ.
ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಅಷ್ಟೇ
ಪುತ್ತೂರಿನ ಕೃಷಿಕ ರೊಬ್ಬರು ತಲೆಮಾರಿನಿಂದಲೇ ನಡೆದುಕೊಂಡು ಬಂದ ಹಾಗೂ ಕಳೆದ 25 ವರ್ಷಗಳಿಂದ ಅನಿವಾರ್ಯ ಕಾರಣಗಳಿನಿಂದ ನಿಂತು ಹೋಗಿದ್ದ ಭತ್ತದ ಕೃಷಿಯನ್ನು ಮತ್ತೆ ಆರಂಭಿಸಿದ್ದಾರೆ. ಭತ್ತದ ಕೃಷಿಗೆ ಗದ್ದೆ ಸಿಗದೇ ಹೋದಾಗ ಗುಡ್ಡವನ್ನು ಅಗೆದು ಅದನ್ನು ಗದ್ದೆಯಾಗಿ ಪರಿವರ್ತನೆ ಮಾಡಿದ್ದಾರೆ.
ಉಡುಪಿ: ಗದ್ದೆಗಿಳಿದು ವಿದ್ಯಾರ್ಥಿಗಳಿಗೆ ಕೃಷಿ ಪಾಠ ಹೇಳಿಕೊಟ್ಟ ಶಿಕ್ಷಕರು
ಪುನಃ ಭತ್ತದ ಬೇಸಾಯ ಆರಂಭಿಸಿರುವುದು ಪುತ್ತೂರು ತಾಲೂಕಿನ ಅಲಂಕಾರು ಗ್ರಾಮದ ನಾರಾಯಣ ಪೂಜಾರಿ ಅವರ ಕುಟುಂಬ. ಭತ್ತದತ್ತ ಅವರ ಮತ್ತೆ ಹೆಜ್ಜೆ ಇಟ್ಟಿದ್ದು ಹೇಗೆ? ಇಲ್ಲಿದೆ ನೋಡಿ ಮಾಹಿತಿ...
25 ವರ್ಷಗಳಿಂದ ಭತ್ತದಿಂದ ದೂರ
ಪುತ್ತೂರು ತಾಲೂಕಿನ ಅಲಂಕಾರು ಗ್ರಾಮದ ನಾರಾಯಣ ಪೂಜಾರಿಯವರದ್ದು ತರವಾಡು ಕುಟುಂಬ. ತುಳುನಾಡಿನಲ್ಲಿ ಆಚರಿಸಲ್ಪಡುವ ಎಲ್ಲಾ ಧಾರ್ಮಿಕ ಆಚರಣೆಗಳನ್ನು ಯಥಾವತ್ತಾಗಿ ಆಚರಿಸಿಕೊಂಡು ಬರುತ್ತಿದ್ದ ಕುಟುಂಬ ಇವರದ್ದಾಗಿದೆ.
ಈ ಆಚರಣೆಗೆ ಬೆನ್ನೆಲುಬಾಗಿ ನಿಂತಿದ್ದ ಭತ್ತದ ಕೃಷಿಯಿಂದ ಇವರ ಕುಟುಂಬ 25 ವರ್ಷಗಳ ಹಿಂದೆ ಅನಿವಾರ್ಯ ಕಾರಣಕ್ಕಾಗಿ ದೂರ ಸರಿದಿತ್ತು. ಆದರೆ, ಈಗ ಪುನಃ ಭತ್ತದ ಬೇಸಾಯ ಆರಂಭಿಸಿದ್ದಾರೆ.
ಗುಡ್ಡ ಕಡಿದು ಗದ್ದೆ ಮಾಡಿದರು
ನಾರಾಯಣ ಪೂಜಾರಿ ಅವರು ತಮ್ಮ ಸ್ವಂತ ಇಚ್ಛೆಯಿಂದ ಮತ್ತೆ ಭತ್ತದ ಕೃಷಿಗೆ ಅಣಿಯಾಗಿದ್ದಾರೆ. ಆದರೆ, ಗದ್ದೆ ಇದ್ದ ಎಲ್ಲಾ ಜಾಗದಲ್ಲೂ ವಾಣಿಜ್ಯ ಬೆಳೆಗಳನ್ನು ಬೆಳೆದ ಕಾರಣ ಸ್ಥಳಾವಕಾಶದ ಸಮಸ್ಯೆ ಎದುರಾಯಿತು.
