ಕೋಟಿ-ಚೆನ್ನಯ್ಯರ ತಾಯಿಯ ವಿಗ್ರಹಕ್ಕೆ ಯುವಕನಿಂದ ಅಪಮಾನ, ಭಾರಿ ಆಕ್ರೋಶ
ಮಂಗಳೂರು, ಸೆಪ್ಟೆಂಬರ್ 10: ತುಳು ನಾಡಿನ ಕಾರ್ಣಿಕ ವೀರ ಸಹೋದರರಾದ ಕೋಟಿ ಚೆನ್ನಯರ ತಾಯಿ ದೇಯಿ ಬೈದೇದಿ ವಿಗ್ರಹಕ್ಕೆ ಯುವಕನೋರ್ವ ಅಪಮಾನ ಮಾಡಿದ ಘಟನೆ ನಡೆದಿದೆ. ಯುವಕನ ದುರ್ವರ್ತನೆಯ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಭಾರಿ ವಿರೋಧ ವ್ಯಕ್ತವಾಗಿದೆ.
ತುಳುನಾಡಿನ ವೀರ ಪುರುಷರಾದ ಕೋಟಿ-ಚೆನ್ನಯರ ಜನ್ಮಸ್ಥಳವಾದ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಪಡುಮಲೆಯಲ್ಲಿ ಕೋಟಿ-ಚೆನ್ನಯರ ತಾಯಿ ದೇಯಿ ಬೈದೇದಿ ಔಷಧೀಯ ವನವಿದೆ. ಈ ವನದಲ್ಲಿರುವ ದೇಯಿ ಬೈದೇದಿಯವರ ವಿಗೃಹಕ್ಕೆ ಯುವಕನೋರ್ವ ಅವಮಾನ ಮಾಡಿ ಅನಾಗರಿಕನಂತೆ ವರ್ತಿಸಿದ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಈಶ್ವರಮಂಗಲದ ನಿವಾಸಿ ಹನೀಫ್ ಎನ್ನುವ ಯುವಕ ಅರಣ್ಯ ಇಲಾಖೆಯು ನಿರ್ಮಿಸಿರುವ ಔಷಧೀಯ ವನದಲ್ಲಿ ನಿರ್ಮಿಸಿರುವ ದೇಯಿ ಬೈದೇದಿಯ ವಿಗೃಹದ ಪಕ್ಕದಲ್ಲಿ ಕೂತು ಎದೆಯ ಭಾಗವನ್ನು ಮುಟ್ಟುವ ಚಿತ್ರವನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ ಎಂದು ಹೇಳಲಾಗಿದೆ .
ಕೋಟಿ-ಚೆನ್ನಯ ಅವರ ಜನ್ಮಸ್ಥಳವಾದ ಪಡುಮಲೆಯನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಸುಮಾರು 5 ಕೋಟಿ ರೂಪಾಯಿಗಳನ್ನು 4 ವರ್ಷಗಳ ಹಿಂದೆಯೇ ಬಿಡುಗಡೆ ಮಾಡಿದೆ. ಇದರ ಜೊತೆಗೆ ಅರಣ್ಯ ಇಲಾಖೆಯ ತನ್ನ ಸ್ವ ಇಚ್ಛೆಯಿಂದ ಪಡುಮಲೆಯಲ್ಲಿ ದೇಯಿ ಬೈದೇದಿ ಔಷಧೀಯ ವನಗಳ ಪಾರ್ಕನ್ನು ನಿರ್ಮಾಣ ಮಾಡಿದೆ.
ದೇಯಿ ಬೈದೇದಿ ಆಗಿನ ಕಾಲದ ಪ್ರಸಿದ್ಧ ನಾಟಿ ವೈದ್ಯೆಯಾಗಿದ್ದ ಹಿನ್ನಲೆಯಲ್ಲಿ ಈ ಪಾರ್ಕನ್ನು ಪಡುಮಲೆಯಲ್ಲಿ ಅಭಿವೃಧ್ದಿ ಮಾಡಲಾಗಿದೆ. ಆದರೆ ಸಮರ್ಪಕವಾದ ನಿರ್ವಹಣೆ ಹಾಗೂ ಸೆಕ್ಯುರಿಟಿ ವ್ಯವಸ್ಥೆಯಿಲ್ಲದ ಕಾರಣ ಕೆಲ ಪುಂಡ ಪೋಕರಿ, ಕಿಡಿಗೇಡಿಗಳು ಈ ಪಾರ್ಕನ್ನು ತಮ್ಮ ಕುಚೇಷ್ಟೆಗಳ ತಾಣವನ್ನಾಗಿ ಮಾಡುತ್ತಿದ್ದಾರೆ.
ಯುವಕ ತೆಗೆಸಿಕೊಂಡಿರುವ ಈ ಚಿತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಯುವಕನ ಅನಾಗರಿಕ ವರ್ತನೆಗೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಪ್ರಮುಖವಾಗಿ ಬಿಲ್ಲವ ಸಂಘಟನೆಗಳ ಈತನ ವಿರುದ್ಧ ಕ್ರಮ ಜರುಗಿಸಲು ಆಗ್ರಹಿಸುತ್ತಿವೆ.