ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಸ್ವಚ್ಛ ಧಾರ್ಮಿಕ ಕ್ಷೇತ್ರ ಪ್ರಶಸ್ತಿ ಗರಿ
ಬೆಳ್ತಂಗಡಿ, ಅಕ್ಟೋಬರ್. 03 : ಇಂಗ್ಲೀಷ್ ಪತ್ರಿಕೆ ಇಂಡಿಯಾ ಟುಡೇ ನಡೆಸಿದ ಸಮೀಕ್ಷೆಯಂತೆ ಶ್ರೀ ಧರ್ಮಸ್ಥಳದ ಮಂಜುನಾಥ ಸುಕ್ಷೇತ್ರ ದೇಶದಲ್ಲಿಯೇ ಅತಿ ಸ್ವಚ್ಛ ಧಾರ್ಮಿಕ ಕ್ಷೇತ್ರ ಎಂಬ ಪ್ರಶಸ್ತಿಗೆ ಆಯ್ಕೆಯಾಗಿದೆ.
ಇಂಡಿಯಾ ಟುಡೇ ಪತ್ರಿಕಾ ಬಳಗದವರು ನೀಡುತ್ತಿರುವ ಪ್ರಥಮ ರಾಷ್ಟ್ರೀಯ 'ಸಫಾಯಿಗಿರಿ ಪ್ರಶಸ್ತಿ'ಯನ್ನು ಶ್ರೀಕ್ಷೇತ್ರ ಧರ್ಮಸ್ಥಳ ದೇವಸ್ಥಾನಕ್ಕೆ ನೀಡಲಾಗಿದೆ. ಈ ಸಫಾಯಿಗಿರಿ ಪ್ರಶಸ್ತಿಯನ್ನು ಭಾನುವಾರ ಹೊಸದಿಲ್ಲಿಯಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ನಗರಾಭಿವೃದ್ಧಿ ಹಾಗೂ ವಸತಿ ಸಚಿವ ಎಂ. ವೆಂಕಯ್ಯನಾಯ್ಡುವರಿಂದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಪರವಾಗಿ ಅವರ ಸಹೋದರ ಡಿ. ಹರ್ಷೆಂದ್ರ ಕುಮಾರ್ ಸ್ವೀಕರಿಸಿದರು.
ರಾಷ್ಟ್ರಾದ್ಯಂತ ಸ್ವಚ್ಛತೆಯನ್ನು ಕೈಗೊಂಡ ವಿವಿಧ ನಗರಗಳನ್ನು ವರ್ಗೀಕರಿಸಿ ಪ್ರತಿಕಾ ಬಳಗದವರು ಮಾಡಿದ ಸರ್ವೇಯಲ್ಲಿ ರಾಷ್ಟ್ರದ ಧಾರ್ಮಿಕ ನಗರಗಳ ಪೈಕಿ ಧರ್ಮಸ್ಥಳವನ್ನು ಅತ್ಯಂತ ಸ್ವಚ್ಛ ಧಾರ್ಮಿಕ ನಗರವೆಂದು ಗುರುತಿಸಿ ಈ 'ಸಫಾಯಿಗಿರಿ ಪ್ರಶಸ್ತಿ'ಯನ್ನು ನೀಡಲಾಗಿದೆ. ಸ್ವಚ್ಚತೆಯನ್ನು ಕಾಪಾಡಿ ಸಫಾಯಿಗಿರಿ ಪ್ರಶಸ್ತಿ' ಪಡೆದ ಎಲ್ಲಾ ನಗರಗಳಿಗೆ ವೆಂಕಯ್ಯ ನಾಯ್ಡು ಅಭಿನಂದನೆಗಳನ್ನು ಸಲ್ಲಿಸಿದರು.
ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ಬಚ್ಚನ್ ಅವರು ಭಾಗವಹಿಸಿದ್ದರು.