ಆದ್ದರಿಂದ, ತನ್ನ ಜಮೀನಿನಲ್ಲೇ ಇದ್ದ ಗುಡ್ಡವೊಂದನ್ನು ನೆಲಸಮ ಮಾಡಿ ಗದ್ದೆ ನಿರ್ಮಿಸಿದ್ದಾರೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಗುಡ್ಡವನ್ನು ಕಡಿದು ಗದ್ದೆ ನಿರ್ಮಿಸಿರುವ ಇವರು ಜೀವಿತಾವಧಿಯವರೆಗೂ ಭತ್ತದ ಕೃಷಿಯನ್ನು ಮಾಡುವ ಛಲವನ್ನೂ ತೊಟ್ಟಿದ್ದಾರೆ.
ಸಾವಯವ ಗೊಬ್ಬರ ಬಳಕೆ
ಗದ್ದೆ ಮಾಡಿದ ಗುಡ್ಡದಲ್ಲಿ ಮರಗಿಡಗಳಿಂದ ಬಿದ್ದ ತರಗೆಲೆಗಳನ್ನು ಗೊಬ್ಬರವನ್ನಾಗಿ ಪರಿವರ್ತಿಸುವುದರ ಜೊತೆಗೆ ಮನೆಯಲ್ಲಿ ಸಾಕುವ ಜಾನುವಾರುಗಳ ಹಟ್ಟಿ ಗೊಬ್ಬರವನ್ನೇ ಭತ್ತದ ಕೃಷಿಗೆ ಬಳಸುತ್ತಿದ್ದಾರೆ. ಒಂದು ಮುಡಿ ಅಕ್ಕಿಗೆ ಸಾಕಾಗುವಷ್ಟು ಗುಡ್ಡವನ್ನು ಕಡಿದು ಗದ್ದೆ ನಿರ್ಮಿಸಿದ್ದಾರೆ.
ಭತ್ತದ ಕೃಷಿಯಲ್ಲಿ ಎಷ್ಟು ಲಾಭವಾಗುತ್ತೆ? ಎನ್ನುವ ಲೆಕ್ಕಾಚಾರವನ್ನು ಬಿಟ್ಟು ಕೇವಲ ಕೃಷಿ ಉಳಿಸಬೇಕು ಎನ್ನುವ ಒಂದೇ ಉದ್ಧೇಶಕ್ಕಾಗಿ ಈ ನಿರ್ಧಾರಕ್ಕೆ ನಾರಾಯಣ ಪೂಜಾರಿ ಬಂದಿದ್ದಾರೆ. ಗದ್ದೆಯಲ್ಲಿ ಬೆಳೆದ ಭತ್ತ ತಮ್ಮ ಆಹಾರದ ಅಗತ್ಯತೆಯನ್ನು ಪೂರೈಸುವ ಜೊತೆಗೆ ಆಹಾರ ಅರಸಿ ಬರುವ ಪ್ರಾಣಿ-ಪಕ್ಷಿಗಳಿಗೂ ಆಹಾರ ನೀಡಬೇಕೆಂಬ ಉದ್ದೇಶವೂ ಅವರದ್ದು.
ಮಿಶ್ರ ಬೇಸಾಯ ಪದ್ಧತಿ
ಪ್ರಗತಿಪರ ಕೃಷಿಕರೂ ಆಗಿರುವ ನಾರಾಯಣ ಪೂಜಾರಿ ಅವರು ಅಡಿಕೆ, ಬಾಳೆ, ತೆಂಗು ಸೇರಿದಂತೆ ವಿವಿಧ ರೀತಿಯ ಬೆಳೆಗಳನ್ನೂ ಬೆಳೆಸುತ್ತಿದ್ದಾರೆ. ಅಲ್ಲದೆ ಸಮಯಕ್ಕೆ ತಕ್ಕಂತೆ ತರಕಾರಿ ಬೆಳೆಯನ್ನೂ ಬೆಳೆಸುತ್ತಿರುವ ಇವರು ತಮ್ಮ ಮುಂದಿನ ಪೀಳಿಗೆಗೂ ಕೃಷಿಯನ್ನು ಪರಿಚಯಿಸುವ ಪ್ರಯತ್ನದಲ್ಲಿದ್ದಾರೆ.